ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾನ್ಯ
ಅವರಿವರೊಳಗೆ ನಾನ್ಯಾರು
ಬದುಕಲಿ ಮರೆಯಾದವನೋ ಹೇಗೆ
ತಲೆದೂಗುವ ಮಾತುಗಳು
ಹಾರ ತುರಾಯಿ ಗೌರವ
ಬೇಕೋ ಬೇಡವೋ ಗೊತ್ತಿಲ್ಲ
ಬಂದ ಕೆಲಸಕೆ ಸನ್ಮಾನವೇಕೆ
ಬುದ್ಧಿಯ ಹೊದಿಕೆ ಮೆಚ್ಚುಗೆ ಬೇಕೆ
ಆಚಾರ ವಿಚಾರ ಹತ್ತಿರವಿರಲಿ
ಸಂಪನ್ನ ಅರಳಲಿ ಕ್ರೌರ್ಯ ಅಳಿಯಲಿ
ಅಹಂ ಅದುಮಿಕೋ ನಾನು ನಶಿಸು
ಮನಶುದ್ದಿ, ಬಟ್ಟೆಯಿದು ಜೋಪಾನ
ಜಾತ್ರೆಯಲಿ ದಡ್ಡನೆಂದೇ ಹೇಳಿಕೊ
ಗೆಳೆಯ, ಗೆಳೆತನ ಹುಡುಕಿಕೊ
ಅಪರೂಪವದು ಬೆಲೆಕಟ್ಟಲಾಗದು
ಬಂಗಾರದೆಳೆಯಲಿ ಕಟ್ಟಿಕೊ
ಬಂಧುಗಳೋ ರಕ್ತ ಸಂಬಂಧಗಳೋ
ಕರುಳ ಬಳ್ಳಿಗಳೋ
ಪರಿಚಯವಷ್ಟೇ ಬೆಸುಗೆಯಲ್ಲ
ಆತ್ಮಾರತಿ ಗೊತ್ತಾಗುವುದಿಲ್ಲ
ಹೊಲಸು ಗಳಿಗೆಯ ತೂತು ಮಡಿಕೆ
ಬಳಸಲು ತೊಳೆದಿಟ್ಟುಕೋ
ಉಳಿಯುವ ಗಳಿಕೆ ಯಾವುದು
ಕಳೆಯಿತೆಂದು ಹಲುಬ ಬೇಡ
ಆಕಾರ,ಆಧ್ಯಾತ್ಮ ಮಹಾತ್ಮ ದಿವ್ಯಾತ್ಮ
ಕಾಂಡಕ್ಕಷ್ಟೇ ಏರಿಳವು ಚೇತನಕ್ಕಲ್ಲ
ತಿಳಿದುಕೋ,ಸಂತೆಗೂ ತಿಳಿಸು
ಸಾವು ನನಗೂ ನಿನಗೂ ಸಹ
ಅದಕೆ ಸಾಟಿಯಾರು
ಆಯಸ್ಸು ಹಣ್ಣಾಗುವ ಮೊದಲು
ಮನ ಮಾಗಲು ಬಿಡು
ಕಾಲ ಎಲ್ಲವನ್ನೂ ನುಂಗಲಿದೆ
ಮಿತಿಯಿದೆ ಮರೆಯಬೇಡ
ಕವಿತೆ:ಕುಮಾರ್ ಬಡಪ್ಪ

