ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಯುದ್ಧದ ಜ್ವಾಲೆಯಲ್ಲಿ ಸುಡುವುದು ಜನಸಾಮಾನ್ಯರ ಬದುಕು !”.
ಇಂದಿನ ಜಗತ್ತಿನಲ್ಲಿ ತಮ್ಮ ಶಕ್ತಿ, ಪ್ರಭಾವ ಮತ್ತು ಆಧಿಪತ್ಯವನ್ನು ಪ್ರಪಂಚದ ಮೇಲೆ ಇನ್ನೊಷ್ಟು ಜಾಸ್ತಿ ಮಾಡಿಕೊಳ್ಳುವ ದುರುದ್ದೇಶದ ಅತಿಯಾದ ಆಸೆಯಿಂದ ಕೆಲ ಮುಂದುವರೆದ ರಾಷ್ಟ್ರಗಳು ನಿರಂತರವಾಗಿ ಒಂದಲ್ಲ ಒಂದು ಕಾರಣ ಇಟ್ಟುಕೊಂಡು ಯುದ್ಧದ ದಾರಿಯನ್ನು ಹಿಡಿಯುತ್ತಿರುವುದು ವಿಷಾದಕರ ಸಂಗತಿ. ಯುದ್ಧಗಳು ಎಂದರೆ ಕೇವಲ ರಾಷ್ಟ್ರ ~ ರಾಷ್ಟ್ರಗಳ ನಡುವೆ ನಡೆಯುವ ಸೈನಿಕ ಘರ್ಷಣೆ ಮಾತ್ರವಲ್ಲ; ಅದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಸಾಮಾನ್ಯ ಜನರ ಜೀವನದ ಮೇಲೆ ಬೀಳುವ ಭಾರೀ ಹೊಡೆತಗಳಾಗಿವೆ.
ಒಂದು ಕಡೆ ಯುದ್ಧ ಪ್ರಾರಂಭವಾದರೆ, ಅದರ ಹೊಗೆ ಮತ್ತು ಬೆಂಕಿ ಆ ಪ್ರದೇಶದಲ್ಲೇ ಸೀಮಿತವಾಗುವುದಿಲ್ಲ. ಜಾಗತಿಕ ಮಾರುಕಟ್ಟೆ ಅಸ್ಥಿರವಾಗುತ್ತದೆ, ಇಂಧನದ ಬೆಲೆ ಏರುತ್ತದೆ, ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತವೆ. ಪರಿಣಾಮವಾಗಿ ಯುದ್ಧ ನಡೆಯದ ದೇಶಗಳಲ್ಲಿಯೂ ಸಾಮಾನ್ಯ ಜನರು ಬೆಲೆ ಏರಿಕೆಯ ಬಾಧೆಯನ್ನು ಅನುಭವಿಸಬೇಕಾಗುತ್ತದೆ.
ಆದರೆ ಯುದ್ಧದ ಅತ್ಯಂತ ಭೀಕರ ಮುಖ ಕಂಡುಬರುವುದು ಯುದ್ಧ ನಡೆಯುವ ನೆಲದಲ್ಲೇ. ಅಲ್ಲಿ ಅಸಂಖ್ಯಾತ ನಿರಪರಾಧ ಜನರು ತಮ್ಮ ಜೀವ ಕಳೆದುಕೊಳ್ಳುತ್ತಾರೆ. ತಮ್ಮ ಬದುಕಿನ ಅರ್ಥವೇ ತಿಳಿಯದ ಮುಗ್ಧ ಕಂದಮ್ಮಗಳು ಬಲಿಯಾಗುತ್ತಾರೆ. ಅನೇಕ ಮಕ್ಕಳು ತಂದೆ-ತಾಯಿಯಿಲ್ಲದೆ ತಬ್ಬಲಿಯಾಗುತ್ತಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಕಣ್ಣೀರಿನ ಕಥೆಗಳು ವಿಶ್ವದ ಮನಸ್ಸನ್ನು ಕದಡುತ್ತವೆ.
ಯುದ್ಧ ಎಂದರೆ ಕೇವಲ ಗುಂಡು-ಸಿಡಿತವಲ್ಲ; ಅದು ಮಾನವೀಯತೆಯ ಹೃದಯವನ್ನು ಚೂರಾಗಿಸುವ ದುರಂತ. ಸಾವಿರಾರು ಕೋಟಿ ರೂಪಾಯಿಗಳನ್ನು ಶಸ್ತ್ರಾಸ್ತ್ರಗಳಿಗೆ, ಬಾಂಬ್ಗಳಿಗೆ, ಕ್ಷಿಪಣಿಗಳಿಗೆ ಖರ್ಚು ಮಾಡುವ ರಾಷ್ಟ್ರಗಳು ಅದೇ ಹಣವನ್ನು ಮಾನವ ಕಲ್ಯಾಣಕ್ಕೆ ಬಳಸಿದ್ದರೆ ಎಷ್ಟೋ ಜನರ ಬದುಕು ಬದಲಾಗುತ್ತಿತ್ತು.
ಶಾಲೆಗಳು ನಿರ್ಮಾಣವಾಗುತ್ತಿದ್ವು, ಆಸ್ಪತ್ರೆಗಳು ನಿರ್ಮಾಣವಾಗುತ್ತಿದ್ವು, ಹಸಿವು ಮತ್ತು ಬಡತನಕ್ಕೆ ಪರಿಹಾರ ಸಿಕ್ಕಿರುತ್ತಿತ್ತು. ಆದರೆ ದುಃಖಕರವಾಗಿ, ಆ ಕೋಟಿಗಟ್ಟಲೆ ಹಣ ಸಮುದ್ರದಲ್ಲಿ ಹೋಮ ಮಾಡಿದಂತೆ ಯುದ್ಧದ ಬೆಂಕಿಯಲ್ಲಿ ಕರಗಿ ಹೋಗುತ್ತಿದೆ. ಇಂದು ಜಗತ್ತು ತನ್ನನ್ನೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕಾದ ಸಮಯ ಬಂದಿದೆ –

ಈ ಯುದ್ಧಗಳ ಅನಿವಾರ್ಯತೆ ನಿಜವಾಗಿಯೂ ಇದೆಯೇ?
ಮಾನವಕುಲದ ಭವಿಷ್ಯವನ್ನು ರಕ್ಷಿಸಬೇಕಾದರೆ, ಯುದ್ಧಗಳಿಗಿಂತ ಸಂವಾದ ಮತ್ತು ಶಾಂತಿಯ ಮಾರ್ಗವೇ ಶಾಶ್ವತ ಪರಿಹಾರ. ರಾಷ್ಟ್ರಗಳ ಅಹಂಕಾರಕ್ಕಿಂತ ಮಾನವೀಯತೆ ದೊಡ್ಡದು ಎಂಬ ಅರಿವು ಮೂಡಿದಾಗ ಮಾತ್ರ ಪ್ರಪಂಚದಲ್ಲಿ ನಿಜವಾದ ಶಾಂತಿ ನೆಲೆಸುತ್ತದೆ. ಯುದ್ಧಗಳಲ್ಲಿ ಗೆಲುವು ಯಾರಿಗೂ ಇಲ್ಲ; ಸೋಲು ಮಾತ್ರ ಮಾನವಕುಲದ್ದೇ.
ಲೇಖನ: ಶ್ರೀನಿವಾಸ್ ಕೆ ಟಿ, ಸಮಾಜ ಚಿಂತಕ, ಬೆಂಗಳೂರು.

