ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭವಿಷ್ಯದಲ್ಲಿ ಸಿಎಂ ಯಾರಾಗಬಹುದು ಎಂಬ ವಿಚಾರವಾಗಿ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ವಿಧಾನಸಭಾ ಕಲಾಪದ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸ್ಪೀಕರ್ ಖಾದರ್ ಫೋಟೋ ಶೂಟ್ ಮಾಡಿಸುತ್ತಿದ್ದಾರೆ. ನನಗೆ ಅವರದ್ದೇ ಡೌಟಾಗಿದೆ. ಯಾವಾಗ ಹೋಗುತ್ತಾರೋ ಅಂತ. ಐದು ವರ್ಷಕ್ಕೆ ಒಮ್ಮೆ ಫೋಟೋ ಶೂಟ್ ಮಾಡಲಾಗುತ್ತದೆ. ಆದರೆ, ಅವರು ರೆಡಿ ಆಗಿ ಬಿಟ್ಟಿದ್ದಾರೆ, ಹೊಸ ಬಾಗಿಲು, ಕಿಟಕಿ ಮಾಡಿಸುತ್ತಿದ್ದಾರೆ ಎಂದು ಅಶೋಕ್ ಅವರು ಸಿದ್ದರಾಮಯ್ಯನವರ ಕಾಲೆಳೆದರು.
ಸಿಎಂ ಸಿದ್ದರಾಮಯ್ಯ ಅದಕ್ಕೆ ಪ್ರತಿಕ್ರಿಯಿಸಿ, ಅವರು ಎಲ್ಲಿಗೂ ಹೋಗಲ್ಲ. 2028ಕ್ಕೂ ಗೆಲ್ಲುತ್ತಾರೆ, ಎಲ್ಲಿಯವರೆಗೆ ಚುನಾವಣೆಗೆ ನಿಲ್ಲುತ್ತಾರೆ, ಅಲ್ಲಿಯವರೆಗೆ ಗೆಲ್ಲುತ್ತಾರೆ ಎಂದರು. ಅದಕ್ಕೆ ಆರ್.ಅಶೋಕ್, ಎಲ್ಲಿಯವರೆಗೆ ಸ್ಪೀಕರ್ ಆಗಿ ಇರುತ್ತಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಹೈಕಮಾಂಡ್ ತೀರ್ಮಾನದವರೆಗೆ ಇರ್ತಾರೆ. ನೀವು ಏನೇ ಕಿತಾಪತಿ ಮಾಡಿದರೂ, ಜ್ಯಾಕ್ ಹಾಕಿ ಎತ್ತಿದರೂ ಅವರು ಏಳಲ್ಲ. ಕಿತಾಪತಿಗೆ ಮನ್ನಣೆ ಕೊಡಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಚರ್ಚೆ–
ವಿಪಕ್ಷ ನಾಯಕ ಆರ್.ಅಶೋಕ್ ಅದಕ್ಕೆ ಎದ್ದು ನಿಂತು ಮಾತನಾಡಿ, ಅವರಿಗೆ ಕನಸಿರಲ್ವಾ? ಎಂದು ಪ್ರಶ್ನಿಸಿದರು. ಆಗ ಸಿಎಂ ಸಿದ್ದರಾಮಯ್ಯ, ನಿನಗೂ ಕನಸಿಲ್ವಾ? ಸಿಎಂ ಆಗಬೇಕು ಎಂದು ಕನಸಿಲ್ವಾ? ಎಂದು ಅಶೋಕ್ಗೆ ಮರು ಪ್ರಶ್ನಿಸಿದರು. ನೀವು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ. ಅರವಿಂದ ಬೆಲ್ಲದ ಸಿಎಂ ಆದರೂ ಸಂತೋಷ ಪಡುತ್ತೇನೆ. ನೋಡಲ್ಲಿ, ವಿಜಯೇಂದ್ರ ಕಾಯುತ್ತಾ ಕೂತಿದ್ದಾರೆ. ವಿಜಯೇಂದ್ರ ಯಾರಿಗೂ ಬಿಡಲ್ಲ ಎಂದು ಸಿದ್ದರಾಮಯ್ಯ ಕಾಲೆಳೆದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು.
