ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಎನ್ ಹನುಮಂತೇಗೌಡ ರವರ ಜನ್ಮದಿನಾಚರಣಾ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಎನ್. ಹನುಮಂತೇಗೌಡ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಯಶೋದಮ್ಮ ಹನುಮಂತೇಗೌಡ ರವರು ಭಾಗವಹಿಸಿದ್ದರು. ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ.ಕೃಷ್ಣಮೂರ್ತಿ ಸಂಸ್ಥಾಪಕರ ಸಾಧನೆ ಬಗ್ಗೆ ಮಾತನಾಡಿ ಹನುಮಂತೇಗೌಡ ರವರು ಶಿಕ್ಷಣ ಪ್ರೇಮಿಗಳಾಗಿದ್ದರು. ಜೊತೆಗೆ ಬಡವರ ದೀನ ದಲಿತರ ಅಲ್ಪಸಂಖ್ಯಾತರ ಬಗ್ಗೆ ಅಪಾರವಾದ ಪ್ರೀತಿ ಗೌರವವನ್ನು ಹೊಂದಿದ್ದರು ಎಂದು ಹೇಳಿದರು.
ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ. ಸಿ. ಮಂಜುನಾಥ್ ಮಾತನಾಡಿ ಮನುಷ್ಯನಿಗೆ ಹುಟ್ಟು ಸಾವು ಸ್ವಾಭಾವಿಕ. ಆದರೆ ಮನುಷ್ಯ ನಿಧನದ ನಂತರವೂ ಅವರ ಸಾಧನೆಗಳನ್ನು ಜನ ಮರೆಯುವುದಿಲ್ಲ. ಹಾಗೆಯೇ ಹನುಮಂತೇಗೌಡ ರವರು ಲಾವಣ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾನ ಮಾಡಿದ್ದಾರೆ ಹಾಗೆಯೇ ನೂರಾರು ಜನ ಶಿಕ್ಷಕರು ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗೆ ಉದ್ಯೋಗ ನೀಡುವಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವುದು ಶ್ಲಾಘನೀಯ ಸೇವಾ ಕಾರ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಸೇರಿದಂತೆ ಲಾವಣ್ಯ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.

