ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಪಡೆದು 3 ತಿಂಗಳ ವಿಶ್ರಾಂತಿ ನಂತರ ಚೇತರಿಸಿಕೊಂಡು ಕೆಲಸಕ್ಕೆ ಮರಳಿದೆ. ಆದರೆ ಹಿಂದಿನ ಡಿಪೋ ಮ್ಯಾನೇಜರ್ ನನಗೆ ವೈದ್ಯಕೀಯ ರಜೆ ನೀಡದೆ 3 ತಿಂಗಳ ಸಂಬಳ ನೀಡದೆ ಸತಾಯಿಸುತ್ತಿದ್ದು,ನನ್ನ ಇಡೀ ಕುಟುಂಬ ಸಂಕಷ್ಟದಲ್ಲಿದೆ ಎಂದು ಕೆ.ಎಸ್. ಆರ್. ಟಿ.ಸಿ.ಚಾಲಕ ಹೆಚ್.ಸಿ.ಮಂಜುನಾಥ್ ತಮ್ಮ ನೋವು ತೊಡಿಕೊಂಡಿದ್ದಾರೆ.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೆಚ್.ಸಿ.ಮಂಜುನಾಥ್ ಹೆಂಡತಿ ಇಬ್ಬರು ಮಕ್ಕಳು, ವಯಸ್ಸಾದ ತಂದೆ ತಾಯಿ ಜೊತೆಯಲ್ಲಿ ವಾಸವಾಗಿದ್ದು, ಸದ್ಯ ದೊಡ್ಡಬಳ್ಳಾಪುರ ಕೆ.ಎಸ್.ಆರ್. ಟಿ.ಸಿ. ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಬಳ ಪಡೆಯದೇ ನೋವಿನಲ್ಲಿರುವ ಅವರು ಮಾಧ್ಯಮದೊಂದಿಗೆ ಮಾತನಾಡಿ ನನಗೆ ವೃಷಣಗಳ ಶಸ್ತ್ರ ಚಿಕಿತ್ಸೆಯಾಗಿದ್ದು ನನಗೆ ನಡೆಯಲು ಮತ್ತು ಕುಳಿತುಕೊಳ್ಳಲು ಅಸಾಧ್ಯವಾಗಿದ್ದು ಕಾಲುಗಳನ್ನ ಅಲುಗಾಡಿಸಿದರೆ ಅಪಾರ ನೋವು ಉಂಟಾಗುತ್ತಿತ್ತು. ವೈದ್ಯರ ಸಲಹೆಯಂತೆ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದೆ.
ದಿನಾಂಕ 20-04-2025 ರಂದು ನನ್ನ ಮಡದಿ ವೈದ್ಯಕೀಯ ರಜೆಗಾಗಿ ದೊಡ್ಡಬಳ್ಳಾಪುರ ಘಟಕಕ್ಕೆ ಹೋಗಿ ವ್ಯವಸ್ಥಾಪಕರಿಗೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ರಜೆ ಚೀಟಿಯನ್ನು ನೀಡಿದ್ದಾರೆ.ಆದರೆ ರಜೆ ಚೀಟಿ ನೀಡಿ ಬಂದಿದ್ದರೂ ಸಹ ವೈದ್ಯಕೀಯ ರಜೆ ನೀಡದೆ ಗೈರು ಹಾಜರಿ ಹಾಕಿದ್ದಾರೆ. ಇದರಿಂದ ನನ್ನ ಮೂರು ತಿಂಗಳ ಸಂಬಳ ಇಲ್ಲದೆ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ ಎಂದಿದ್ದಾರೆ.
ಸಂಬಳ ಬರುತ್ತದೆ ಎಂದು ಸಂಬಳದ ಮೇಲೆ ಸಾಲವನ್ನು ಮಾಡಲಾಗಿದ್ದು, ಪ್ರತಿ ತಿಂಗಳು ನನ್ನ ಸಂಬಳದಲ್ಲಿ ಸಾಲದ ಹಣ ಕಡಿತವಾಗುತ್ತಿತ್ತು, 3 ತಿಂಗಳ ಸಂಬಳ ಬಾರದ ಹಿನ್ನಲೆ ಬ್ಯಾಂಕ್ ನವರು ನನ್ನ ಅಕೌಂಟ್ ಅನ್ನು ಫ್ರೀಜ್ ಮಾಡಿದ್ದಾರೆ. ಸಂಬಳ ಇಲ್ಲದೆ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಹಣ ಇಲ್ಲದೆ ಸಂಸಾರ ಮಾಡುವುದು ಕಷ್ಟವಾಗಿದೆ. ಮಡದಿ ಮಕ್ಕಳು ಸಾಯುವ ಮಾತುಗಳನ್ನಾಡುತ್ತಿದ್ದಾರೆ.
ದಯವಿಟ್ಟು ನನ್ನ ವೈದ್ಯಕೀಯ ರಜೆ ನೀಡಿ ನನ್ನ 3 ತಿಂಗಳ ಸಂಬಳ ನೀಡುವಂತೆ ಕೆ. ಎಸ್. ಆರ್. ಟಿ.ಸಿ. ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಹೆಚ್.ಸಿ.ಮಂಜುನಾಥ್. ವೈದ್ಯಕೀಯ ರಜೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದಿನ ಡಿಪೋ ವ್ಯವಸ್ಥಾಪಕ ಲಕ್ಷ್ಮೀಪತಿ, ನಾನು ದೊಡ್ಡಬಳ್ಳಾಪುರ ಘಟಕಕ್ಕೆ ಬಂದು ಒಂದು ವಾರ ಮಾತ್ರವಾಗಿದೆ.ಇದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಮಂಜುನಾಥ್ ರವರ ವೈದ್ಯಕೀಯ ರಜೆಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳುವುದ್ದಾಗಿ ತಿಳಿಸಿದ್ದಾರೆ.

