ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಲ್ಲಾ ರಂಗದಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದು, ಸಾಧನೆಗಳನ್ನು ಗುರುತಿಸಿ ಸಮಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಶಿವಣ್ಣ ತಿಳಿಸಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ಐಕ್ಯುಎಸಿ. ಸಹಯೋಗದೊಂದಿಗೆ ಶುಕ್ರವಾರ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದರಿಂದ ಅನೇಕ ವಚನಗಾರ್ತಿಯರು ಅನುಭವ ಮಂಟಪ ಪ್ರವೇಶಿಸಿದರು. ೨೧ ನೇ ಶತಮಾನದಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ವಿದ್ಯಾರ್ಥಿನಿಯರು ಸಾಧನೆಯತ್ತ ಗಮನಹರಿಸಬೇಕೆಂದು ಕರೆ ನೀಡಿದರು.
ಮುಟ್ಟಿನ ನೈರ್ಮಲ್ಯ ಕಾಪಾಡುವುದಕ್ಕಾಗಿ ಪ್ಯಾಡ್, ಬರ್ನಿಂಗ್ ಮಿಷನ್ನ್ನು ಕಾಲೇಜಿನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಪಿಂಕ್ ಬಾಕ್ಸ್ನಲ್ಲಿರುವ ಪ್ಯಾಡ್ಗಳನ್ನು ಬಳಸಿಕೊಂಡು ಇದರ ಉಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಎಸ್.ಜೆ.ಎಂ.ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕಿ ಸುಮನಾ ಅಂಗಡಿ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತ ಸಮಾಜದಲ್ಲಿ ನಡೆಯುತ್ತಿರುವ ಅಪರಾಧದ ಜಾಲಗಳು ಹಾಗೂ ಸೈಬರ್ ಕ್ರೈಂಗಳ ಬಗ್ಗೆ ಜಾಗರೂಕರಾಗಿದ್ದುಕೊಂಡು ತಮ್ಮನ್ನು ತಾವೆ ರಕ್ಷಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಸಂಚಾಲಕಿ ಡಾ.ವಿಜಯಲಕ್ಷ್ಮಿ ಮಾತನಾಡಿ ಯಾವುದೇ ರಾಷ್ಟ್ರ ಅಭಿವೃದ್ದಿ ಹೊಂದಬೇಕಾದರೆ ಮೊದಲು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ಸದೃಢ ಸಮಾಜ ನಿರ್ಮಾಣಕ್ಕಾಗಿ ಲಿಂಗ ಸಮಾನತೆ ಮತ್ತು ಶಿಕ್ಷಣ ಹೆಣ್ಣಿಗೆ ಅತ್ಯವಶ್ಯಕ ಎಂದು ತಿಳಿಸಿದರು.
ಇಂಗ್ಲಿಷ್ ವಿಭಾಗದ ಡಾ.ಮಧುಸೂದನ ಪಿ.ಎನ್. ಕನ್ನಡ ವಿಭಾಗದ ಡಾ.ಗಾಯಿತ್ರಮ್ಮ, ಐ.ಕ್ಯು.ಎ.ಸಿ. ಸಂಚಾಲಕರಾದ ಹಲಸಂದಿ ಸತೀಶ್, ವಾಣಿಜ್ಯಶಾಸ್ತ್ರದ ಕನಕರಾಜು
ಗಿರೀಶ್ ಎಂ. ಗ್ರಂಥಪಾಲಕ ಕುಮಾರಸ್ವಾಮಿ ಬಿ.ಹೆಚ್, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್ ಆರ್, ನಂದಿನಿ ಟಿ., ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

