ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾಕೆ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮತ ಯಂತ್ರದ ಕುರಿತು ಇಷ್ಟೊಂದು ದ್ವೇಷ ಎನ್ನುವುದು ಸಾಕ್ಷಿ ಸಮೇತ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅವರು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಿದರೆ, ಮನ ಬಂದಂತೆ ಚುನಾವಣಾ ಅಕ್ರಮ ನಡೆಸಬಹುದು ಎನ್ನುವುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.
ತನ್ನ ಸ್ಥಾಪನೆಯ ದಿನದಿಂದಲೂ ಕಾಂಗ್ರೆಸ್ ವೋಟ್ ಚೋರಿ ಮಾಡುತ್ತಲೇ ಗೆಲುವು ಸಾಧಿಸಿರುವ ಪಕ್ಷ. ಈಗ ಸಹಕಾರಿ ಚುನಾವಣೆಯಲ್ಲೂ ಮತ ಪತ್ರಗಳ ಮೂಲಕ ಅಕ್ರಮ ನಡೆಸಿ ಸಿಕ್ಕಿಬಿದ್ದಿರುವ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸಂಪೂರ್ಣ ಅಕ್ರಮ ನಡೆಸುವ ಸಲುವಾಗಿಯೇ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಸೂದೆಯನ್ನು ಮಂಡಿಸಿದೆ.
ತುಮಕೂರಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಕ್ರಮ ಮತದಾನ ನಡೆಸಿ ಸಿಕ್ಕಿಬಿದ್ದಿರುವುದು ಒಂದು ಸ್ಯಾಂಪಲ್ ಅಷ್ಟೇ. ಮತಯಂತ್ರದ ವಿಶ್ವಾಸಾರ್ಹತೆಯನ್ನು ಕಾಂಗ್ರೆಸ್ ಪ್ರಶ್ನಿಸುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ! ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ತಾನು ಚುನಾವಣಾ ಅಕ್ರಮ ಎಸಗದಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಣ್ಣು ಮುಕ್ಕುವುದು ಖಂಡಿತಾ ಎನ್ನುವುದು ಸ್ಪಷ್ಟವಾಗಿ ಅರಿವಿಗೆ ಬಂದಿದೆ ಎಂದು ರವಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

