ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಬೆಳಕಿನ ನಗರಗಳ ಹಿಂದೆ ಕತ್ತಲಲ್ಲಿ ಕಂಗಾಲಾಗಿರುವ ರೈತನ ಕೂಗು!”. “ರೈತನ ಬೆವರು ಯಾರಿಗೆ ಲಾಭ? ರೈತನ ಮನೆಗೆ ಯಾಕೆ ಕತ್ತಲೆ?”. “ಅನ್ನದಾತನಿಗೆ ನ್ಯಾಯ ಯಾವಾಗ?”.
“ರೈತನ ಹೋರಾಟ: ಬೆಳಕಿನ ಲೋಕಕ್ಕೆ ಅನ್ನ, ಅವನ ಮನೆಗೆ ಕತ್ತಲೆ!”. “ಬಂಡವಾಳ ರೈತನದು… ಲಾಭ ಯಾರದು?” “ರೈತನ ಮನೆ ಬೆಳಗಿದ ದಿನವೇ ನಿಜವಾದ ಅಭಿವೃದ್ಧಿ!”.
ರೈತನ ಬದುಕು ಅನ್ನೋದು ಕೇವಲ ಒಂದು ವೃತ್ತಿ ಅಲ್ಲ. ಅದು ಹೋರಾಟ, ಧೈರ್ಯ, ನಿರೀಕ್ಷೆ ಮತ್ತು ತಾಳ್ಮೆಯ ಮತ್ತೊಂದು ಹೆಸರು.
ಉದಾಹರಣೆಗೆ ಒಂದು ಎಕರೆಗೆ ವರ್ಷಕ್ಕೆ 50,000 ಬಂಡವಾಳ ಹಾಕಿ ಬೆಳೆ ಬೆಳೆಯುತ್ತಾನೆ ರೈತ. ಬೀಜ, ಗೊಬ್ಬರ, ಕಾರ್ಮಿಕ ವೆಚ್ಚ, ನೀರಾವರಿ, ವಿದ್ಯುತ್, ಯಂತ್ರೋಪಕರಣ ಎಲ್ಲ ಸೇರಿ ಖರ್ಚು ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟವಾದಾಗ 20,000 ಮಾತ್ರ ಕೈಗೆ ಬರುತ್ತದೆ. ಇನ್ನೊಂದು ವರ್ಷ ಬೆಳೆ ಸಂಪೂರ್ಣ ನಷ್ಟ. ಮತ್ತೊಂದು ವರ್ಷ ಬೆಲೆ ಕುಸಿತ. ಕೆಲವೊಮ್ಮೆ ಅತಿವೃಷ್ಟಿ, ಕೆಲವೊಮ್ಮೆ ಬರಗಾಲ. ಪ್ರಕೃತಿಯೂ ಮಾರುಕಟ್ಟೆಯೂ ಎರಡೂ ರೈತನ ವಿರುದ್ಧವೇ ನಿಂತಂತೆ ಕಾಣುತ್ತದೆ.
ರೈತನ ಸಮಸ್ಯೆಗಳ ಮೂಲ- ಪ್ರಕೃತಿ ಅವಲಂಬನೆ – ಮಳೆ ಬರದಿದ್ದರೂ ಕಷ್ಟ, ಹೆಚ್ಚು ಬಂದರೂ ಕಷ್ಟ. ಮಾರುಕಟ್ಟೆ ಅಸ್ಥಿರತೆ – ಬೆಳೆದಾಗ ಬೆಲೆ ಇಲ್ಲ; ಬೆಲೆ ಇದ್ದಾಗ ಬೆಳೆ ಇಲ್ಲ. ಮಧ್ಯವರ್ತಿಗಳ ಹಿಡಿತ – ರೈತನಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಮಾರುಕಟ್ಟೆಯಲ್ಲಿ ದ್ವಿಗುಣ-ತ್ರಿಗುಣ ಲಾಭ.
ಸಾಲದ ಬಲೆ – ಬ್ಯಾಂಕ್ ಸಾಲ ಸಿಗದಿದ್ದರೆ ಖಾಸಗಿ ಸಾಲ. ಬಡ್ಡಿ ಹೆಚ್ಚಾಗಿ ಸಾಲದ ಹೊರೆ. ಸಂಗ್ರಹಣಾ ಸೌಲಭ್ಯ ಕೊರತೆ – ಬೆಲೆ ಏರಿಕೆಗಾಗಿ ಕಾಯಲು ಗೋದಾಮು ಇಲ್ಲ.
ಲಾಭ ಪಡೆಯುವವರು ಯಾರು?
ರೈತ ಬೆಳೆದ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ದಲ್ಲಾಳಿ ಲಾಭದಲ್ಲಿರುತ್ತಾನೆ. ಅದರಿಂದ ತಯಾರಾದ ಪದಾರ್ಥಗಳನ್ನು ಮಾರುವ ಮಳಿಗೆಗಳು, ಮಾಲ್ಗಳು, ಹೋಟೆಲ್ಗಳು, ಫ್ಯಾಕ್ಟರಿಗಳು ಬೆಳಗುತ್ತವೆ.
