ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಸ್ರೇಲ್ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಉಂಟಾಗಿದ್ದು ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.
ಏರ್ಪೋರ್ಟ್ನಲ್ಲಿ ಸ್ವಾಗತ:
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ವಿಮಾನಯಾನ ಸೇವೆ ರದ್ದಾಗಿದ್ದರಿಂದ ದುಬೈನಲ್ಲಿ ಬಳ್ಳಾರಿ, ಚಿತ್ರದುರ್ಗ ಮೂಲದ 54 ಜನ ಪ್ರವಾಸಿಗರು ಸಿಲುಕಿದ್ದರು. ಬಳಿಕ ವಿಮಾನದ ಮೂಲಕ ದುಬೈನಿಂದ ಕೊಚ್ಚಿಗೆ ಬಂದ ಪ್ರಯಾಣಿಕರು, ಬಳಿಕ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಹೂಗುಚ್ಛ ನೀಡಿ ಪ್ರವಾಸಿಗರನ್ನು ಸ್ವಾಗತಿಸಿ, ವಿಚಾರಿಸಿದರು.
ಪ್ರವಾಸಿಗರ ಸಂತಸ: ವಯೋವೃದ್ಧರು ಸೇರಿ ಬಳ್ಳಾರಿ, ಚಿತ್ರದುರ್ಗದ 54 ಜನ ಟ್ರಾವೆಲ್ ಏಜನ್ಸಿ ಮೂಲಕ ಫೆ.23ರಂದು ದುಬೈ ಪ್ರವಾಸ ಕೈಗೊಂಡಿದ್ದರು. ಪ್ರವಾಸಿ ಮುಗಿಸಿದ ತಂಡ ಫೆ.28ರಂದು ದುಬೈನಿಂದ 9 ಗಂಟೆಯ ವಿಮಾನದಲ್ಲಿ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮಧ್ಯೆ ಯುದ್ಧ ಆರಂಭವಾಗಿರುವುದರಿಂದ ವಿಮಾನಗಳನ್ನು ರದ್ದಾಗಿದ್ದರಿಂದ ಅಲ್ಲೇ ಸಿಲುಕಿಕೊಂಡಿದ್ದರು.
ಬಳಿಕ ಅಲ್ಲಿನ ಹೋಟೆಲ್ಗಳು ಏಕಾಏಕಿ ದರವನ್ನು ದುಪ್ಪಟ್ಟು ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ಅಲ್ಲಿಂದಲೇ ವಿಡಿಯೋ ಮಾಡಿ, ನೆರವಿಗೆ ಬರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. 4 ದಿನಗಳ ಕಾಲ ಆತಂಕದಲ್ಲಿದ್ದ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಮಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಶಾಸಕ ನಾಗೇಂದ್ರ, ಭರತ್ ರೆಡ್ಡಿ, ಸಂಸದ ತುಕರಾಂ ಅವರ ಸಹಾಯವನ್ನು ನೆನೆದು ಪ್ರವಾಸಿಗರು, ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.

