ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಗ್ನಿಯನ್ನೇ ಮೂಲವಾಗಿ ನಂಬಿ ಹದಿನಾಲ್ಕು ಪಂಗಡಗಳನ್ನು ಒಗ್ಗೂಡಿಸಿ ಆರಾಧಿಸುವ ತಿಗಳ ಸಮಾಜವು ಬನ್ನಿರಾಯನನ್ನು ವೀರ ಪುರುಷನನ್ನಾಗಿ ಪೂಜಿಸುತ್ತದೆ. ತಿಗಳ ಕ್ಷತ್ರಿಯ ಸಮಾಜದವರು ಪ್ರಮುಖವಾಗಿ ಹೂವು ಮತ್ತು ತರಕಾರಿ ಕೃಷಿಯಲ್ಲಿ ನಿರತರಾದವರು. ಅಗ್ನಿ ಬನ್ನಿರಾಯ ಸ್ವಾಮಿ ಸಮುದಾಯದ ಏಕತೆ ಮತ್ತು ವೀರ ಪರಂಪರೆಯ ಸಂಕೇತವಾಗಿದ್ದಾರೆ’ ಎಂದು ಯುವ ಮುಖಂಡ ಸುಬ್ರಮಣಿ ತಿಳಿಸಿದರು.
ಅರದೇಶನಹಳ್ಳಿಯಲ್ಲಿ ತಿಗಳ ಸಮುದಾಯದ (ಅಗ್ನಿವಂಶ ಕ್ಷತ್ರಿಯರು) ವತಿಯಿಂದ ಆಯೋಜನೆ ಮಾಡಲಾಗಿದ್ದ ವೀರಪುರುಷ ಅಗ್ನಿ ಬನ್ನಿರಾಯ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಗ್ನಿ ಬನ್ನಿರಾಯಸ್ವಾಮಿ ನಮ್ಮ ಕುಲದ ಮೂಲಪುರುಷ, ಕೃಷಿ, ತೋಟಗಾರಿಕೆ ನಮ್ಮ ಮೂಲಕಸುಬು. ನಮ್ಮ ಈ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಅದ್ದೂರಿಯಾಗಿ ಆಚರಸಬೇಕೆಂಬುದು ನಮ್ಮೆಲ್ಲರ ಆಶಯ ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ತಾಲೂಕು ಆಡಳಿತದ ಸಹಕಾರದೊಂದಿಗೆ ಉನ್ನತ ಮಟ್ಟದಲ್ಲಿ ಆಚರಿಸಲಾಗುವುದು ಎಂದರು.
ವೀರಪುರುಷ ಅಗ್ನಿ ಬನ್ನಿರಾಯ ಜಯಂತಿ ಅಂಗವಾಗಿ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ಬೆಳ್ಳಿ ರಥದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸಿ. ಮಂಜುನಾಥ್ ಮಾತನಾಡಿ ಮಹಾನ್ ದಾರ್ಶನಿಕರಾಗಿದ್ದ ಅಗ್ನಿ ಬನ್ನಿರಾಯ ಅವರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ. ಶ್ರಮ ಜೀವನಕ್ಕೆ ಹೆಸರಾದ ತಿಗಳ ಕ್ಷತ್ರಿಯ ಸಮುದಾಯದವರು ಅಗ್ನಿ ಬನ್ನಿರಾಯ ಅವರನ್ನು ಆರಾಧ್ಯ ದೇವರಾಗಿ ಪೂಜಿಸುತ್ತಾರೆ. ಶೋಷಣೆಮುಕ್ತ ಸಮಾಜಕ್ಕೆ ಶ್ರಮಿಸಿದ್ದ ಅಗ್ನಿ ಬನ್ನಿರಾಯ ಸತ್ಯ ಪ್ರತಿಪಾದಕರಾಗಿದ್ದರು ಎಂದರು.
ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್ ಮಾತನಾಡಿ, ಅಗ್ನಿ ಬನ್ನಿರಾಯರು ತಿಗಳ ