ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ರೈತಸಂಘ ನಗರದ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ರಂಗಭೂಮಿ ಕಲಾವಿದರು. ಕ್ರಾಂತಿಗೀತೆಗಳನ್ನು ಹಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೊಡು ವರವ ಭದ್ರೆ, ದಾಹ ತೀರಿಸು ರೈತರ.., ನೀರಿಗಾಗಿ ಒಂದು ಮಾತನಾಡುವಿರಾ.., ಶ್ರಮಿಕ ವರ್ಗದ ಧಾರುಣ ಕತೆಯ ಕೇಳುವಿರಾ.., ಕಾಡಿಗೆ ಕೊಡಲಿಯಿಟ್ಟು ಬೋಳು ಮಾಡಿದೆ..,
ಬೀದಿರಮ್ಮ ತಾಯಿ ಕೇಳಿ.., ನೀರೆಂಬುದು ಬಯಸಿದಾಗಲೆಲ್ಲ ಸಿಗುವ ಮಾಯಾ ವಸ್ತುವಲ್ಲ..,
ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರಿಕೋಲು.., ಗೋಧಿಯ ತೆನೆ ನೋಡಾ, ರಾಗಿಯ ತೆನೆ
ನೋಡಾ.., ಜಗತ್ತನ್ನೇ ಜಗ್ಗಿಸುತ್ತಿದೆ ಜಾಗತೀಕರಣ.., ನಮ್ಮೂರ ಭೂಮಿ ಮ್ಯಾಗ, ಬೆಳೆದೈತ
ಬೆಳೆಯ ನೋಡಾ.., ಮುಂತಾದ ಜನಪದ, ಹೋರಾಟದ ಕ್ರಾಂತಿ ಗೀತೆಗಳನ್ನು ರಂಗಭೂಮಿ ಕಲಾವಿದರಾದ ಎಂ.ಕೆ.ಹರೀಶ್, ಎಸ್.ಚನ್ನಬಸಪ್ಪ, ಡಿ.ಹೇಮಂತ್, ಹನುಮಂತಪ್ಪ, ತಿಪ್ಪೇಸ್ವಾಮಿ ಹಾಡಿ ಗಮನಸೆಳೆದರು. ತಮಟೆ, ಕಂಜರ, ಡೋಲಾಕ್, ಹಾರ್ಮೋನಿಯಂ, ತಾಳಗಳು ಸದ್ದು ಮಾಡಿದವು. ಮೇಳೈಸಿದವು.
ಹಾಡುಗಳ ಮಧ್ಯೆ ಭಾಷಣದ ಮೂಲಕ ಜಿಲ್ಲಾಡಳಿತ, ಕೇಂದ್ರ-ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಿದ ಕಲಾವಿದರು, ಇನ್ನೇರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ಎರಡು ಸರ್ಕಾರಗಳು ಬದ್ಧತೆ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ 2023ರ ಬಜೆಟ್ನಲ್ಲಿ 5,300 ಕೋಟಿ ರೂ. ಘೋಷಣೆ ಮಾಡಿದ್ದು, ಈಗ ಬಿಡುಗಡೆ ಮಾಡದಿರುವುದು ದ್ರೋಹದ ಕೆಲಸ. ಇನ್ನೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸದೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಜಿಲ್ಲೆಯ ಜನರಿಗೆ ಮಾಡುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ಭಾರತದಲ್ಲಿ 70 ವರ್ಷಕ್ಕೂ ಹೆಚ್ಚು ಕಾಲ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಬರಗಾಲವನ್ನೇ ಹೊದ್ದು ಮಲಗಿದೆ. ಇಲ್ಲಿನ ರೈತರು, ಹಳ್ಳಿ ಜನರು ಕುಡಿಯುವ ನೀರಿಗೆ ಪರಿತಪಿಸುವ ದುಸ್ಥಿತಿ ತೀವ್ರಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ಕಾರ್ಮಿಕ, ಕನ್ನಪರ, ದಲಿತ ಸೇರಿ ವಿವಿಧ ಸಂಘಟನೆಗಳು 30 ವರ್ಷಗಳ ಕಾಲ ಹೋರಾಟ ನಡೆಸಿದ ಫಲ ಯೋಜನೆ ಜಾರಿಗೊಂಡು 17 ವರ್ಷವಾಗಿದ್ದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ ಎಂದು ದೂರಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತೀವ್ರಗೊಳ್ಳಲು ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆಗೆ ಮಾಡಬೇಕು, ರಾಜ್ಯ ಸರ್ಕಾರ ಬಜೆಟ್ನಲ್ಲಿ 5 ಸಾವಿರ ಕೋಟಿ ರೂ. ಮೀಸಲಿಡಬೇಕು. ಆಗ ಮಾತ್ರ ಜಿಲ್ಲೆಯ ರೈತರ ಬದುಕು ಹಸನಲಾಗಲಿದೆ ಎಂದುಅಭಿಪ್ರಾಯಪಟ್ಟರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಾಡಿಗೆ ಅನ್ನ ಕೊಡುವ ಅನ್ನದಾತರ ಕೂಗು ಆಳುವ ಜನರ ಕಿವಿ ತಲುಪಿದರೆ ನಿಜಕ್ಕೂ ಭದ್ರೆ ಜಿಲ್ಲೆಗೆ ಹರಿಯಲಿದ್ದಾಳೆ. ಈ ನಿಟ್ಟಿನಲ್ಲಿ ರೈತರ ಚಳವಳಿಗೆ ಬಲ ತುಂಬಲು ನಾವೆಲ್ಲರೂ ಕೈಜೋಡಿಸಬೇಕು. ಕೇಂದ್ರ-ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರ ಆರೋಗ್ಯ ಕುರಿತು ವಿಚಾರಿಸುವ ಸೌಜನ್ಯವನ್ನು ಜಿಲ್ಲಾಧಿಕಾರಿ ಮಾಡಿಲ್ಲದಿರುವುದು ಸರ್ವಾಧಿಕಾರಿ ಧೋರಣೆ ಆಗಿದೆ. ಧರಣಿ ಮುಂಭಾಗದಲ್ಲಿ ಕಾರಿನಲ್ಲಿ ಸಾಗುವ ಡಿಸಿ, ಕೆಳಗಿಳಿದು ನಮ್ಮ ಕೂಗು ಏನೆಂದು ಕೇಳುವ ಮಾನವೀಯತೆ ಪ್ರದರ್ಶಿಸುತ್ತಿಲ್ಲ ಎಂದು ದೂರಿದರು.
ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಜಿಲ್ಲೆಯ ಜನರ ಬದುಕು ಅಧ್ಯಯನ ನಡೆಸಿರುವ ಎಲ್ಲ ವರದಿಗಳು ಭವಣೆ ತೆರೆದಿಟ್ಟಿವೆ. ಹನಿ ನೀರಿಗಾಗಿ ಪರಿತಪಿಸುವ ಸ್ಥಿತಿ ಎಲ್ಲರಿಗೂ ಗೊತ್ತಿದೆ. ನೀರಿಲ್ಲದೆ ಬೆಳೆಗಳು ಒಣಗಿ ಕೃಷಿಕರ ಬದುಕು ಬೀದಿಗೆ ಬಿದ್ದಿದೆ. ಇದಕ್ಕೆ ಏಕೈಕ ಪರಿಹಾರ ಭದ್ರಾ ನೀರು ಜಿಲ್ಲೆಗೆ ತುರ್ತು ಹರಿಸುವುದು. ಈ ನಿಟ್ಟಿನಲ್ಲಿ ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವೆ ಎಂದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ಈಚಘಟ್ಟ ಸಿದ್ದವೀರಪ್ಪ, ಮುಖಂಡರಾದ ರಂಗಣ್ಣ, ತಿಪ್ಪೇಸ್ವಾಮಿ, ಸಣ್ಣೀರಪ್ಪ, ಸಣ್ಣತಿಮ್ಮಣ್ಣ, ನಿಂಗಪ್ಪ, ಪ್ರಸನ್ನ, ರೆಡ್ಡಿಹಳ್ಳಿ ವೀರಣ್ಣ, ವೆಂಕಟೇಶ್, ವೀರಭದ್ರಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಜೋಗಿಮಟ್ಟಿ ಮಹೇಶಬಾಬು, ಚಳ್ಳಕೆರೆ ಬಸವರಾಜ್, ಆರ್.ಶೇಷಣ್ಣಕುಮಾರ್ ಇತರರಿದ್ದರು.
ಇಂದು ಲಂಬಾಣಿ ಶ್ರೀ ಭಾಗಿ-
ಮಾ.5ರ ಗುರುವಾರ ಬೆಳಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹದಲ್ಲಿ ಲಂಬಾಣಿ ಸಮಾಜದ ಶ್ರೀ ನಂದಮಸಂದ್ ಸೇವಾಲಾಲ್ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಸಮಾಜದ ಮುಖಂಡರು, ಭೋವಿ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

