ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಉತ್ತರ ಕರ್ನಾಟಕದ ಕಾಶಿ ಎಂದೇ ಖ್ಯಾತಿ ಪಡೆದ ಹಂಪಿಯ ಶ್ರೀ ವಿರೂಪಾಕ್ಷನಿಗೂ ಇಂದು ಸಂಭವಿಸಿರುವ ರಕ್ತ ಚಂದ್ರಗ್ರಹಣದ ಪರಿಣಾಮ ಬಿದ್ದಿದೆ. ಗ್ರಹಣದ ಹಿನ್ನೆಲೆ ಮುಜರಾಯಿ ಇಲಾಖೆಗೆ ಸೇರಿದ ಜಿಲ್ಲೆಯ ಎಲ್ಲಾ ದೇವಸ್ಥಾನಗಳನ್ನು ಮಧ್ಯಾಹ್ನ 12 ಗಂಟೆಯ ನಂತರ ಮುಚ್ಚಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಗ್ರಹಣದ ಆಚರಣಾ ನಿಯಮಾನುಸಾರ ದೇವಸ್ಥಾನಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಗ್ರಹಣ ಮುಗಿದ ಬಳಿಕ ದೇವಸ್ಥಾನಗಳನ್ನು ಶುದ್ಧಿಗೊಳಿಸಿ ಪುನಃ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನ, ವಡಕರಾಯನ ದೇವಸ್ಥಾನ, ಜಂಬುನಾಥೇಶ್ವರ ಗುಡ್ಡದ ಜಂಬುನಾಥ ದೇವಸ್ಥಾನ, ಹೊಸೂರಮ್ಮ ದೇವಸ್ಥಾನ ಸೇರಿದಂತೆ ಎಲ್ಲಾ ಪ್ರಮುಖ ದೇವಸ್ಥಾನಗಳು ಬಂದ್ ಮಾಡಲಾಗಿದೆ.
ವಿಶೇಷವಾಗಿ ವಡಕರಾಯನ ದೇವಸ್ಥಾನದಲ್ಲಿ ನವಗ್ರಹಗಳಿಗೆ ಗ್ರಹಣದ ಸಂದರ್ಭದಲ್ಲಿ ಸಂಜೆ 4.30ರಿಂದ ವಿಶೇಷ ಪೂಜೆ, ಸಂಕಲ್ಪ ಹಾಗೂ ದಿನಾದಿ ಕಾರ್ಯಗಳು ನೆರವೇರಲಿವೆ. ಭಕ್ತರ ಸೌಲಭ್ಯಕ್ಕಾಗಿ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

