ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೊಲ್ಲಿ ಕದನ
ಸಿಡಿಯುತ್ತಿವೆ ಸುಡು ತಲೆಗಳು
ಮದ್ದು ಗುಂಡು ಮೊರೆತಗಳು
ಅಮೂರ್ತ ರಣಕೇಕೆ ಕರ್ಕಶಗಳು
ಅಟ್ಟಾಡಿಸಿವೆ ಆರ್ಭಟಗಳು.
ಜ್ಞಾನಕ್ಕೆ ಗ್ರಹಣ, ವಿವೇಕವು ವಿಕಾರಕ್ಕೆ
ಅಹಂ ಆವರಿಸಿ,ಅರಿವು ಮರಣದೆಡೆಗೆ
ಹುಚ್ಚು ಕಥೆಯ ದೈವ ಗ್ರಂಥಗಳು
ಮೌಢ್ಯಕ್ಕೆ ಮುಖಮಾಡಿ ಕುಳಿತಿವೆ.
ಕೆರಳಿರೋ ಕೋವಿ,ನೆಲಹರಿವ ಕ್ಷಿಪಣಿ
ಕೆಂಡಮಂಡಲ,ಕೊಲ್ಲಿ ರೋಧನ
ಮುಗಿಲ ಮುತ್ತುಗಳು ಧರೆಗುರುಳುತಿವೆ
ಸುಡುಗಾಡೋ ಸುಂದರ ಊರುಗಳು.
ಯುದ್ಧ ಯುದ್ಧ,ಎಲ್ಲರೂ ಸಿದ್ಧರೇ
ಜೀವಗಳು ಕೊತಕೊತ
ಹಾದಿಬೀದಿಗಳ ಹೆಣ ಮೆರವಣಿಗೆ
ಸಾವ ಸಂತೆ,ಸ್ಮಶಾನ ಸದೃಶ.
ಖುಷಿ ಕಲರವ ಬದುಕೋ ಮಾತೆಲ್ಲಿ
ಹಾರಿದ ಗುಬ್ಬಚ್ಚಿ ಗೂಡಿಗೇ ಬಂದಿಲ್ಲ
ಗಹಿ ಗಹಿಸಿವೆ,ಗೂಬೆ ರಣಹದ್ದುಗಳು
ಶಾಂತಿಯೂ ಭಯ ಭೀತವೇ.
ಏಕೀ ಹಮ್ಮು ಬಿಗುಮಾನ
ಪಾಪ ಕರ್ಮಕೆ ಪುಣ್ಯ ಬಿಕ್ಕುತಿದೆ
ಅಕ್ಷರ ಕಂದಮ್ಮಗಳ ಸಾವ ಒಡೆಯ
ಇದ್ದವನೋ ಸತ್ತು ಬಿದ್ದವನೋ
ದೊಡ್ಡವನಾರೋ ದಡ್ಡ ದೊರೆಯೇ
ಬುದ್ದಿ ನಿದ್ದೆಯ ಬಿಟ್ಟುಬಿಡು
ಹಬ್ಬಕಾಲ ಹಸಿರು ತೋರಣವೇ ಇರಲಿ
ಮನುಕುಲ ಉಳಿಸೋ ದೊಡ್ಡಣ್ಣ
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.

