ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾವಿರಾರು ಕೋಟಿ ಘೋಷಣೆ… ಜನರಿಗೆ ಎರಡು ಫಲಾನುಭವಿಗಳು ಮಾತ್ರ! ಸಮಾಜ ಕಲ್ಯಾಣದ ಹೆಸರಿನಲ್ಲಿ ನಡೆಯುತ್ತಿರುವ ದೊಡ್ಡ ಮೋಸ”.
“ಬಜೆಟ್ನಲ್ಲಿ ಸಾವಿರಾರು ಕೋಟಿ… ನೆಲಮಟ್ಟದಲ್ಲಿ ಶೂನ್ಯ! ಸಮಾಜ ಕಲ್ಯಾಣದ ಸತ್ಯವನ್ನು ಕೇಳುವ ಸಮಯ ಬಂದಿದೆ”
“ನಿಗಮಗಳಿಗೆ ಕಾರು-ಬಂಗಲೆ, ಬಡವರಿಗೆ ಖಾಲಿ ಭರವಸೆ! ಸಮಾಜ ಕಲ್ಯಾಣದ ರಾಜಕೀಯ ನಾಟಕ”. “ಸಮಾಜ ಕಲ್ಯಾಣವೇ ಅಥವಾ ರಾಜಕೀಯ ಹುದ್ದೆಗಳ ಕಾರ್ಖಾನೆ?”. “ಸಾವಿರಾರು ಕೋಟಿ ಬಜೆಟ್… ಸಾವಿರಾರು ಅರ್ಜಿಗಳು… ಆದರೆ ಫಲಾನುಭವಿಗಳು ಎರಡು! ಇದು ನ್ಯಾಯವೇ?”.
“ಜನರ ತೆರಿಗೆ ಹಣ ಯಾರ ಜೇಬಿಗೆ? ಸಮಾಜ ಕಲ್ಯಾಣದ ಹೆಸರಿನಲ್ಲಿ ನಡೆಯುತ್ತಿರುವ ಆಟ ಬಯಲು”. “ಸಾವಿರಾರು ಕೋಟಿ ಘೋಷಣೆ… ಆದರೆ ಜನರಿಗೆ ಎರಡು ಫಲಾನುಭವಿಗಳು ಮಾತ್ರವೇ? ಸಮಾಜ ಕಲ್ಯಾಣದ ಹೆಸರಿನಲ್ಲಿ ನಡೆಯುತ್ತಿರುವ ಘನಂದಾರಿ ರಾಜಕೀಯದ ನಿಜ ಮುಖ!”.
ಸರ್ಕಾರಗಳು ಪ್ರತಿವರ್ಷ ಬಜೆಟ್ ಮಂಡಿಸುವಾಗ ಸಮಾಜ ಕಲ್ಯಾಣ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ ಎಂದು ಘೋಷಣೆ ಮಾಡುತ್ತವೆ.
ಆ ಘೋಷಣೆಗಳು ಕೇಳಿದಾಗ ಸಾಮಾನ್ಯ ಜನರಿಗೆ ವಿಶೇಷವಾಗಿ ಬಡ ಹಾಗೂ ಹಿಂದುಳಿದ ಸಮುದಾಯಗಳಿಗೆ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಮೂಡುತ್ತದೆ.
ಆದರೆ ವಾಸ್ತವದಲ್ಲಿ ನೆಲಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಒಮ್ಮೆ ಗಂಭೀರವಾಗಿ ಪರಿಶೀಲಿಸಿದರೆ, ಈ ಸಾವಿರಾರು ಕೋಟಿಗಳ ಘೋಷಣೆಗಳ ಹಿಂದೆ ಇರುವ ಸತ್ಯ ಅಷ್ಟು ಸುಂದರವಾಗಿಲ್ಲ.
ಪ್ರತಿ ಜಾತಿಗೆ ಪ್ರತ್ಯೇಕ ನಿಗಮ ಮಂಡಳಿಗಳು. ಆ ನಿಗಮಗಳಿಗೆ ಒಬ್ಬ ಅಧ್ಯಕ್ಷರು, ಕಚೇರಿ, ಆಡಳಿತ ಮಂಡಳಿ, ಸಿಬ್ಬಂದಿ, ಕಾರು, ಬಂಗಲೆ, ಲಕ್ಷಗಟ್ಟಲೆ ಸಂಬಳ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಅನೇಕ ಸೌಲಭ್ಯಗಳು. ಈ ಎಲ್ಲ ಖರ್ಚುಗಳೂ ಜನಸಾಮಾನ್ಯರ ತೆರಿಗೆ ಹಣದಿಂದಲೇ ನಡೆಯುತ್ತಿವೆ.
ಆದರೆ ಪ್ರಶ್ನೆ ಏನೆಂದರೆ ಈ ನಿಗಮಗಳು ನಿಜವಾಗಿಯೂ ಆ ಸಮುದಾಯದ ಸಾವಿರಾರು ಬಡ ಜನರ ಬದುಕನ್ನು ಬದಲಾಯಿಸಿದ್ದಾವೆ?.
ಒಂದು ವಿಧಾನಸಭಾ ಕ್ಷೇತ್ರವನ್ನು ತೆಗೆದುಕೊಂಡರೆ, ಪ್ರತಿಯೊಂದು ಜಾತಿಯಿಂದ ಸಾವಿರಾರು ಅರ್ಜಿಗಳು ಸರ್ಕಾರದ ವಿವಿಧ ಯೋಜನೆಗಳಿಗೆ ಹೋಗುತ್ತವೆ. ಆದರೆ ಅಂತಿಮವಾಗಿ ಆಯ್ಕೆಯಾಗುವ ಫಲಾನುಭವಿಗಳು ಎಷ್ಟು? ಕೆಲವೊಮ್ಮೆ ಒಂದು ಜಾತಿಗೆ ಒಂದೇ ಅಥವಾ ಎರಡು ಜನ ಮಾತ್ರ!.
