ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಜಲ ಮಿಷನ್ ಯೋಜನೆ ಅವನತಿಯತ್ತ…? ಹರ್ ಘರ್ ಜಲ್ ಘೋಷಣೆ… ಆದರೆ ಹಲವಾರು ಗ್ರಾಮಗಳಲ್ಲಿ ಖಾಲಿ ಟ್ಯಾಪ್!. ಕೋಟಿ ಕೋಟಿ ವೆಚ್ಚ ಮಾಡಿದರೂ ಗ್ರಾಮಗಳಿಗೆ ನೀರು ಪೂರೈಕೆ ನಿರೀಕ್ಷೆ! ಶೂನ್ಯವಾಗಿದೆ. ಹಣಕ್ಕಾಗಿ ಅಧಿಕಾರಿಗಳು ಪೈಪ್ ಹಾಕಿದ್ರು, ಟ್ಯಾಂಕ್ ಕಟ್ಟಿದ್ರು… ನೀರು ಮಾತ್ರ ಕಾಣುತ್ತಿಲ್ಲ?. ಯೋಜನೆ ಅರ್ಧದಲ್ಲೇ ನಿಂತಿದ್ದು ಪ್ರಚಾರ ಮಾತ್ರ ಪೂರ್ಣ!ಗೊಂಡಿದೆ. ಕಾಗದದಲ್ಲಿ ಯಶಸ್ಸು ಕಂಡಿರುವ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಇಂಜಿನಿಯರ್ ಗಳು ನೆಲಮಟ್ಟದಲ್ಲಿ ನೀರಿನ ದಾಹ! ಹಾಗೆ ಉಳಿಸಿದ್ದಾರೆ.
ಕೇಂದ್ರದ ಜಲ ಜೀವನ್ ಮಿಷನ್ಗೆ ಭಾರೀ ವೆಚ್ಚ ಮಾಡಿದರೂ ಜನರಿಗೆ ಇನ್ನೂ ನೀರಿನ ಕಷ್ಟ! ತಪ್ಪಿಲ್ಲ. ಪೋಸ್ಟರ್ನಲ್ಲಿ ನೀರಿನ ಹೊಳೆ ಹರಿಸಿರುವ ಇಂಜಿನಿಯರ್ ಗಳು ಗ್ರಾಮಗಳಲ್ಲಿ ನೀರಿಗಾಗಿ ಸಾಲು ಸಾಲಾಗಿ ನಿಂತಿರುವ ಬಕೆಟ್ ಕಣ್ಣೆತ್ತಿ ನೋಡುತ್ತಿಲ್ಲ!.
ಅಂಕಿಅಂಶಗಳಲ್ಲಿ ಸಾಧನೆ ಮಾಡಿರುವ ಅಧಿಕಾರಿ ವರ್ಗ… ಆದರೆ ಗ್ರಾಮಗಳಲ್ಲಿ ಪ್ರಶ್ನೆ! ಹಾಗೆ ಇದೆ. ಜಲ ಜೀವನ್ ಮಿಷನ್ ಯೋಜನೆ ದೊಡ್ಡದು… ಫಲಿತಾಂಶ ಇನ್ನೂ ಅಪೂರ್ಣ!. ಪ್ರಚಾರದ ಗದ್ದಲ… ಆದರೆ ಜನರಿಗೆ ಇನ್ನೂ ನೀರಿನ ದಾಹ! ತೀರುತ್ತಿಲ್ಲ ಹೇಗಿದೆ ಅಧಿಕಾರಿಗಳು ಕಾರುಬಾರು.
ದೇಶದ ಪ್ರತಿಯೊಂದು ಗ್ರಾಮೀಣ ಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸಬೇಕು ಎಂಬ ಮಹತ್ವಾಕಾಂಕ್ಷಿ ಗುರಿಯೊಂದಿಗೆ “ಹರ್ ಘರ್ ಜಲ್” ಎಂಬ ಘೋಷಣೆಯಡಿ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಆರಂಭಿಸಿತು. ಯೋಜನೆಯ ಉದ್ದೇಶ ಶ್ಲಾಘನೀಯ. ದಶಕಗಳಿಂದ ಕುಡಿಯುವ ನೀರಿಗಾಗಿ ಹೋರಾಡುತ್ತಿರುವ ಗ್ರಾಮೀಣ ಭಾರತಕ್ಕೆ ಇದು ದೊಡ್ಡ ನಿರೀಕ್ಷೆಯಾಗಿ ಕಾಣಿಸಿಕೊಂಡಿತ್ತು.
ಆದರೆ ಕಾಲ ಕಳೆದಂತೆ ನೆಲಮಟ್ಟದಲ್ಲಿ ಕಾಣಿಸುತ್ತಿರುವ ವಾಸ್ತವ ಸ್ಥಿತಿ ಒಂದು ದೊಡ್ಡ ಪ್ರಶ್ನೆಯನ್ನು ಎಬ್ಬಿಸುತ್ತಿದೆ. ಕೇಂದ್ರ ಜಲ ಜೀವನ್ ಮಿಷನ್ ಯೋಜನೆ ತನ್ನ ಗುರಿಯತ್ತ ಸಾಗುತ್ತಿದೆಯೇ? ಅಥವಾ ಅವನತಿಯತ್ತ ಸಾಗುತ್ತಿರುವುದೇ? ಎನ್ನುವ ಪ್ರಶ್ನೆ ಎದ್ದಿದೆ.
