ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ರೇಷ್ಮೆ ಸೀರೆಗಳ ಗುಣಮಟ್ಟದ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ರೇಷ್ಮೆ ಸೀರೆಗಳ ಆನ್ಲೈನ್ನಲ್ಲಿ ಮಾರಾಟನಿಲ್ಲಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಚಿಂತನೆ ಇದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.
ವಿಧಾನಸಭೆಯಲ್ಲಿ ಮೈಸೂರು ರೇಷ್ಮೆ ಸೀರೆಗಳ ಕುರಿತು ನಡೆದ ಚರ್ಚೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರೇಷ್ಮೆ ಸೀರೆಗಳ ಮಾರಾಟ, ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಸರಳಗೊಳಿಸುವ ಸಂಬಂಧ ಶಾಸಕ ಶ್ರೀವತ್ಸ ಟಿ.ಎಸ್. ಅವರು ವಿಷಯ ಪ್ರಸ್ತಾಪಿಸಿದರು.
ಸಚಿವ ಕೆ.ವೆಂಕಟೇಶ್ ಇದಕ್ಕೆ ಉತ್ತರಿಸಿ, ಮೈಸೂರು ರೇಷ್ಮೆ ಸೀರೆಗಳಿಗೆ ಡಿಮ್ಯಾಂಡ್ ಇದೆ. ದಿನಕ್ಕೆ300 – 400 ಸೀರೆಗಳು ಉತ್ಪಾದನೆ ಆಗುತ್ತಿದೆ. ಗುಣಮಟ್ಟದ ಸೀರೆಗಳನ್ನು ತಯಾರು ಮಾಡಲಾಗುತ್ತದೆ. ಸೀರೆಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ. ಜನ ಸೀರೆ ಖರೀದಿಗೆ ಬೆಳಗ್ಗೆ 3 ಗಂಟೆಯಿಂದ ಕ್ಯೂ ನಿಲ್ತಾರೆ ಅಂತ ಶ್ರೀವತ್ಸ ಹೇಳ್ತಾರೆ. ಸೆಕೆಂಡ್ಸ್ ಸೇಲ್ ಅಂತ ಮಾರಾಟ ಮಾಡ್ತಾರೆ, ಡಿಸ್ಕೌಂಟ್ ಇರುತ್ತೆ. ಆಗ ಜನ ಕ್ಯೂನಲ್ಲಿ ನಿಲ್ತಾರೆ ಎಂದು ಸಚಿವರು ಹೇಳಿದರು.
ಸೀರೆಯಲ್ಲಿ ಡ್ಯಾಮೇಜ್ ಇದ್ದರೆ ಮಹಿಳೆಯರು ಖರೀದಿ ಮಾಡಲ್ಲ. ಹಾಗಾಗಿ ಕೈ ಮಗ್ಗದ ಮೂಲಕ ನಿಧಾನವಾಗಿ ಕ್ವಾಲಿಟಿ ಸೀರೆ ನೇಯ್ಗೆ ಮಾಡಲಾಗ್ತಿದೆ. ಕ್ವಾಲಿಟಿ ಇರೋದ್ರಿಂದ ಬೇಡಿಕೆ ಜಾಸ್ತಿ ಇದೆ. ಬೇರೆ ರಾಜ್ಯಗಳಿಂದಲೂ ಬೇಡಿಕೆ ಇದೆ. ಹೊರ ರಾಜ್ಯ, ವಿದೇಶಗಳಿಂದಲೂ ಬೇಡಿಕೆ ಇದ್ದು, ಆನ್ಲೈನ್ ಮೂಲಕ ಸೇವೆ ನಿಲ್ಲಿಸುತ್ತೇವೆ. ಸ್ಥಳೀಯವಾಗಿರುವ ಬೇಡಿಕೆಯನ್ನು ಮೊದಲು ನಿವಾರಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ ಕಳೆದ ಮೂರು ವರ್ಷಗಳಿಂದ ಒಟ್ಟು 3,10,667 ಸೀರೆಗಳು ತಯಾರಾಗಿದೆ. ಈ ಪೈಕಿ ಮಾರಾಟವಾಗಿರುವ ಸೀರೆಗಳು 3,09,659. ನಿಗಮ 2022-23ರಲ್ಲಿ 46.75 ಕೋಟಿ, 2023-24 ಸಾಲಿನಲ್ಲಿ 73.40 ಕೋಟಿ ರೂ. ಹಾಗೂ 2024-25ರಲ್ಲಿ 101.15 ಕೋಟಿ ರೂ. ಲಾಭ ಗಳಿಸಿದೆ ಎಂದು ಸಚಿವ ವೆಂಕಟೇಶ್ ಮಾಹಿತಿ ನೀಡಿದರು.