ಸಾವಿರಾರು ಅರ್ಜಿಗಳು ಹೋಗಿ, ಸಾವಿರಾರು ಕೋಟಿ ಬಜೆಟ್ ಘೋಷಣೆ ಆಗಿ, ಅಂತಿಮವಾಗಿ ಎರಡು ಫಲಾನುಭವಿಗಳು ಮಾತ್ರ ಸಿಗುವಂತಹ ವ್ಯವಸ್ಥೆಯನ್ನು ನಾವು ಸಮಾಜ ಕಲ್ಯಾಣ ಎಂದು ಕರೆಯಬಹುದೇ?.
ಇದಕ್ಕಿಂತ ವಿಚಿತ್ರವೆಂದರೆ, ರಸ್ತೆ ರಸ್ತೆಗಳಲ್ಲಿ ದೊಡ್ಡ ದೊಡ್ಡ ಪ್ರಕಟಣಾ ಫಲಕಗಳು “ಸಾವಿರಾರು ಕೋಟಿ ಸಮಾಜ ಕಲ್ಯಾಣಕ್ಕೆ” ಎಂದು ಘೋಷಣೆ. ಆದರೆ ನೆಲಮಟ್ಟದಲ್ಲಿ ಆ ಹಣದ ಸ್ಪರ್ಶವೇ ಇಲ್ಲದ ಸಾವಿರಾರು ಜನರು ನಿರಾಶೆಯಿಂದ ನೋಡುತ್ತಲೇ ಉಳಿಯುತ್ತಾರೆ.
ಹೀಗಾದರೆ ಈ ಎಲ್ಲ ವ್ಯವಸ್ಥೆಯ ಮೂಲ ಉದ್ದೇಶವೇನು?
ಬಡವರ ಜೀವನದಲ್ಲಿ ಬದಲಾವಣೆ ತರಲೋ … ಅಥವಾ ನಿಗಮಗಳ ಹೆಸರಿನಲ್ಲಿ ರಾಜಕೀಯ ಹುದ್ದೆಗಳು ಸೃಷ್ಟಿಸಿ ಕೆಲವರಿಗೆ ಸೌಲಭ್ಯ ನೀಡುವ ಉದ್ದೇಶನಾ?.
ಜನರ ತೆರಿಗೆ ಹಣದಿಂದ ನಡೆಯುವ ಪ್ರತಿಯೊಂದು ಯೋಜನೆಗೂ ಜನರಿಗೆ ಲಾಭವಾಗಬೇಕು. ಆದರೆ ಇಂದು ನಾವು ನೋಡುವ ವ್ಯವಸ್ಥೆಯಲ್ಲಿ, ಲಾಭವು ಸಾವಿರಾರು ಜನರಿಗೆ ತಲುಪುವುದಕ್ಕಿಂತ ಕೆಲವೇ ಮಂದಿಗೆ ಸೀಮಿತವಾಗಿರುವುದು ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ.
ಇಂದು ಜನರು ಕೇಳುತ್ತಿರುವ ಸರಳವಾದ ಪ್ರಶ್ನೆ ಏನೆಂದರೆ: ಇದುವರೆಗೂ ಸಮಾಜ ಕಲ್ಯಾಣ ಇಲಾಖೆಯ ಮೂಲಕ ನೀವು ಮಾಡಿದ “ಘನಂದಾರಿ ಸಾಧನೆ” ಯಾವುದು?.
ಸಾವಿರಾರು ಕೋಟಿ ಘೋಷಣೆಗಳ ಫಲವಾಗಿ ಎಷ್ಟು ಸಾವಿರ ಕುಟುಂಬಗಳ ಜೀವನ ಬದಲಾಗಿದೆ?. ನಿಗಮಗಳ ಖರ್ಚಿಗೆ ಹೋಗುತ್ತಿರುವ ಹಣಕ್ಕಿಂತ ಜನರಿಗೆ ತಲುಪುವ ಹಣ ಎಷ್ಟು?.
ಸಮಾಜ ಕಲ್ಯಾಣ ಎಂಬುದು ಕೇವಲ ಬಜೆಟ್ ಅಂಕಿಗಳ ಆಟವಾಗಬಾರದು. ಅದು ನಿಜವಾಗಿಯೂ ಜನರ ಜೀವನದಲ್ಲಿ ಬದಲಾವಣೆ ತರಬೇಕಾದ ಸಾಮಾಜಿಕ ನ್ಯಾಯದ ಸಾಧನವಾಗಬೇಕು.

ಇಲ್ಲವಾದರೆ ಜನರು ಒಮ್ಮೆ ಖಂಡಿತವಾಗಿ ಕೇಳುತ್ತಾರೆ. “ಸಾವಿರಾರು ಕೋಟಿ ಘೋಷಣೆಗಳು ಯಾರಿಗಾಗಿ?. ಬಡವರಿಗಾಗಿ… ಅಥವಾ ರಾಜಕೀಯ ಘನಂದಾರಿಗಾಗಿನಾ ಈ ಸೌಲಭ್ಯ?”.
ಲೇಖನ: ಶ್ರೀನಿವಾಸ್ ಕೆ ಟಿ

