ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಥಾ ರಾಜಾ – ತಥಾ ಪ್ರಜಾ ಎನ್ನುವ ಒಂದು ಮಾತಿದೆ. ಸ್ವತಃ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಎಲ್ಲದರಲ್ಲೂ 60% ಕಮಿಷನ್ ಹೊಡೆಯುತ್ತಿರುವಾಗ, ಇನ್ನು ಅಧಿಕಾರಿಗಳು ಅದನ್ನು ನೋಡಿ ಸುಮ್ಮನಿರಲು ಸಾಧ್ಯವೇ? ಸರ್ಕಾರವೇ ಕಮಿಷನ್ ರಾಜ್ಗೆ ಅನುಮತಿ ನೀಡಿದೆ ಎಂದುಕೊಂಡು ಅವರೂ ಲೂಟಿಗಿಳಿದಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಆರೋಪಿಸಿದರು.
ಸಿದಗದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 195 ಐಎಎಸ್, ಐಪಿಎಸ್, ಕೆಎಎಸ್ನಂತಹ ಪ್ರಭಾವಿ ಶ್ರೇಣಿಯ ಅಧಿಕಾರಿಗಳ ಮೇಲೆ ನೂರಾರು ಪ್ರಕರಣಗಳು ದಾಖಲಾಗಿರುವುದು ರಾಜ್ಯದ ಆಡಳಿತ ವ್ಯವಸ್ಥೆ ಹೇಗೆ ಹಳ್ಳ ಹಿಡಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಕೇವಲ ಕಳೆದ ಮೂರೂವರೆ ವರ್ಷಗಳಲ್ಲಿ 195ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಆಡಳಿತ ಯಂತ್ರದ ಕುರಿತು ಜನರ ವಿಶ್ವಾಸಾರ್ಹತೆಯನ್ನೇ ತಗ್ಗಿಸಿದೆ. ಸ್ವತಃ ಸರ್ಕಾರಕ್ಕೂ ಈ ಮೇಯುವಿಕೆಯಲ್ಲಿ ಪಾಲಿರುವುದರಿಂದ, ಅಧಿಕಾರಿಗಳ ಲೂಟಿಯನ್ನು ತಡೆಯುವ ಯಾವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿಲ್ಲ ಎಂದು ಅವರು ದೂರಿದರು.
ರಾಜ್ಯದ ಜನರ ಯಾವ ಕೆಲಸಗಳೂ ಲಂಚ ನೀಡದ ಹೊರತು ನಡೆಯುವುದಿಲ್ಲ ಎನ್ನುವ ಸ್ಥಿತಿ ಬಂದಿದೆ. ಜನರು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ಯಾರಂಟಿಯ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿದ ಈ ಸರ್ಕಾರ, ಇಂದು ಹೆಜ್ಜೆ ಹೆಜ್ಜೆಯಲ್ಲೂ ಲೂಟಿ ಹೊಡೆಯುತ್ತಾ, ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳಿಗೆ ಕುಮ್ಮಕ್ಕು ಕೊಡುತ್ತಾ, ಮುಂದಿನ ಚುನಾವಣೆಯಲ್ಲಿ ‘ಕಾಂಗ್ರೆಸ್ ಮುಕ್ತ ಕರ್ನಾಟಕ‘ವಾಗಿಸುವತ್ತ ತಾನೇ ಹೆಜ್ಜೆ ಇಡುತ್ತಿದೆ ಎಂದು ರವಿ ಅವರು ಭವಿಷ್ಯ ನುಡಿದರು.

