ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಅಪ್ಪರ್ ಭದ್ರಕ್ಕೆ 5300 ಕೋಟಿ ಘೋಷಣೆ ಹಣ ಎಲ್ಲಿ ಮಾಯವಾಯಿತು?”. ಮಧ್ಯ ಕರ್ನಾಟಕದ ಬಯಲು ಸೀಮೆಯ ಬರಪೀಡಿತ ರೈತರ ಕನಸಾಗಿ ಆರಂಭವಾದ ಅಪ್ಪರ್ ಭದ್ರ ಪ್ರಾಜೆಕ್ಟ್ ಇಂದು ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಸುಮಾರು 2010ರಲ್ಲಿ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆಗೆ ಈಗಾಗಲೇ 16 ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ ಸಂಪೂರ್ಣವಾಗಿಲ್ಲ ಎಂಬುದು ಬೈಲುಸೀಮೆಯ ರೈತರ ದುಃಖಕರ ವಾಸ್ತವವಾಗಿದೆ.
ಆರಂಭದಲ್ಲಿ ಈ ಯೋಜನೆಯ ಅಂದಾಜು ವೆಚ್ಚ ಸುಮಾರು ₹14,698 ಕೋಟಿ ಎಂದು ನಿರ್ಧಾರ ಮಾಡಲಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಕಾಮಗಾರಿ ವಿಳಂಬವಾಗುತ್ತಾ ಹೋಗುತ್ತಿದ್ದಂತೆ ವೆಚ್ಚವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಬಂದಿದೆ.
ಇಂದು ಈ ಯೋಜನೆಯ ಒಟ್ಟು ವೆಚ್ಚ 21,000 ಕೋಟಿಗೂ ಹೆಚ್ಚು ಆಗಿದ್ದು, ಕೆಲ ಅಂದಾಜುಗಳ ಪ್ರಕಾರ 23,000 ಕೋಟಿಯವರೆಗೆ ಏರಿದೆ ಎಂದು ಹೇಳಲಾಗುತ್ತಿದೆ.
ಇಷ್ಟು ವರ್ಷಗಳಲ್ಲಿ ಸಾವಿರಾರು ಕೋಟಿ ಖರ್ಚಾದರೂ ಯೋಜನೆ ಇನ್ನೂ ಪೂರ್ಣವಾಗಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯ ಉದ್ದೇಶ ತುಂಗ ಹಾಗೂ ಭದ್ರಾ ನದಿಯಿಂದ ನೀರನ್ನು ಎತ್ತಿ ಬರಪೀಡಿತ ಪ್ರದೇಶಗಳಿಗೆ ಹರಿಸುವುದು. ವಿಶೇಷವಾಗಿ ಚಿತ್ರದುರ್ಗ ಚಿಕ್ಕಮಗಳೂರು , ದಾವಣಗೆರೆ ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಲಕ್ಷಾಂತರ ರೈತ ಕುಟುಂಬಗಳಿಗೆ ಇದು ಬದುಕಿನ ಆಶೆಯಾಗಿತ್ತು.
ಈ ಯೋಜನೆಯ ಮೂಲಕ ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಇಡಲಾಗಿದೆ. ಜೊತೆಗೆ ಸುಮಾರು 367 ಕೆರೆಗಳನ್ನು ತುಂಬಿಸಿ ಭೂಗರ್ಭ ಜಲಮಟ್ಟ ಹೆಚ್ಚಿಸುವ ಯೋಜನೆಯೂ ಇದೆ.
ಆದರೆ ವರ್ಷಗಳ ಕಾಲ ರಾಜಕೀಯ ಭರವಸೆಗಳು ಮಾತ್ರ ಕೇಳಿಬಂದಿವೆ, ಕಾಮಗಾರಿಯ ವೇಗ ಮಾತ್ರ ಕಾಣಿಸಿಲ್ಲ. “ಬಯಲು ಸೀಮೆಯ ರೈತರ ಜೀವನಾಡಿ ಏಕೆ ರಾಜಕೀಯ ನಿರ್ಲಕ್ಷ್ಯದ ಬಲಿಯಾಗಿದೆ?”.
ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಘೋಷಿಸಿ ಸುಮಾರು ₹5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಘೋಷಣೆ ಮಾಡಿದ ನಂತರ ಇಂದಿನವರೆಗೂ ಒಂದು ರೂಪಾಯಿಯು ಬಿಡುಗಡೆಯಾಗಿಲ್ಲ ಏಕೆ…..?
ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದರೆ ಸಾಕೇ? ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಯಾರದು?.
ಘೋಷಣೆಗಳ ರಾಜಕೀಯ ಮಾಡುವುದು ಸುಲಭ, ಆದರೆ ರೈತರ ಬದುಕು ಬದಲಾಯಿಸುವ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರಗಳ ನಿಜವಾದ ಪರೀಕ್ಷೆ.
