ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತೆರಿಗೆ ವಸೂಲಿ ವಿಚಾರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿ ಮನೆಯ ಪೂರಕ ಕಟ್ಟಡಕ್ಕೂ ತೆರಿಗೆ ವಿಧಿಸಲಾಗಿದೆ.
ಇದುವರೆಗೂ ಅಂದಾಜು 46 ಸಾವಿರ ಮನೆ ಮಾಲಿಕರಿಂದ ಟ್ಯಾಕ್ಸ್ ಸಂಗ್ರಹಕ್ಕೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷದವರೆಗೂ ಹೆಚ್ಚವರಿ ತೆರಿಗೆ ವಸೂಲಿಗೆ ಮೆಸೇಜ್ ಮೂಲಕ ನೋಟಿಸ್ ನೀಡಿದೆ.
ಮೆಸೇಜ್ ಓಪನ್ ಮಾಡಿದ್ರೆ ನೋಟಿಸ್ ಸ್ವೀಕರಿಸಲಾಗಿದೆ ಎಂದೇ ಭಾವಿಸಿ ಕ್ರಮಕ್ಕೆ ಮುಂದಾಗಲಿರುವ ಜಿಬಿಎ ಹೆಚ್ಚುವರಿ ತೆರಿಗೆ ಪ್ರಶ್ನೆ ಮಾಡಿದವರ ಮನೆಯನ್ನೇ ಹರಾಜಿಗೆ ಮುಂದಾಗಿದೆ.
17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದ್ದು, ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಲಾಗಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಚರ್ಚೆ-
ಬೆಂಗಳೂರಿನಲ್ಲಿ ಮನೆಗಳಿಗೆ ಡ್ರೋನ್ ಸರ್ವೆ ನಡೆಸಿ ಬಾಕಿ ಹೆಚ್ಚುವರಿ ತೆರಿಗೆ, ದಂಡ ವಿಧಿಸಲಾಗುತ್ತಿದೆ. ಒಂದು ಮನೆಗೆ 7-8 ಲಕ್ಷ, 30 ಲಕ್ಷದವರೆಗೆ ತೆರಿಗೆ, ದಂಡ ಹಾಕ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಸ್ತಾಪಿಸಿದ್ದಾರೆ.
ರಾಮಮೂರ್ತಿ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕರ ಸುರೇಶ್ ಕುಮಾರ್, ಇದು ಆಸ್ತಿ ತೆರಿಗೆ ಭಯೋತ್ಪಾದನೆ. ಇದನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿ, ನಾವು ಡ್ರೋನ್ ಸರ್ವೇ ನಡೆಸಿ ಯಾವುದೇ ನೋಟಿಸ್ ಕೊಡ್ತಿಲ್ಲ.
ಆದ್ರೆ ಡ್ರೋನ್ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಮೊದಲು ಸೆಲ್ಫ್ ಅಸೆಸ್ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್ಮೆಂಟ್ ಸ್ಕೀಂ ಕೂಡಾ ಕೊಡುತ್ತಿದ್ದೇವೆ. ಈ ಬಗ್ಗೆ ಯಾರಿಗಾದ್ರೂ ಸಮಸ್ಯೆ ಇದ್ರೆ ಅರ್ಜಿ ಕೊಡಲಿ. ಸಮಸ್ಯೆ ಇದ್ದವರಿಗೆ ಸರಿಪಡಿಸ್ತೇವೆಂದು ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ.

