ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನಸ್ಸಿನ ತುಂಬಾ ವಿಷವನ್ನು ತುಂಬಿಕೊಂಡಿರುವ ವ್ಯಕ್ತಿಯ ಬಾಯಿಂದ ಇನ್ನೆಂತಹ ಮಾತು ಬರಲು ಸಾಧ್ಯ? ಪ್ರಧಾನಿ ನರೇಂದ್ರ ಮೋದಿಯವರು ವಿಷ ಗುರು ಎಂದು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಟೀಕಿಸಿದ್ದಾರೆ. ಬಹುಶಃ ಶಾಶ್ವತ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮುಖಂಡರಿಗೆ ಮೋದಿ ದ್ವೇಷ ಬಿಟ್ಟು ಬೇರೆ ಯಾವ ವಿಚಾರವೂ ಮಾತನಾಡಲು ಬಾಕಿ ಉಳಿದಿಲ್ಲ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಟೀಕಾಪ್ರಹಾರ ಮಾಡಿದ್ದಾರೆ.
ಮೊದಲಿಗೆ, ಪ್ರಧಾನಿ ನರೇಂದ್ರ ಮೋದಿ ತಾನು ವಿಶ್ವಗುರು ಎಂದು ಎಲ್ಲೂ ಹೇಳಿಲ್ಲ. ಭಾರತ ದೇಶವನ್ನು ವಿಶ್ವ ಗುರು ಆಗಿಸಬೇಕು ಎಂದು ಮೋದಿಯವರು ಕರೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಮೋದಿ ದ್ವೇಷ ಈಗ ಭಾರತ ದ್ವೇಷವಾಗಿ ಪರಿಣಮಿಸಿರುವುದು ಮಾತ್ರ ದುರಂತವೇ ಸರಿ! ಎಂದು ರವಿ ದೂರಿದರು.
2004ರಿಂದ 2014ರ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಹಗರಣಗಳ ಸರಮಾಲೆಯನ್ನೇ ನಿರ್ಮಿಸಿ, ದೇಶದ ಅಭಿವೃದ್ಧಿಗೆ ವಿಷ ಉಣಿಸಿದ್ದನ್ನು ಭಾರತೀಯರು ಮರೆತಿಲ್ಲ. ಹೀಗೇ ಬಾಯಿಗೆ ಬಂದಂತೆ ಮಾತನಾಡುವುದನ್ನು ಮುಂದುವರಿಸಿದರೆ, ದೇಶಾದ್ಯಂತ ನಶಿಸುತ್ತಿರುವ ಕಾಂಗ್ರೆಸ್ ಕರ್ನಾಟಕದಲ್ಲೂ ಅಪ್ರಸ್ತುತವಾಗಲಿದೆ ಎಂದು ರವಿ ಎಚ್ಚರಿಸಿದರು.

