ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪೊಲೀಸ್ ಇಲಾಖೆ ವತಿಯಿಂದ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಐದು ಕಿಮೀ ಮ್ಯಾರಥಾನ್ ಓಟದಲ್ಲಿ 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಅವರು ಪ್ರಥಮ ಬಹುಮಾನಗಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆರಂಭವಾದ ಮ್ಯಾರಥಾನ್ ಗೆ ಚಾಲನೆ ನೀಡಿದ ಅವರು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ವತಃ ಮ್ಯಾರಥಾನ್ ನಲ್ಲಿ ಭಾಗವಹಿಸಿ ಐದು ಕಿಮೀ ಓಟದಲ್ಲಿ ಪ್ರಥಮ ಬಹುಮಾನಗಳಿಸಿದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಚಂದ್ರಕಾಂತ ಅವರು, ನಮಗೆ ಗರಿಷ್ಠ ಗುರಿಗಳಿರಬೇಕು, ಕನಿಷ್ಠ ಗುರಿಗಳಿದ್ದರೆ ಸಾಧಿಸಲಾಗದೆ ಅದರಿಂದ ವಿಮುಕ್ತರಾಗುತ್ತೇವೆ. ಆದ್ದರಿಂದ ನಮ್ಮ ಗುರಿ ಎತ್ತರದ ಸಾಧನೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಮಾರಾಟಗಾರರು 15 ರಿಂದ 35 ವರ್ಷ ವಯಸ್ಸಿನ ಯುವಜನರನ್ನು ಆಕರ್ಷಿಸಿ ಅವರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಇಂದು ನಾವು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುವುದಿಲ್ಲ, ನಮ್ಮ ನೆರೆ-ಹೊರೆಯವರು ಬಲಿಯಾಗಲು ಬಿಡುವುದಿಲ್ಲ, ಮಾದಕ ವಸ್ತು ಸಂಗ್ರಹ ಮತ್ತು ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತೇವೆ ಎಂದು ಶಪಥ ಮಾಡೋಣ ಎಂದು ಕರೆಕೊಟ್ಟರು.
ಈ ವೇಳೆ ಡಿವೈಎಸ್ಪಿ ಪಾಂಡುರಂಗ, ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷ, ಮಹಿಳಾ ಠಾಣೆ ಇನ್ಸ್ಪೆಕ್ಟರ್ ನವೀನ್, ದೊಡ್ಡಬೆಳವಂಗಲ ಠಾಣೆಯ ಕಲ್ಲಪ್ಪ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

