ಮಾತಿನ ಮರ್ಮ ಅರಿತವನೆ ಧರ್ಮ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾತಿನ ಮರ್ಮ ಅರಿತವನೆ ಧರ್ಮ…
ಧರ್ಮರಾಯನು ಕಾಡಿನಲ್ಲಿ ಬಾಯಾರಿಕೆಯಿಂದ ಬಳಲಿ ತನ್ನ ತಮ್ಮರನ್ನು ಒಬ್ಬೊಬ್ಬರನ್ನಾಗಿ ನೀರು ತರಲು ಕಳಿಸಿದ ಆದರೆ ಎಷ್ಟೊತ್ತಾದರು ಅವರಲ್ಲಿ ಯಾರೊಬ್ಬರು ನೀರು ತರದ ಕಾರಣ ತಾನೇ ನೀರಿನ ಕೊಳದ ಹತ್ತಿರ  ಬಂದಾಗ ತನ್ನ ತಮ್ಮಂದಿರೆಲ್ಲಾ ಸತ್ತು ಬಿದ್ದಿರುವುದನ್ನು ನೋಡಿ ದುಃಖದಿಂದಲೇ ಮೊದಲು ನೀರು ಕುಡಿಯೋಣವೆಂದು ಕೊಳದಲ್ಲಿ ಬೊಗಸೆ ಮಾಡಿ ಕೈಹಾಕುವಾಗ
, ಯಕ್ಷ; ನಿನ್ನ ತಮ್ಮಂದಿರು ನನಗೆ ಉತ್ತರ ಹೇಳದೆ ನೀರು ಕುಡಿಯಲು ಪ್ರಯತ್ನಿಸಿದ್ದರಿಂದಲೇ ಈ ನೀರು ವಿಷವಾಗಿ ಅವರು ಸತ್ತು ಹೋದರು ನೀನು ಅಷ್ಟೇ ನನ್ನ ಪ್ರಶ್ನೆಗೆ ಉತ್ತರ ನೀಡದೆ ನೀರು ಕುಡಿದರೆ ಸಾಯುತ್ತೀಯ ಎಂದು ಹೇಳಿದ ಯಕ್ಷನ ಮಾತಿಗೆ ಧರ್ಮರಾಯನು ಸಮ್ಮತಿಸಲು ಯಕ್ಷನು ಪ್ರಶ್ನೆ ಕೇಳಲು ಆರಂಭಿಸುತ್ತಾನೆ.

 “ಭೂಮಿಗಿಂತ ದೊಡ್ಡ ವಸ್ತು ಯಾವುದು? ಆಕಾಶಕ್ಕಿಂತ ಉನ್ನತ ವಸ್ತು ಏನು?” “ಭೂಮಿಗಿಂತ ಉನ್ನತ ವಸ್ತು ತಾಯಿ, ಆಕಾಶಕ್ಕಿಂತ ಉನ್ನತವಾದವನು ತಂದೆ.
ಗಾಳಿಗಿಂತ ವೇಗವಾದುದು ಯಾವುದು? ಮಾನವನನ್ನು ಬಹಳಷ್ಟು ಕಾಡುವುದು ಏನು?” ಗಾಳಿಗಿಂತ ವೇಗವಾದುದು ಮನಸ್ಸು, ಮಾನವನನ್ನು ಬಹಳಷ್ಟು ಕಾಡುವುದು ಚಿಂತೆ.

- Advertisement - 

ಯಶಸ್ಸು ದೊರೆಯುವುದು ಯಾವುದರಿಂದ? ಸ್ವರ್ಗ ಪ್ರಾಪ್ತಿ ಯಾವುದರಿಂದ?” ದಾನದಿಂದ ಯಶಸ್ಸು, ಸತ್ಯಮಾರ್ಗದಿಂದಲೇ ಸ್ವರ್ಗ

 “ಉತ್ತಮವಾದ ಧನ ಯಾವುದು? ಅತ್ಯುತ್ತಮ ಲಾಭ ಯಾವುದು? ಅತ್ಯುತ್ತಮ ಆನಂದ ಯಾವುದು?”
ವಿದ್ಯೆಯೇ ಉತ್ತಮವಾದ ಧನ. ಆರೋಗ್ಯ ಭಾಗ್ಯವೇ ಉತ್ತಮವಾದ ಲಾಭ. ತೃಪ್ತಿಗಿಂತ ಮಿಗಿಲಾದ ಆನಂದ ಇನ್ನೊಂದಿಲ್ಲ
ನಿಂದ್ಯ ಯಾರು? ವಂದ್ಯ ಯಾರು?”  “ಪರನಿಂದಕನೇ ನಿಂದ್ಯನು; ಪರಹಿತನೇ ವಂದ್ಯನು.