ದೇಶದ ಅನೇಕ ಗ್ರಾಮಗಳಲ್ಲಿ ಪೈಪ್ ಲೈನ್ಗಳನ್ನು ಹಾಕಲಾಗಿದೆ. ದೊಡ್ಡ ನೀರಿನ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಆದರೆ ಹಲವೆಡೆ ಪೈಪ್ ಇದ್ದರೂ ನೀರು ಹರಿಯುತ್ತಿಲ್ಲ, ಟ್ಯಾಂಕ್ ಇದ್ದರೂ ನೀರು ತುಂಬುತ್ತಿಲ್ಲ, ಕೆಲಸ ಅರ್ಧದಲ್ಲೇ ನಿಂತಿದೆ. ಇನ್ನೂ ಮುಖ್ಯ ವಿಷಯ ಎಂದರೆ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಅಗೆದಿರುವ ಗುತ್ತಿಗೆದಾರರು, ರಸ್ತೆ ದುರಸ್ತಿ ಮಾಡುತ್ತಿಲ್ಲ, ಆದರೆ ನಿರ್ವಹಣೆ ಹೊತ್ತಿರುವ ಇಲಾಖೆ ಇಂಜಿನಿಯರ್ ಗಳು ಮಾತ್ರ ಎಲ್ಲ ಬಿಲ್ ನೀಡಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಯೋಜನೆ ಸಂಪೂರ್ಣವಾಗಿ ಕಾರ್ಯಗತವಾಗುವ ಮೊದಲೇ ಭಾರೀ ಪ್ರಮಾಣದ ಪ್ರಚಾರ ಅಭಿಯಾನಗಳು ಆರಂಭವಾಗಿವೆ. ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಜಾಹೀರಾತುಗಳು, ಪೋಸ್ಟರ್ಗಳು, ಕಾರ್ಯಕ್ರಮಗಳ ಮೂಲಕ ಯೋಜನೆಯ ಯಶಸ್ಸನ್ನು ಘೋಷಿಸುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ ಗ್ರಾಮೀಣ ಭಾರತದಲ್ಲಿ ಇನ್ನೂ ಬೇಸಿಗೆಯ ಕಾಲ ಬಂದರೆ ಮಹಿಳೆಯರು ಬಕೆಟ್ ಹಿಡಿದು ದೂರದ ಬಾವಿಗಳ ಬಳಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಅಳಿದು ಹೋಗಿಲ್ಲ. ಅನೇಕ ಊರುಗಳು ಇನ್ನೂ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ.
ಪ್ರಶ್ನೆ ಬಹಳ ಸರಳ?:
ಕೇಂದ್ರದ ಜಲ ಜೀವನ್ ಮಿಷನ್ ಯೋಜನೆ ಇನ್ನೂ ಸಂಪೂರ್ಣವಾಗದಿದ್ದರೆ ಯಶಸ್ಸಿನ ಘೋಷಣೆ ಏಕೆ?
ಜನರಿಗೆ ಬೇಕಾಗಿರುವುದು ಪ್ರಚಾರವಲ್ಲ. ಅವರಿಗೆ ಬೇಕಾಗಿರುವುದು ನಿಜವಾದ ನೀರಿನ ಸರಬರಾಜು. ಟ್ಯಾಪ್ ಹಾಕಿದರೆ ಸಾಕಾಗುವುದಿಲ್ಲ. ಆ ಟ್ಯಾಪ್ನಲ್ಲಿ ಪ್ರತಿದಿನ ಶುದ್ಧ ನೀರು ಹರಿಯಬೇಕು.
ಸರ್ಕಾರಗಳು ಅಂಕಿಅಂಶಗಳಿಗಿಂತ ನೆಲಮಟ್ಟದ ಸತ್ಯವನ್ನು ಗಮನಿಸುವುದು ಅತ್ಯಗತ್ಯ. ಅರ್ಧಂಬರ್ಧವಾಗಿ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಿರ್ಮಿಸಿದ ವ್ಯವಸ್ಥೆಗಳು ನಿಜವಾಗಿಯೂ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು.

ಯಾಕೆಂದರೆ ಕುಡಿಯುವ ನೀರು ಯಾವುದೇ ರಾಜಕೀಯ ಘೋಷಣೆ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. “ಹರ್ ಘರ್ ಜಲ್” ಎಂಬ ಘೋಷಣೆ ನಿಜವಾಗಬೇಕಾದರೆ ಪ್ರಚಾರದ ಪೋಸ್ಟರ್ಗಳಲ್ಲಿ ಅಲ್ಲ, ಪ್ರತಿ ಮನೆಯ ಟ್ಯಾಪ್ನಲ್ಲಿ ನಿಜವಾಗಿಯೂ ನೀರು ಹರಿಯಬೇಕು.
ಲೇಖನ-ಶ್ರೀನಿವಾಸ್ ಕೆ.ಟಿ, ಸಮಾಜ ಚಿಂತಕ.

