ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಲಲಿತ ಕೈಗಾರಿಕಾ ಸಂಸ್ಕೃತಿಗೆ ಮತ್ತಷ್ಟು ವೇಗ – ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಶಕ್ತಿಕೇಂದ್ರವಾಗಿಸುವ ದಿಟ್ಟ ಹೆಜ್ಜೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ Confederation of Indian Industry (CII) ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಕೈಗಾರಿಕಾ ವಲಯದ ಭವಿಷ್ಯದ ಕುರಿತು ಮಹತ್ವದ ಸಂದೇಶ ಹಂಚಿಕೊಂಡೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ‘ಸುಲಲಿತ ಕೈಗಾರಿಕಾ ಸಂಸ್ಕೃತಿ’ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಉದ್ಯಮಿಗಳನ್ನು ಒಳಗೊಂಡ ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಲಾಗುವುದು. ಕೈಗಾರಿಕೆಗಳಿಗೆ ಎದುರಾಗುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರಕುವಂತೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವುದು ನಮ್ಮ ಗುರಿ.
ಇದೇ ವೇಳೆ ದಕ್ಷ ಕೈಗಾರಿಕಾ ನೀತಿ, ಏಕಗವಾಕ್ಷಿ ವ್ಯವಸ್ಥೆ, ಇಂಧನ ನೀತಿ, ಚಾಟ್ಬಾಟ್ ಹಾಗೂ ಏಕೀಕೃತ ಸೇವಾ ಜಾಲದಂತಹ ಉಪಕ್ರಮಗಳ ಮೂಲಕ ಕರ್ನಾಟಕವನ್ನು ಹೂಡಿಕೆದಾರರ ವಿಶ್ವಾಸದ ಕೇಂದ್ರವನ್ನಾಗಿಸಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
2026-27ರ ಬಜೆಟ್ನಲ್ಲಿ ಘೋಷಿಸಿರುವ K-Quest, ವಿಜ್ಞಾನ ನಗರ, CATS (ಸೆಂಟರ್ ಫಾರ್ ಅಪ್ಲೈಡ್ ಎಐ ಫಾರ್ ಟೆಕ್-ಸೊಲ್ಯೂಷನ್ಸ್) ಮುಂತಾದ ಯೋಜನೆಗಳು, ಹಾಗೂ ಕೃತಕ ಬುದ್ಧಿಮತ್ತೆ (AI) ನವೋದ್ಯಮ ಕ್ಷೇತ್ರಕ್ಕೆ ಹೊಸ ವೇಗ ನೀಡಲಿವೆ. ಜೊತೆಗೆ ಸೆಮಿಕಂಡಕ್ಟರ್ ಪಾರ್ಕ್, ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್, ಕ್ವಾಂಟಂ ಸಿಟಿ ಹಾಗೂ AI ಸಿಟಿ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಮತ್ತು ಕೈಗಾರಿಕಾ ಶಕ್ತಿಕೇಂದ್ರವಾಗಿಸುವ ಸಂಕಲ್ಪ ನಮ್ಮದಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಅಧ್ಯಕ್ಷ ಥಾಮನ್ ಜಾನ್ ಮುತ್ತೂಟ್, ಸಿಐಐ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಶ್ರೀಕಂಠನ್, ಉಪಾಧ್ಯಕ್ಷ ಗುರುಪ್ರಸಾದ್ ಮೂಡಲಾಪುರ ಮುಂತಾದವರು ಉಪಸ್ಥಿತರಿದ್ದರು.