- Advertisement - 

ಹೀಗೆ ಯಕ್ಷನು ಕೇಳಿದ ಅನೇಕ ಪ್ರಶ್ನೆಗಳಿಗೆ ಧರ್ಮರಾಯನು ಕೊಟ್ಟ ಉತ್ತರಗಳಿಂದ ಸಂತೋಷಗೊಂಡು ಯಕ್ಷ, ನಿನ್ನ ಉತ್ತರಗಳಿಂದ ನಾನು ಪ್ರಸನ್ನನ್ನಾಗಿದ್ದೇನೆ ಅದಕ್ಕೆ ಪ್ರಜ್ಞೆ ತಪ್ಪಿರುವ ಈ ಸೋದರರಲ್ಲಿ ಯಾರಾದರೊಬ್ಬರನ್ನು ಬದುಕಿಸಲು ಇಚ್ಛಿಸುತ್ತೇನೆ, ಹೇಳು, ಯಾರನ್ನು ಬದುಕಿಸಲಿ? ಎಂದು ಕೇಳಲು, ಧರ್ಮರಾಯನು ನಕುಲನನ್ನು ಬದುಕಿಸಿಎಂದ ಮಾತಿಗೆ ಯಕ್ಷ; ಧರ್ಮರಾಯನ ಧರ್ಮಸಮ್ಮತವಾದ  ಉತ್ತರಗಳಿಂದ ತನ್ನ ಎಲ್ಲಾ ತಮ್ಮಂದಿರ ಜೀವವನ್ನು ಕಾಪಾಡುತ್ತಾನೆ ಆದರೆ ಈ ರೀತಿ ಮಾತಿನ ಮರ್ಮಗಳನ್ನು ಅರಿಯುವುದು ನಮ್ಮಂತ ಸಾಮಾನ್ಯರಿಗೆ ತುಂಬಾ ಕಷ್ಟ.

ಈಗೆ ಒಮ್ಮೆ ನಮ್ಮೂರಿನ ಟೀಪುಸಾಬಿ ಎಂಬಾತ ನಮ್ಮ ತಂದೆಯೊಂದಿಗೆ ಯಾವಾಗಲೂ ಗೌರವದಿಂದ ಮಾಮ ಮಾಮ ಎಂದು ಮಾತನಾಡಿಸುತ್ತಿದ್ದರು. ಅವರು ನನ್ನ ಬಳಿ, ನಿಮ್ಮ ತಂದೆ-ತಾಯಿಯವರನ್ನು ನಿನ್ನ ಸಂಗಡ ಕರೆದುಕೊಂಡು ಹೋಗಿ ಅವರನ್ನು ಚೆನ್ನಾಗಿ ನೋಡಿಕೋ ಎಂದು ಬುದ್ಧಿವಾದ ಹೇಳಿದರು ಆಗ ನಾನು ಸಿಪಾಯಿಯಾಗಿ ವೆಸ್ಟ್ ಬೆಂಗಾಲ್, ಛತ್ತೀಸ್ಗಡ್, ಮಹಾರಾಷ್ಟ್ರ, ಅರುಣಾಚಲ್ ಪ್ರದೇಶ್ ಮತ್ತು ತ್ರಿಪುರ ಆದಿಯಾಗಿ ನಮ್ಮ ರಾಜ್ಯದಿಂದ ತುಂಬಾ ದೂರದಲ್ಲಿ ಒಬ್ಬಂಟಿಯಾಗಿದ್ದೆ ಅಲ್ಲಿಗೆ ನನ್ನ ತಂದೆ ತಾಯಿಯವರನ್ನು ಕರೆದುಕೊಂಡು ಹೋಗಿ ಅವರನ್ನು ನೋಡಿಕೊಳ್ಳುವ ಸ್ಥಿತಿ ನನಗಿರಲಿಲ್ಲ ಆದ್ದರಿಂದ ನಾನು ಟೀಪುಸಾಬಿ ಅವರ ಮಾತಿಗೆ, ನನ್ನ 20 ವರ್ಷ ಸರ್ವಿಸ್ ಮುಗಿದ ನಂತರ ನಿವೃತ್ತಿ ಪಡೆದು ಬಂದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಈಗ ಸಾದ್ಯವಾಗುವುದಿಲ್ಲ ಎಂದೆ. ಆ ಮಾತಿಗೆ, 20 ವರ್ಷದ ನಂತರವೆ? ಆಗ ನಿಮ್ಮಪ್ಪನ್ನಲ್ಲ; ನಿಮ್ಮಪ್ಪನ ಚಲ್ಲಣ್ಣ (ಚಡ್ಡಿ)ಯನ್ನು ಇಟ್ಕೊಂಡು ನೋಡ್ಕೋಬೇಕಷ್ಟೇ ನೀನು ಎಂದು ವ್ಯಂಗ್ಯವಾಗಿ ಕಟುವಾಗಿ ಹೇಳಿದ್ದರು.