ಕಲರ್ ಕಲರ್ ವಿದ್ಯುತ್ ದೀಪಗಳಿಂದ ಮಿಂಚುವ ಕಟ್ಟಡಗಳು ನಗರದಲ್ಲಿ ಕಾಣಿಸುತ್ತವೆ. ಆದರೆ ಆ ಬೆಳಕಿನ ಮೂಲವಾದ ರೈತನ ಮನೆ ಮಾತ್ರ ಕತ್ತಲಲ್ಲಿ. ಅವನ ಶ್ರಮದಿಂದ ಸಾವಿರಾರು ಉದ್ಯೋಗಗಳು ಹುಟ್ಟುತ್ತವೆ, ಆದರೆ ಅವನ ಮಕ್ಕಳಿಗೆ ಶಿಕ್ಷಣದ ಖಾತರಿ ಇಲ್ಲ.
ಅವನ ಬೆವರು ದೇಶದ ಆರ್ಥಿಕತೆಯ ಬೆನ್ನೆಲುಬು, ಆದರೆ ಅವನಿಗೆ ಬದುಕಿನ ಭದ್ರತೆ ಇಲ್ಲ. ರೈತ ಉದ್ದಾರವಾಗೋದು ಯಾವಾಗ?. ರೈತ ಉದ್ದಾರವಾಗಬೇಕಾದರೆ: ಉತ್ಪಾದನಾ ವೆಚ್ಚಕ್ಕೆ ಸಮನಾದ ಕನಿಷ್ಠ ಬೆಲೆ ಕಡ್ಡಾಯ ಜಾರಿಗೆ ಬರಬೇಕು. ಮಧ್ಯವರ್ತಿಗಳ ನಿಯಂತ್ರಣ ಮತ್ತು ರೈತರಿಗೆ ನೇರ ಮಾರುಕಟ್ಟೆ ಅವಕಾಶ ಹೆಚ್ಚಬೇಕು. ಸಂಗ್ರಹಣಾ ಮತ್ತು ಪ್ರಾಸೆಸಿಂಗ್ ಘಟಕಗಳು ಗ್ರಾಮ ಮಟ್ಟದಲ್ಲೇ ಸ್ಥಾಪನೆ ಆಗಬೇಕು.
ಬೆಳೆ ವಿಮೆ ಯೋಜನೆಗಳು ಸರಿಯಾಗಿ ಜಾರಿಯಾಗಬೇಕು. ರೈತ ಉತ್ಪಾದಕರ ಸಂಘಗಳು ಬಲವಾಗಬೇಕು. ಕೃಷಿ ಕೇವಲ ಬದುಕು ಉಳಿಸುವ ವೃತ್ತಿ ಅಲ್ಲ, ಲಾಭದಾಯಕ ಉದ್ಯಮವಾಗಬೇಕು.
ಅಂತಿಮ ಮಾತು-ರೈತ ಹಸಿದಿದ್ದರೆ ದೇಶ ಹಸಿದಂತೆ. ರೈತನ ಮನೆ ಕತ್ತಲಿದ್ದರೆ ದೇಶದ ಬೆಳಕು ಕೃತಕ. ರೈತನ ಬೆವರು ಕೇವಲ ಮಣ್ಣಿಗೆ ಬೀಳುವುದಿಲ್ಲ. ಅದು ದೇಶದ ಅನ್ನದ ಭದ್ರತೆಗೆ ಬೀಳುತ್ತದೆ. ಆ ಬೆವರಿನ ಬೆಲೆ ಕೊಡದೇ ಅಭಿವೃದ್ಧಿಯ ಮಾತು ಆಡಿದರೆ ಅದು ಕೇವಲ ಮಿಥ್ಯಾಭಿವೃದ್ಧಿ.

ರೈತ ಉದ್ದಾರವಾಗೋದು ಸರ್ಕಾರ ಮಾತ್ರ ಮಾಡಿದರೆ ಸಾಲದು; ಗ್ರಾಹಕ, ಮಾರುಕಟ್ಟೆ, ನೀತಿ, ಸಮಾಜ ಎಲ್ಲರೂ ಸೇರಿ ನಿಲ್ಲಬೇಕು. ರೈತನ ಮನೆ ಬೆಳಗಿದ ದಿನವೇ ದೇಶ ನಿಜವಾಗಿ ಬೆಳಗುತ್ತದೆ ಅಲ್ವಾ……????
ಲೇಖನ: ಶ್ರೀನಿವಾಸ್ ಕೆ ಟಿ, ಸಮಾಜ ಚಿಂತಕ, ಬೆಂಗಳೂರು.

