ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಂಡು ಅಧಿಕಾರ ವಿಕೇಂದ್ರಿಕರಣವಾಗಬೇಕೆಂದರೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳಿಗೆ ಏಕಕಾಲಕ್ಕೆ ಬಿ ಗ್ರೇಡ್ ಹುದ್ದೆಗೆ ಬಡ್ತಿ ನೀಡುವಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಿಸಿದ ಸಂಘದ ರಾಜ್ಯಾಧ್ಯಕ್ಷ ರಮೇಶ್ ನಡಗೇರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಲ್ಲಿ ಭಾನುವಾರ ಕರೆಯಲಾಗಿದ್ದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾವೇಶಕ್ಕೆ ದಿನಾಂಕ ನಿಗಧಿಪಡಿಸಿಕೊಂಡು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆರವರನ್ನು ಆಹ್ವಾನಿಸಿ ಬಿ ಗ್ರೇಡ್ ಹುದ್ದೆಗೆ ಉನ್ನತಿಕರಿಸುವಂತೆ ಹಕ್ಕೊತ್ತಾಯ ಮಂಡಿಸಲಾಗುವುದು. ಒಂದು ವೇಳೆ ಸರ್ಕಾರ ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯುವ ಕುರಿತು ಸಭೆಯಲ್ಲಿ ಚರ್ಚಿಸಿದರು.
೧೫೦೦ ಪಿಡಿಓ.ಗಳಿಗೆ ಈಗಾಗಲೆ ಬಡ್ತಿ ನೀಡಲಾಗಿದೆ. ಉಳಿದ ೪೧೯೪ ಪಿಡಿಓ.ಗಳಿಗೆ ಬಿ ಗ್ರೇಡ್ ಹುದ್ದೆಗೆ ಬಡ್ತಿ ನೀಡಬೇಕು. ಆಗ ಮಾತ್ರ ಆಡಳಿತ ಸುಗಮವಾಗಿ ನಡೆಯಲು ಸಾಧ್ಯ. ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ.ಸಭೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸಿ.ವೃಂದದಲ್ಲಿದ್ದೇವೆಂದು ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಪಾಲ್ಗೊಳ್ಳುವುದಿಲ್ಲ.
ಸೇವೆಯ ಜೇಷ್ಠತೆ ಮೇಲೆ ಐದು ವರ್ಷಗಳಿಗೊಮ್ಮೆ ಪಿಡಿಓ.ಗಳಿಗೆ ಬಡ್ತಿ ನೀಡಬೇಕು. ೨೦೧೦, ೧೩, ೧೮ ರಲ್ಲಿ ಸೇವೆಗೆ ಸೇರ್ಪಡೆಯಾದ ಪಿಡಿಓ.ಗಳು ಇದುವರೆವಿಗೂ ಬಡ್ತಿಯಿಲ್ಲದೆ ವಂಚಿತರಾಗಿದ್ದಾರೆ. ಅಧಿಕಾರವಧಿ ಮೀರಿ ಕೆಲಸ ಮಾಡುತ್ತಿದ್ದೇವೆ. ಬಡ್ತಿ ಎನ್ನುವುದು ನಿಂತ ನೀರಾಗಿದೆ. ಕೆಲಸಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಬಡ್ತಿ ನೀಡಬೇಕೆಂಬುದು ನಮ್ಮ ಆಗ್ರಹ. ಸರ್ಕಾರ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದಿದ್ದರೆ ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಎಲ್ಲಾ ಪಿಡಿಓ.ಗಳು ಬೆಂಬಲವಾಗಿ ನಿಲ್ಲಬೇಕೆಂದು ರಮೇಶ್ ನಡಗೇರಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತಿಕರಿಸಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ವಿಶ್ವನಾಥ್, ಖಜಾಂಚಿ ಹನುಮಂತ ಕರ್ನಕೋಟೆ, ಉಪಾಧ್ಯಕ್ಷರುಗಳಾದ ಜಯಗೌಡ ಪಾಟೀಲ್, ಶ್ರೀದೇವಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಪಿಡಿಓ. ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸೇರಿದಂತೆ ರಾಜ್ಯದ ೩೧ ಜಿಲ್ಲೆಗಳ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.