ಆ ಮಾತಿನ ಹಿಂದಿನ ಮರ್ಮ ಆಗ ನನಗೆ ತಿಳಿಯಲಿಲ್ಲ ಆದರೆ ಕೆಲವೇ ವರ್ಷದ ನಂತರ ನನ್ನ ತಾಯಿ ತಂದೆ ತೀರಿ ಹೋದ ಮೇಲೆ ಆ ಟೀಪುಸಾಬಿ  ಮಾತಿನ ಒಳ ಮರ್ಮ ನನಗೆ ಅರಿವಾಯಿತು ಆದರೆ ಆಗ ಅರಿವಾಗಿ ಏನು ಪ್ರಯೋಜನವಿರಲಿಲ್ಲ. ಹೌದು ಏಕೆಂದರೆ ನಾನು 13 ವರುಷ ಸರ್ವಿಸ್ ಮುಗಿಸುವ ಸಮಯದೊಳಗೆ ನನ್ನ ತಂದೆ ತಾಯಿಯವರು ಇಹಲೋಕ ತ್ಯಜಿಸಿದ್ದರು.

ನಮ್ಮ ತಂದೆ ತಾಯಿಯವರು ಕೂಲಿ ನಾಲಿ ಮಾಡಿ ನಮಗೆ ಸಾಕಿದರು ಸಾಲ ಸೋಲ ಮಾಡಿ ಓದಿಸಿದರು ನಮ್ಮ ಬದುಕು ಬಂಗಾರವಾಗಲಿ ಎಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟು ಸವೆದು ಹೋದರು ಆದರೆ ಅವರ ಮಕ್ಕಳಾದ ನಾವು ಅವರು ನಮ್ಮ ಮೇಲೆ ಇಟ್ಟ ಭರವಸೆಯಂತೆ ಅವರಿಗೆ ಸರಿಯಾಗಿ ನೋಡಿಕೊಂಡಿಲ್ಲ ಎಂಬ ಕೊರಗು ಮಾತ್ರ ಯಾವಾಗಲೂ ನಮ್ಮ ಮನಸನ್ನು ನೋಯಿಸುತ್ತೆ ಕಣ್ಣನ್ನು ತೋಯಿಸುತ್ತೆ.

ನಮ್ಮ ತಂದೆ ತಾಯಿಯವರಿಗೆ ಯಾವಾಗೋ ಒಮ್ಮೆ ಸೇಬು ಹಣ್ಣು ಕೊಯ್ದು ಕೊಟ್ಟಿದ್ದೆ ದೊಡ್ಡ ಸೇವೆ ಎಂದುಕೊಂಡೆ, ಕಿತ್ತಳೆ ಹಣ್ಣು ಸಿಪ್ಪೆ ಬಿಡಿಸಿ ತೊಳೆ ಮಾಡಿ ಕೊಟ್ಟಿದ್ದೆ ದೊಡ್ಡದೆಂದುಕೊಂಡೆ, ಯಾವಾಗಲೋ ಒಮ್ಮೆ ಕಾಲ್ಬೆರಳ ಉಗುರನ್ನು ಕತ್ತರಿಸಿ ಹಾಕುವುದನ್ನು ಏನೋ ದೊಡ್ಡ ಸಾಧನೆ ಎಂದುಕೊಂಡೆ, ಅವರ ಮಬ್ಬು-ಮುಸುಕಾದ ಕನ್ನಡಕವನ್ನು ಒರೆಸಿ ಕೊಡುವುದಷ್ಟೇ ಒಳ್ಳೆ ಕೆಲಸ ಎಂದುಕೊಂಡೆ, ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಔಷಧಿಗಳನ್ನು ಕೊಡುವುದು ಮತ್ತು ಯುಗಾದಿ ಹಬ್ಬದಂದು ಚಂದಿರನನ್ನು ತೋರಿಸುವಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದೇ ನಮ್ಮ ದೊಡ್ಡ ಜವಾಬ್ದಾರಿ ಎಂದುಕೊಂಡೆ…..

