ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕುಣಿಯಲಾರದವನಿಗೆ ನೆಲ ಡೊಂಕು” ಎಂಬ ಮಾತು ಸಿಎಂ ಸಿದ್ದರಾಮಯ್ಯ ನವರಿಗೆ ಅನ್ವಯವಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ನೇಮಕಾತಿಯತ್ತ ಗಮನಹರಿಸದೆ, ಯುವಕರಿಗೆ ದ್ರೋಹ ಬಗೆದಿರುವ ಮಹಾ ಸುಳ್ಳುಗಾರ ಸಿದ್ದರಾಮಯ್ಯನವರೇ, ಬಿಜೆಪಿಯತ್ತ ಬೆರಳು ಮಾಡುವ ಮುನ್ನ ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ನಿಮ್ಮ ಗಮನಕ್ಕೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 15 ಸಾವಿರ ಶಿಕ್ಷಕರ ನೇಮಕ, ಆರೋಗ್ಯ ಇಲಾಖೆಯಲ್ಲಿ 2022ರಲ್ಲಿ 1048 ಹುದ್ದೆಗಳು ಭರ್ತಿ, ಅಬಕಾರಿ ಇಲಾಖೆಯಲ್ಲಿ 2022ರಲ್ಲಿ 1100 ಹುದ್ದೆಗಳು ಭರ್ತಿ, ಕೆಎಂಎಫ್ ನಲ್ಲಿ 2022ರಲ್ಲಿ 487 ಹುದ್ದೆಗಳ ಭರ್ತಿ.
ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 778 ಪಿಯು ಉಪನ್ಯಾಸಕರ ಭರ್ತಿಗೆ ಕ್ರಮ, ಇಂಧನ ಇಲಾಖೆಯಲ್ಲಿ 2022ರಲ್ಲಿ 1492 ಇಂಜಿನಿಯರ್ಹುದ್ದೆಗಳ ಭರ್ತಿ. ಆರೋಗ್ಯ/ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2022ರಲ್ಲಿ 320 ಹುದ್ದೆಗಳ ಭರ್ತಿ.
ಗೃಹ ಇಲಾಖೆಯಲ್ಲಿ 2022ರಲ್ಲಿ 3484 ಕಾನ್ಸ್ಟೆಬಲ್ಹುದ್ದೆ ಭರ್ತಿ. 2021ರಲ್ಲಿ ರಾಜ್ಯದ ಮೀಸಲು ಪೊಲೀಸ್ ಪಡೆಗೆ 250 ಹುದ್ದೆಗಳ ನೇಮಕ, ತೋಟಗಾರಿಕೆ ಇಲಾಖೆಯಲ್ಲಿ 5465 ಹುದ್ದೆಗಳ ಭರ್ತಿ ಮಾಡಲಾಗಿದೆ ಎಂದು ಅಶೋಕ್ ಅಂಕಿ ಅಂಶಗಳನ್ನು ನೀಡಿದ್ದಾರೆ.
ಯುವಕರಿಗೆ ಸುಳ್ಳು ಹೇಳುವುದು, ವಂಚಿಸುವುದು, ಯಾಮಾರಿಸುವುದು ಕರ್ನಾಟಕ ಕಾಂಗ್ರೆಸ್ ಸರಕಾರದ ಜಾಯಮಾನ.! ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ತ್ವರಿತವಾಗಿ ಭರ್ತಿ ಆಗುತ್ತಿವೆ ಆದರೆ ಸರ್ಕಾರಿ ಖಾಲಿ ಹುದ್ದೆಗಳು ಭರ್ತಿ ಆಗುವುದಿಲ್ಲ.! ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿರುವ ಲೂಟಿಕೋರ ಸರ್ಕಾರಕ್ಕೆ ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಸಮಯವಿಲ್ಲ! ಎಂದು ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ಸಿದ್ದರಾಮಯ್ಯನವರೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ಒಂದು ವರ್ಷದಲ್ಲೇ 30,000 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ, ನೀವು ಈ ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಿ, ಇಲ್ಲವಾದರೆ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.

