ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮೊಳಕಾಲ್ಮುರು ತಾಲ್ಲೂಕು ಮರ್ಲಹಳ್ಳಿ ಗ್ರಾಮದ ರಿ.ಸ.ನಂ. ೬೭ ರಲ್ಲಿ ಸ್ಟೋನ್ ಕ್ರಷರ್ಗೆ ಪರವಾನಗಿ ನೀಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಸ್ಟೋನ್ ಕ್ರಷರ್ಗೆ ಅನುಮತಿ ನೀಡಿರುವುದರಿಂದ ಪ್ರಕೃತಿ ಸಂಪತ್ತಿಗೆ ಹಾನಿಯುಂಟಾಗುತ್ತಿದೆ. ಪಶು, ಪಕ್ಷಿ, ಪ್ರಾಣಿ ಸಂಕುಲಗಳ ಜೀವಕ್ಕೆ ಅಪಾಯ ತಂದೊಡ್ಡುವುದಲ್ಲದೆ ಸುತ್ತಮುತ್ತಲಿನ ಜನಜೀವನದ ಮೇಲೆ ದುಷ್ಪರಿಣಾಮವಾಗಲಿದೆ. ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ರಕ್ಷಿಸಬೇಕಾಗಿರುವುದರಿಂದ ಸ್ಟೋನ್ ಕ್ರಷರ್ಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡುತ್ತ ರಾಜ್ಯ ಸರ್ಕಾರದ ಯಾವ ಗ್ಯಾರೆಂಟಿ ಸೌಲಭ್ಯಗಳು ನಮಗೆ ಬೇಕಾಗಿಲ್ಲ. ತೊಂದರೆ ಕೊಡದೆ ನಮ್ಮ ಪಾಡಿಗೆ ನಾವು ನೆಮ್ಮದಿಯಾಗಿ ಬದುಕಲು ಬಿಟ್ಟರೆ ಸಾಕು. ಶಿವಶಕ್ತಿ ಕಂಪನಿಯವರಿಗೆ ಸ್ಟೋನ್ ಕ್ರಷರ್ಗೆ ಅನುಮತಿ ನೀಡಿದ್ದು, ಇಡಿ ರಾಜ್ಯಕ್ಕೆ ಪೂರೈಸುವಷ್ಟು ಜೆಲ್ಲಿ ಕಲ್ಲುಗಳು ಇಲ್ಲಿ ಸಿದ್ದವಾಗುತ್ತಿವೆ. ನಾಲ್ಕು ದಿಕ್ಕುಗಳಲ್ಲಿಯೂ ಬೆಟ್ಟ, ಗುಡ್ಡಗಳಿಂದ ಕೂಡಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿರುವ ನೈಸರ್ಗಿಕ ಸಂಪತ್ತನ್ನು ನಾಶ ಮಾಡಿದರೆ ಮುಂದಿನ ಪೀಳಿಗೆ ಶಪಿಸುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಹೆಚ್ಚು ಮತಗಳನ್ನು ಪಡೆದು ಗೆದ್ದು ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣರವರು ಈ ಬಗ್ಗೆ ಚಕಾರವೆತ್ತದೆ ಮೌನ ವಹಿಸಿದ್ದಾರೆ. ನೆರೆಯ ಆಂಧ್ರದಿಂದ ರೌಡಿಗಳು ಇಲ್ಲಿಗೆ ಬಂದು ಬೆದರಿಕೆ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗಿ ಸ್ಟೋನ್ ಕ್ರಷರ್ಗೆ ಅನುಮತಿ ನೀಡಿದ್ದಾರೆ. ಮೊಳಕಾಲ್ಮುರು ಸುತ್ತಮುತ್ತ ಗುಡ್ಡಗಳಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದರಿಂದ ಮನೆಗಳಿಗೆ ಹಾನಿಯಾಗುತ್ತಿದೆಯಲ್ಲದೆ ಸಕಲ ಜೀವರಾಶಿಗಳು ಭಯದಿಂದ ಬದುಕುವಂತಾಗಿದೆ. ಕ್ರಷರ್ಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮರ್ಲಹಳ್ಳಿ ಎಸ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಗೇನಾಳ್ ಎಸ್.ಆರ್.ತಿಪ್ಪೇಸ್ವಾಮಿ
ವೆಂಕಟೇಶ್, ತಿಮ್ಮಯ್ಯ, ಹಿರೇಹಳ್ಳಿ ನಾಗರಾಜ, ಪಾಪಣ್ಣ, ದಂಡಿ ಸೂರಯ್ಯ, ರಾಜ, ಬಸವರಾಜ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