ಆದರೆ ಅವರಿಗೆ ಅವಶ್ಯಕತೆ ಇರುವಾಗ ಹತ್ತಿರವಿಲ್ಲದ ಹಾಗೆ ಅವರಿಗೆ ಬೇಕಾಗಿರುವುದನ್ನು ಕೇಳಿ ಕೊಡಿಸದ ಹಾಗೆ ಅವರ ಇಳಿವಯಸ್ಸಿನಲ್ಲಿ ಅವರದೇ ಕಥೆ ಕೇಳಲು ಸಮಯ ಕೊಡದ ಹಾಗೆ… ಅವರಿಗೆ ಬರೀ ನಮ್ಮ ಮಕ್ಕಳ ಬಗ್ಗೆ ಗುಣಗಾನ ಮಾಡುವುದು ವರ್ಣನೆ ಮಾಡುವುದನ್ನೇ ಖುಷಿ ಎಂದುಕೊಂಡೆ ಕೊನೆಯಲ್ಲಿ ಅವರಿಗೆ ಬೇಕಾಗಿರುವುದೇನು ಎಂದು ತಿಳಿಯದಾದೆ ತಿಳಿದರೂ ಏನಾದರೂ ಕೊಡಿಸದಂತ ಜಿಪುಣನಾದೆ ಅನಿಸುತ್ತೆ.

ದಯವಿಟ್ಟು ಯಾರು ಇಂತಹ ತಪ್ಪು ಮಾಡದಿರಿ ಏಕೆಂದರೆ ಈಗ ನಮ್ಮ ತಂದೆ ತಾಯಿಗೆ ಅವರು ಕೇಳಿದ್ದನ್ನೆಲ್ಲ ಕೊಡಿಸುವಾಸೆ ಅವರು ಬಯಸಿದಾಗೆಲ್ಲ ಅವರಿಗೆ ಸಮಯ ಕೊಟ್ಟು ಅವರು ಬಂದ ದಾರಿಯ ಹಿಂದಿನ ಕಷ್ಟವನ್ನು ಅವರ ಅನುಭವವನ್ನು ಅವರ ಪಕ್ಕದಲ್ಲಿ ಕುಳಿತು ಕೇಳುವಾಸೆ ಈಗ ನನಗೆ ಕಾಡುತ್ತಿದೆ ಆದರೆ ಎಲ್ಲದಕ್ಕೂ ಕಾಲ ಮಿಂಚಿದೆ. ಇದ್ದಾಗ ಅರಿವಾಗದ್ದು ಇಲ್ಲದಾಗ ತುಂಬಾ ತಳಮಣಿಸುತ್ತೆ ಹೃದಯವನ್ನು ಘಾಸಿಗೊಳಿಸುತ್ತೆ.

ಅದಾಗ್ಯೂ ಈ ಕಲಿಯುಗದಲ್ಲಿ ಎಲ್ಲರೂ ಧರ್ಮರಾಯನ ತರವೇ ಆಗಬೇಕೆಂದೇನು ಇಲ್ಲ ಆದರೆ ತಮ್ಮ ತಂದೆ ತಾಯಿಯ ಮಾತಿನ ಮರ್ಮವನ್ನು ಅರಿತು ಅವರಿಗೆ ಸ್ಪಂದಿಸಿ ಶ್ರವಣ ಕುಮಾರನಂತೆ ಯಾರು ತನ್ನ ಹೆತ್ತವರ ಸೇವೆ ಮಾಡುತ್ತಾರೋ ಅವರೆಲ್ಲಾ ಕಲಿಯುಗದ ಧರ್ಮರಾಯನಂತೆ ಎಂಬುವುದೇ ನನ್ನ ಅನಿಸಿಕೆ….
ಲೇಖನ:ವೆಂಕಟೇಶ ಹೆಚ್ ಚಿತ್ರದುರ್ಗ, ನವ ದೆಹಲಿ, 7760023887, 9742933400.

 

 

Share This Article
error: Content is protected !!
";