ಡಿಕೆಶಿ ಸಿಎಂ ಆದರೂ ಖುಷಿ ಪಡುತ್ತೇನೆ ಅಂತ ಹೇಳಿ: ಈ ವೇಳೆ ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ, ಡಿಕೆಶಿ ಸಿಎಂ ಆದರೂ ಖುಷಿ ಪಡುತ್ತೇನೆ ಎಂದು ಹೇಳಿ. ನಮ್ಮದು ಮಾತ್ರ ಹೇಳ್ತಿದ್ದೀರಲ್ಲಾ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಎಲ್ಲಿಯವರೆಗೆ ತೀರ್ಮಾನ ಮಾಡುತ್ತದೆಯೋ, ಅಲ್ಲಿವರೆಗೆ ನಾನೇ ಸಿಎಂ ಎಂದು ಪುನರುಚ್ಚರಿಸಿದರು.
ಆಗ ಆರ್.ಅಶೋಕ್, ನೀರು ಕುಡಿಸಲು ತಂದೆಯವರು ಚೆನ್ನಾಗಿ ಕಲಿಸಿದ್ದಾರೆ. ಹಾಗಾಗಿ ನಮಗೆ, ಡಿಕೆಶಿಗೆ ಒಂದು ಗತಿ ಆಗುತ್ತೆ ಎಂದು ಕಿಚಾಯಿಸಿದರು. ಮತ್ತೆ ಎದ್ದು ನಿಂತ ಸುನಿಲ್ ಕುಮಾರ್, ಆರ್.ಅಶೋಕ್, ನಾನು, ಬೆಲ್ಲದ ಸಿಎಂ ಆದರೆ ಖುಷಿ ಎನ್ನುತ್ತೀರಿ. ಡಿಕೆಶಿ ಸಿಎಂ ಆದರೂ ಖುಷಿ ಎಂದು ಹೇಳಿ ಒಮ್ಮೆ ಎಂದು ಕಾಲೆಳೆದರು.
ಡಿಕೆಶಿ ಹೆಸರೆತ್ತದ ಸಿದ್ದರಾಮಯ್ಯ: ಅದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ನಮ್ಮಲ್ಲಿ ಯಾರೇ ಸಿಎಂ ಆದರೂ ಓಕೆ. 224 ಮಂದಿ ಶಾಸಕರು ಇದ್ದಾರೆ. ಯಾರಾದರೂ ನಾನು ಖುಷಿ ಪಡುತ್ತೇನೆ. ಯಾಕೆ ಎಂ.ಬಿ.ಪಾಟೀಲ್, ಮುನಿಯಪ್ಪ, ಶಿವಾನಂದ ಪಾಟೀಲ್ ಆಗಬಾರದಾ? ಕೋನರೆಡ್ಡಿ, ಖಂಡ್ರೆ ಆಗಬಾರದಾ? ಎಲ್ಲರಿಗೋ ಯೋಗ್ಯತೆ ಇದೆ, ಅವಕಾಶ ಸಿಕ್ಕಿಲ್ಲ ಅಷ್ಟೇ ಎಂದರು. ವಿಪಕ್ಷಗಳು ಬೊಟ್ಟು ಮಾಡಿ ಕೇಳಿದರೂ, ಸಿಎಂ ಸಿದ್ದರಾಮಯ್ಯ, ಎಲ್ಲರ ಹೆಸರು ಹೇಳಿದರೂ ಡಿಕೆಶಿ ಹೆಸರು ಎತ್ತದೇ ಇರುವುದು ಕುತೂಹಲಕ್ಕೆ ಕಾರಣವಾಯಿತು.