ರೇಷ್ಮೆ ನೂಲು ಘಟಕ ಮುಚ್ಚಬೇಡಿ:
ಟಿ.ನರಸೀಪುರ ರೇಷ್ಮೆ ನೂಲು ತಯಾರಿಕಾ ಘಟಕ ಮುಚ್ಚುವ ವಿಚಾರವನ್ನು ಇದೇ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿ, ಟಿ.ನರಸೀಪುರ ರೇಷ್ಮೆ ನೂಲು ತಯಾರಿಕಾ ಘಟಕ ಮುಚ್ಚಲು ಹೊರಟ ಸರ್ಕಾರದ ನಡೆ ಸರಿಯಲ್ಲ. ಟಿ.ನರಸೀಪುರದಲ್ಲಿ ರೇಷ್ಮೆ ನೂಲು ತೆಗೆಯುವ ಘಟಕ ಮುಚ್ಚಲು ಸರ್ಕಾರ ಹೊರಟಿದೆ. ಇದು ಸರಿಯಲ್ಲ. ಸರ್ಕಾರ ಇಲ್ಲಿ ಸ್ಟೇಡಿಯಂ ಮಾಡಲು ಯೋಜಿಸಿದೆ. ಸರ್ಕಾರ ತನ್ನ ತೀರ್ಮಾನ ಕೈಬಿಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಚಿವ ಬೈರತಿ ಸುರೇಶ್ ದನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ, ಸಚಿವ ಕೆ.ವೆಂಕಟೇಶ್ ಅಲ್ಲಿ ಸ್ಟೇಡಿಯಂಗೆ ಜಾಗ ಇದೆ ಅಂತ ಯಾರೋ ಸಿಎಂಗೆ ಮಿಸ್ ಗೈಡ್ ಮಾಡಿದ್ರು. ಬಳಿಕ ಅವರಿಗೆ ಅದು ಗೊತ್ತಾಗಿದೆ. ಆ ಜಾಗ ಕೊಡುವ ಚಿಂತನೆ ಕೈ ಬಿಡಲು ಸರ್ಕಾರ ತೀರ್ಮಾನ ಮಾಡಿದೆ. ಆ ಜಾಗ ಈಗ ಮಾರಾಟಕ್ಕಿಲ್ಲ. ಟಿ.ನರಸೀಪುರದ ಕೆಎಸ್ಐಸಿ ಘಟಕ ಮುಂದುವರೆಯಲಿದೆ, ಮುಚ್ಚೋದಿಲ್ಲ. ಅಲ್ಲಿ ಸ್ಟೇಡಿಯಂ ಕಟ್ಟಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಆರ್.ಅಶೋಕ್, KSICನಲ್ಲಿ ಕೆಲಸ ಮಾಡೋರಿಗೆ ವೇತನ ಸರಿಯಾಗಿಲ್ಲ. ಉತ್ತಮಲಾಭ ಮಾಡ್ತಿದೆ, ಅದರಲ್ಲಿ ಶೇ.1ರಷ್ಟು ಲಾಭವನ್ನು ಕೆಲಸ ಮಾಡೋರಿಗೆ ಕೊಡಿ. 99 ಕೋಟಿ ರೂ ಲಾಭ ಮಾಡಿದೆ, ಒಂದು ಕೋಟಿ ನೌಕರರಿಗೆ ಕೊಡಿ ಎಂದು ಆಗ್ರಹಿಸಿದರು.

