ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮೀಣ ಭಾರತದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್‘ ಯೋಜನೆಯನ್ನು 2028ರವರೆಗೆ ವಿಸ್ತರಿಸಿ, ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳ ಅನುದಾನ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ರವರಿಗೆ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ದೇಶದ ಪ್ರತಿ ಮನೆ ಅಂಗಳಕ್ಕೆ ನಲ್ಲಿ ಮೂಲಕ ನೀರು ತಲುಪಿಸಬೇಕೆಂಬ ಹೆಮ್ಮೆಯ ಪ್ರಧಾನಿಗಳ ಬದ್ಧತೆ ಅಚಲವಾಗಿದೆ. ಕೇವಲ 6 ವರ್ಷಗಳಲ್ಲಿ ದೇಶದ ಶೇ. 82 ರಷ್ಟು ಮನೆಗಳಿಗೆ ಶುದ್ಧ ನಲ್ಲಿ ನೀರು ಒದಗಿಸಿರುವುದು ಒಂದು ಐತಿಹಾಸಿಕ ಸಾಧನೆಯಾಗಿದ್ದು, ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ಈ ಅಗತ್ಯ ಅವಧಿ ವಿಸ್ತರಣೆ ಮತ್ತು ಅನುದಾನ, ರಾಷ್ಟ್ರದ ಕಟ್ಟಕಡೆಯ ವ್ಯಕ್ತಿಗೆ ತನ್ನ ಮನೆಗೆ ನಲ್ಲಿ ನೀರು ತಲುಪುವ ಖಚಿತತೆ ಮತ್ತು ಭರವಸೆ ನೀಡಿದೆ. ಏಕೆಂದರೆ ಇದು ಮೋದಿಜೀ ಗ್ಯಾರಂಟಿ! ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ನಮ್ಮ ತಾಯಂದಿರ ಮತ್ತು ಸೋದರಿಯರ ದಶಕಗಳ ಕಾಲದ ನೀರಿನ ಬವಣೆಯನ್ನು ನೀಗಿಸಲು ಕೇಂದ್ರದ ಎನ್ ಡಿಎ ಸರ್ಕಾರ ತೋರುತ್ತಿರುವ ಈ ಬದ್ಧತೆ ಮತ್ತು ವಿಶೇಷ ಆಸಕ್ತಿ ಸ್ತುತ್ಯರ್ಹ. ಜಲ ಜೀವನ್ ಮಿಷನ್ ಕೇವಲ ಒಂದು ಯೋಜನೆಯಲ್ಲ, ಇದು ವಿಶೇಷವಾಗಿ ದೇಶದ ಗ್ರಾಮೀಣ ಜನರ ಘನತೆಯ ಬದುಕಿನ ದಾರಿಯಾಗಿದೆ. ಯೋಜನೆಯ ಒಟ್ಟು ವೆಚ್ಚ 8.69 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ವಿಕಸಿತ ಭಾರತದ ನಿರ್ಮಾಣದಲ್ಲಿ ಗ್ರಾಮೀಣ ಜನರ ಸೌಕರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ಮತ್ತು ನಾಯಕತ್ವಕ್ಕೆ ವಿಜಯೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.

