ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನೆಲ ಗೋಡಂಬಿ ಬೆಳೆಗೆ ಸೂಕ್ತವಾಗಿದೆ ಎಂದು ತೋಟಗಾರಿಕೆ ಮಹಾವಿದ್ಯಾಲಯ ಬೆಂಗಳೂರು ಜಿಕೆವಿಕೆ ನಿವೃತ್ತ ಡೀನ್ ಡಾ.ಕೆ.ಜಿ.ಎಸ್.ಸ್ವಾಮಿ ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೆಂಗಳೂರು, ಗೋಡಂಬಿ ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ
ಕೊಚಿನ್ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಪ್ರಾದೇಶಿಕ ಘಟಕ ಇವುಗಳ ಸಹಯೋಗದೊಂದಿಗೆ ಎ.ಪಿ.ಎಂ.ಸಿ. ಆವರಣದಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗೋಡಂಬಿ ಬೆಳೆಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಈರುಳ್ಳಿ ಇವುಗಳನ್ನೆ ಹೆಚ್ಚು ಬೆಳೆಯುವ ರೈತರು ಗೋಡಂಬಿ ಬೆಳೆಯತ್ತ ಗಮನ ಕೊಡಬೇಕು. ಇದೊಂದು ಲಾಭದಾಯಕ ಬೆಳೆ. ಬರಪೀಡಿತ ಪ್ರದೇಶ ಚಿತ್ರದುರ್ಗದ ಹವಾಗುಣ ಗೋಡಂಬಿ ಬೆಳೆಗೆ ಚೆನ್ನಾಗಿದೆ ಎಂದು ಹೇಳಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನಿವೃತ್ತ ಸಂಶೋಧನಾ ನಿರ್ದೇಶಕರಾದ ಡಾ.ಬಿ.ಸತ್ಯನಾರಾಯಣರೆಡ್ಡಿ ಮಾತನಾಡಿ ಗೋಡಂಬಿ ಚಿತ್ರದುರ್ಗ ಜಿಲ್ಲೆಯ ರೈತರಿಗೊಂದು ಪರ್ಯಾಯ ಬೆಳೆಯಾಗಿ ರೂಪುಗೊಳ್ಳುತ್ತ ಬರುತ್ತಿದೆ. ಕಡಿಮೆ ಖರ್ಚಿನಲ್ಲಿ ಬೆಳೆಯುವ ಗೋಡಂಬಿಗೆ ಹೆಚ್ಚಿನ ಕೂಲಿಕಾರರ ಅವಶ್ಯಕತೆಯೂ ಇಲ್ಲ. ಕೇವಲ ವಾಣಿಜ್ಯ ಬೆಳೆಗಳಿಗೆ ಮಾರು ಹೋಗುವ ಬದಲು ಗೋಡಂಬಿ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಗೋಡಂಬಿ ತಜ್ಞ ಬೆಂಗಳೂರಿನ ಡಾ.ಗುರುಪ್ರಸಾದ್, ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಹಿರಿಯ ವಿಜ್ಞಾನಿ ಡಾ.ರಾಜಶೇಖರ್, ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಡಿ.ಟಿ.ಶಿವಾನಂದಪ್ಪ, ಕಾರ್ಯದರ್ಶಿ ಜಿ.ಟಿ.ವೀರಭದ್ರರೆಡ್ಡಿ, ತೋಟಗಾರಿಕೆ ಮಹಾವಿದ್ಯಾಲಯ ಜಿ.ಕೆ.ವಿ.ಕೆ.ಬೆಂಗಳೂರಿನ ಡಾ.ಸುರೇಶ್ ಜಿ.ಜೆ, ಅಶೋಕ್ ಟಿ.ಎಲ್, ಟಿ.ಆರ್.ಯಶವಂತಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೇವರಾಜ್, ವಿರುಪಾಕ್ಷಪ್ಪ, ಎನ್.ಕುಮಾರ್ ಇನ್ನು ಅನೇಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಗೋಡಂಬಿ ಬೆಳೆಯ ಕೊಯ್ಲೋತ್ತರ ನಿರ್ವಹಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಗೋಡಂಬಿ ಬೆಳೆಗಾರರು ಕೇಳಿದ ಪ್ರಶ್ನೆಗಳಿಗೆ ಗೋಡಂಬಿ ತಜ್ಞರು ಉತ್ತರಿಸಿದರು.

