ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯ ಅಭ್ಯರ್ಥಿ ತಲೆನೋವಾಗಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ದಿ. ಶಾಮನೂರು ಶಿವಶಂಕರಪ್ಪ ಅವರ ಶಿಷ್ಯ ಸಾದಿಕ್ ಫೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾಮಪತ್ರ ಹಿಂಪಡೆಯುತ್ತಾರೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಸಾದಿಕ್ ಪೈಲ್ವಾನ್ ಅವರು ಯಾವುದೇ ಕಾರಣಕ್ಕೂ ನಾಮಪತ್ರ ಸಲ್ಲಿಕೆ ವಾಪಸ್ ಪಡೆಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಾದಿಕ್ ಪೈಲ್ವಾನ್ ಈ ಕುರಿತು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಅಹಿಂದ ಸಮುದಾಯದ ಬೆಂಬಲದಿಂದ ಕಣದಲ್ಲಿದ್ದೇನೆ. ಅಹಿಂದ ಸಮುದಾಯ ಬಿಟ್ಟು ನಾನಿಲ್ಲ. ಅವರ ಆಶೀರ್ವಾದ ನನ್ನಮೇಲೆ ಇದೆ. ಕಾಂಗ್ರೆಸ್ ಪಕ್ಷದ ನಾಯಕರು ನಮ್ಮಅಹಿಂದ ಸಮುದಾಯಕ್ಕೆ ಟಿಕೆಟ್ ನೀಡದೇ ಅನ್ಯಾಯ ಮಾಡಿದೆ. ಎಲ್ಲ ಜಾತಿ ಜನಾಂಗದವರು ನನಗೆ ಬೆಂಬಲ ನೀಡಿದ್ದಾರೆ.
ರಾಜ್ಯ ನಾಯಕರು, ನಮ್ಮ ಜಿಲ್ಲಾ ಕಾಂಗ್ರೆಸ್ ನಾಯಕರು ನಮ್ಮಸಮಾಜವನ್ನು ಕಡೆಗಣಿಸಿದ್ದಾರೆ. ಸಾದಿಕ್ ಪೈಲ್ವಾನ್ ಬಿಟ್ಟು ನಮ್ಮ ಸಮಾಜ ಇಲ್ಲ, ಸಮಾಜ ಬಿಟ್ಟು ಸಾದಿಕ್ ಪೈಲ್ವಾನ್ ಇಲ್ಲ. ನಾನು ಅಹಿಂದ ವರ್ಗದೊಂದಿಗೆ ಇದ್ದೇನೆ. ನನ್ನನ್ನು ನಿಮ್ಮ ಮನೆ ಮಗ ಎಂದುಕೊಂಡು ನನಗೆ ಆಶೀರ್ವಾದ ಮಾಡಿ. ಈ ಚುನಾವಣೆ ವಿಚಾರ ಇಡೀ ರಾಜ್ಯಕ್ಕೆ ಹರಡಿದೆ. ನಾಮಪತ್ರ ವಾಪಸ್ ಪಡೆಯಲ್ಲ ಎಂಬ ಧಾಟಿಯಲ್ಲಿ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ಅಲ್ಲದೇ ದಾವಣಗೆರೆ ದಕ್ಷಿಣ ಕ್ಷೇತ್ರದ ಜನರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡರು.
ನಾಮಪತ್ರ ಸಲ್ಲಿಕೆ: ಹಳೇ ದಾವಣಗೆರೆ ಭಾಗದ ಜೆ. ಇಮಾಂ ನಗರ ವೃತ್ತ (ಅರಳಿಮರ ಸರ್ಕಲ್) ನಿಂದ ಸಹಸ್ರಾರು ಜನ ಸಂಖ್ಯೆಯಲ್ಲಿ ಪಾಲಿಕೆಗೆ ಆಗಮಿಸಿ ಸಾದಿಕ್ ಪೈಲ್ವಾನ್ ಎರಡನೇ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಈ ವೇಳೆ, ಅವರ ಬೆಂಬಲಿಗರು ಹೊತ್ತು ಕುಣಿದರು. ಇದೇ ಖುಷಿಯಲ್ಲಿ ಸಾದಿಕ್ ಪೈಲ್ವಾನ್ ರಸ್ತೆಯಲ್ಲಿ ಸ್ಟೆಪ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿ ಹೊರನಡೆದ ಬಳಿಕ ಅದ್ಧೂರಿ ಮೆರವಣಿಗೆಯಲ್ಲಿ ಆಗಮಿಸಿದ ಸಾದಿಕ್ ನಾಮಪತ್ರ ಸಲ್ಲಿಸಿದ್ದರು.
ಇದಕ್ಕೂ ಮುನ್ನ ಮಾರ್ಚ್ 23ರಂದು ಮೊದಲೇ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭ ನಾನೇನು ಬಾಯಿಯಲ್ಲಿ ಲಾಲಿಪಾಪ್ ಇಟ್ಟುಕೊಂಡಿಲ್ಲ ಸಿಎಂ ಸಿದ್ದರಾಮಯ್ಯನವರೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಸವಾಲು ಹಾಕಿದ್ದರು.

