ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮ್ಯಾಸಬೇಡ ಬುಡಕಟ್ಟು ಸಾಂಸ್ಕೃತಿಕವೀರ ನಾಯಕನಹಟ್ಟಿ ಶ್ರೀಗುರು ತಿಪ್ಪೇಸ್ವಾಮಿ…
ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡ ಬುಡಕಟ್ಟು ಸಾಂಸ್ಕೃತಿಕ ಮಹಿಮರಲ್ಲಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇಸ್ವಾಮಿ ಅವರು ಸಹ ಒಬ್ಬರು. ಇವರನ್ನು ಜನಪದ ಸಾಹಿತ್ಯದಲ್ಲಿ ತಿಪ್ಪೇಶ , ತಿಪ್ಪಯ್ಯ , ತಿಪ್ಪಜ್ಜ , ತಿಪ್ಪನಾಯಕ ಇತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ಮೂಲತಃ ಆಂಧ್ರದ ಶ್ರೀ ಶೈಲ ಪರಿಸರದಿಂದ ಬಂದ ನಾಯಕನಹಟ್ಟಿ ಪಾಳೆಯಗಾರರ ಸಮಕಾಲೀನ ಎಂಬ ಅಭಿಪ್ರಾಯ ಇತಿಹಾಸಕಾರರಲ್ಲಿ ಇದೆ.
ಈತ ಆಂಧ್ರದಿಂದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಗೆ ಬಂದು ನೆಲೆಸುವ ಮಾರ್ಗದಲ್ಲಿ ಆತ ಅಲ್ಲಲ್ಲಿ ತಾತ್ಕಾಲಿಕವಾಗಿ ನೆಲೆನಿಂತ ಸ್ಥಳಗಳಲ್ಲಿ ಈತನ ಆರಾಧನೆ ನಡೆಯುತ್ತಿದೆ. ಜೊತೆಗೆ ಆ ಆರಾಧನೆ ಮಾಡುತ್ತಿರುವವರು ಮೂಲತಃ ಮ್ಯಾಸಬೇಡರು ಎಂಬುದು ವಿಶೇಷ. ಅಲ್ಲದೆ ಆ ಪ್ರದೇಶಗಳಲ್ಲಿ ಮ್ಯಾಸಬೇಡರು ಎತೇಚ್ಚವಾಗಿದ್ದಾರೆ.
ನಾಯಕನಹಟ್ಟಿ ಪಾಳೆಯಗಾರರ ಜೊತೆಯಲ್ಲಿಯೆ ಇಲ್ಲಿಗೆ ಬಂದು ನೆಲೆಸಿದ ಇವರು ಕಾಯಕ ಪ್ರಜ್ಞೆಯನ್ನು ಜನರಲ್ಲಿ ಭಿತ್ತಿ ಆ ಬಗ್ಗೆ ಜಾಗೃತಿ ಮಾಡಿದವರು . ಹಾಗಾಗಿ ಇವರ ತತ್ವ ಮಾಡಿದಷ್ಟು ನೀಡುಬಿಕ್ಷೆ ಎಂಬುದಾಗಿದೆ. ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಸ್ವಾಮಿ ಅವರಿಗೆ ಸಂಬಂಧಿಸಿದ ಎರಡು ಆರಾಧನೆ ಎಡೆಗಳಿವೆ.
ಒಳಮಠ ಹಾಗೂ ಹೊರಮಠ ಎಂಬುವುಗಳೆ ಆ ಆರಾಧನೆ ಎಡೆಗಳು. ಒಳಮಠವು ಸ್ವಾಮಿಯ ಹೆಸರಲ್ಲಿ ಪೂಜೆಗೊಳ್ಳುತ್ತಿರುವ ದೇವಾಲಯ ಸ್ವರೂಪದಲ್ಲಿ ಇದೆ. ಗರ್ಭಗೃಹ , ಅಂತರಾಳ, ಮುಖಮಂಟಪ ಇದ್ದು ಸುತ್ತಲೂ ಪ್ರಾಕಾರವಿದೆ. ಮುಖ್ಯ ದ್ವಾರವು ಹಲವು ಅಂತಸ್ತುಗಳ ರಾಯಗೋಪುರವನ್ನು ಹೊಂದಿದೆ. ಈ ದೇವಾಲಯವು ವಿಜಯನಗರ ಹಾಗೂ ವಿಜಯನಗರೋತ್ತರ ಕಾಲದ ಪಾಳೆಯಗಾರ ವಾಸ್ತುಶೈಲಿಯನ್ನು ಹೊಂದಿದೆ.
ಅದೇ ರೀತಿ ಹೊರಮಠವು ತಿಪ್ಪೇಸ್ವಾಮಿಯವರ ಸಮಾಧಿ ಮಂಟಪವಾಗಿದೆ. ಇದು ಸ್ವಾಮಿಯ ಜೀವೈಕ್ಯ ಸಮಾಧಿ ಮಂಟಪವಾಗಿದೆ. ಇದನ್ನು ನಿರ್ಮಾಣ ಮಾಡಲಾದ ಕಾಲ ನಿಕರವಾಗಿ ದಾಖಲಾಗಿದೆ.
ಈ ಸಮಾಧಿ ಮಂಟಪವನ್ನು ನಿರ್ಮಿಸಿದವನು ಚಿತ್ರದುರ್ಗ ನಾಯಕ ಅರಸರ ಪ್ರಸಿದ್ಧ ದೊರೆ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ [ ಕ್ರಿ. ಶ. 1689 – 1721 ] . ಈತನ ಪ್ರಧಾನಿ ಗುಂಟನೂರು ಮಲ್ಲಪ್ಪನು ಭರಮಣ್ಣ ನಾಯಕನ ಆಜ್ಞಾನುಸಾರ ಸ್ವಾಮಿಯ ಸಮಾಧಿ ಮಂಟಪವನ್ನು ನಿರ್ಮಿಸಿದನು ಎಂಬ ಸಂಗತಿ ಚಿತ್ರದುರ್ಗ ನಾಯಕ ಅರಸರ ಮೂಲ ದಾಖಲೆಯಾದ ಚಿನ್ನದಮನೆ ರಾಮಪ್ಪನು ಬರೆದ ‘ ಚಿನ್ಮೂಲಾದ್ರಿಗಿರಿದುರ್ಗದಲ್ಲಿ ಆಳಿದ ಹಿಂದಿನ ಅರಸರುಗಳು ‘ ಎಂಬುದರಲ್ಲಿ ದಾಖಲಿಸಲಾಗಿದೆ.
18 ನೇ ಶತಮಾನದ ಪೂರ್ವದಲ್ಲಿ ಇದು ನಿರ್ಮಾಣವಾಗಿದೆ. ಈ ದೇವಾಲಯವು ಪೂರ್ಣ ಪ್ರಮಾಣದ ಹಿಂದೂ ವಾಸ್ತುಶೈಲಿಯನ್ನೆ ಹೊಂದಿದೆ. ಇದು ವಿಜಯನಗರ ವಾಸ್ತುಶೈಲಿಯ ಮಿಶ್ರಣ. ಇನ್ನು ಇಲ್ಲಿ ಸಮಾಧಿ ಮಂಟಪದ ಮಠದಲ್ಲಿ ಸ್ವಾಮಿಗೆ ಪೂಜೆ ಮಾಡುತ್ತಿರುವವರು ಮ್ಯಾಸಬೇಡರು.
ಹಾಗಾಗಿ ಈತ ಮೂಲತಃ ಮ್ಯಾಸಬೇಡ ಸಾಂಸ್ಕೃತಿಕ ಪವಾಡ ಪುರುಷ. ಚಾರಿತ್ರಿಕವಾಗಿವಾಗಿ ಹಾಗೂ ಜನಪದೀಯವಾಗಿ ಮಧ್ಯೆ ಕರ್ನಾಟಕ ಮತ್ತು ಆಂಧ್ರ ಗಡಿಭಾಗದ ತಳಸಮುದಾಯಗಳ ಆರಾಧ್ಯ ದೈವವಾಗಿರುವ ಈತನ ಇತಿಹಾಸವನ್ನು ಕೆಲವು ಪೂರ್ವಾಗ್ರಹ ಪೀಡಿತ ಇತಿಹಾಸಕಾರರು ತಪ್ಪು ತಪ್ಪಾಗಿ ತಿರುಚಿರುವುದು ಅಧ್ಯಯನದಿಂದ ಕಂಡುಬರುತ್ತದೆ. ಪಂಚಗಣಾಧೀಶ, ಹೈದರ್ – ಟಿಪ್ಪು ಸಂಬಂಧದಲ್ಲಿ ಇಲ್ಲಿನ ಹೊರಮಠ ನಿರ್ಮಾಣ , ತಿಪ್ಪೆಯ ಮೇಲೆ ಕುಣಿದಿದ್ದಕ್ಕಾಗಿ ತಿಪ್ಪೇಸ್ವಾಮಿ ಎಂಬ ಹೆಸರು ಬಂತು ಇತ್ಯಾದಿ ಸಂಗತಿಗಳು ಅಸಂಗತವಾದವುಗಳು . ನೈಜ ಇತಿಹಾಸ ಅದ್ಯಾವುದನ್ನೂ ಪುರಸ್ಕರಿಸುವುದಿಲ್ಲ..
ಲೇಖನ:ಡಾ. ಎನ್. ಎಸ್. ಮಹಂತೇಶ, ಇತಿಹಾಸ ಸಂಶೋಧಕರು, ಚಿತ್ರದುರ್ಗ.