16 “ವರ್ಷಗಳ ಹಿಂದೆ ಆರಂಭವಾದ ಯೋಜನೆ ಇನ್ನೂ ಯಾಕೆ ಅರ್ಧದಲ್ಲೇ?”. ಅಪ್ಪರ್ ಭದ್ರಾ ಯೋಜನೆ ಮಧ್ಯ ಕರ್ನಾಟಕದ ನೀರಾವರಿ ಇತಿಹಾಸವನ್ನೇ ಬದಲಾಯಿಸಬಹುದಾದ ಸಾಮರ್ಥ್ಯ ಹೊಂದಿದೆ. ಈ ಯೋಜನೆ ಪೂರ್ಣಗೊಂಡರೆ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸಿಗುತ್ತದೆ ಎಂಬ ನಿರೀಕ್ಷೆ ಇದೆ.
ಆದರೆ ನೆಲದ ಮೇಲೆ ನಡೆದಿರುವ ಪ್ರಗತಿ ನೋಡಿದರೆ, ಈ ಯೋಜನೆ ಇನ್ನೂ ಅರ್ಧದಲ್ಲೇ ನಿಂತಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೂ ಪ್ರಶ್ನೆಗೆ ಒಳಗಾಗಿದೆ. ವರ್ಷದಿಂದ ವರ್ಷಕ್ಕೆ ಬಜೆಟ್ನಲ್ಲಿ ಘೋಷಣೆಗಳು ಕೇಳಿಬಂದರೂ ಕಾಮಗಾರಿಗೆ ಬೇಕಾದ ವೇಗ ನೀಡಲಾಗಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
“ಐದು ಜಿಲ್ಲೆಗಳ ಜನಪ್ರತಿನಿಧಿಗಳು ಮೌನವೇಕೆ?”.
ಈ ಯೋಜನೆ ನಾಲ್ಕು ಪ್ರಮುಖ ಜಿಲ್ಲೆಗಳ ವ್ಯಾಪ್ತಿಗೆ ಸೇರಿದ್ದು. ಆದರೆ ಆ ಜಿಲ್ಲೆಗಳ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಈ ಯೋಜನೆಗಾಗಿ ಹೋರಾಟ ನಡೆಸಿದ ದೃಶ್ಯಗಳು ಬಹಳ ವಿರಳ.
ರಾಜಕೀಯ ವೇದಿಕೆಗಳಲ್ಲಿ ರೈತರ ಬಗ್ಗೆ ಮಾತನಾಡುವವರು ಸಾಕಷ್ಟು. ಆದರೆ ರೈತರ ಬದುಕನ್ನು ಬದಲಾಯಿಸಬಲ್ಲಂತಹ ಯೋಜನೆಗಾಗಿ ತೀವ್ರ ಹೋರಾಟ ನಡೆಸುವವರು ಎಷ್ಟು ಮಂದಿ?. “ಘೋಷಣೆಗಳು ದೊಡ್ಡದು, ಕಾಮಗಾರಿ ಶೂನ್ಯ: ರೈತರ ಭವಿಷ್ಯ ಯಾರ ಹೊಣೆ?”.
ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಕಾನೂನು ಸಂಬಂಧಿತ ಅಡ್ಡಿಗಳೂ ಎದುರಾಗಿವೆ. ವಿಶೇಷವಾಗಿ ನ್ಯಾಷನಲ್ ಗ್ರೀನ್ ತ್ರಿಬುನಲ್ ಮುಂದೆ ಕೆಲವು ವಿಚಾರಣೆಗಳು ನಡೆಯುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ.
ಆದರೆ ಪ್ರಶ್ನೆ ಒಂದೇ , ವಿಳಂಬಕ್ಕೆ ಕಾರಣಗಳಿವೆ ಎಂದರೆ ಪರಿಹಾರ ಕಂಡುಹಿಡಿಯುವ ಜವಾಬ್ದಾರಿ ಸರ್ಕಾರಗಳದ್ದೇ ಅಲ್ಲವೇ?.
“ಅಪ್ಪರ್ ಭದ್ರ ಪೂರ್ಣಗೊಳ್ಳುವುದು ಯಾವಾಗ? ರೈತರ ಬದುಕು ಬೆಳಗುವುದು ಯಾವಾಗ?”. ಇಂದು ಮಧ್ಯ ಕರ್ನಾಟಕದ ರೈತರು ಕೇಳುತ್ತಿರುವ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಪ್ಪರ್ ಭದ್ರ ಯೋಜನೆ ಕಾರ್ಯರೂಪಕ್ಕೆ ಬರುವ ದಿನ ಯಾವುದು?.

ಈ ಯೋಜನೆಯಿಂದ ರೈತರ ಮನೆಗಳಲ್ಲಿ ಬೆಳಕು ಬೆಳಗುವ ದಿನ ಯಾವುದು?. ರಾಜಕೀಯ ಘೋಷಣೆಗಳಿಗಿಂತ ರೈತರ ಬದುಕೇ ಮುಖ್ಯ. ಬಯಲುಸೀಮೆಯ ರೈತರ ಪ್ರಶ್ನೆ ಇನ್ನೂ ಗಾಳಿಯಲ್ಲಿ ತೇಲುತ್ತಿದೆ. ಅಪ್ಪರ್ ಭದ್ರಾ ಪೂರ್ಣಗೊಳ್ಳುವುದು ಯಾವಾಗ……???
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

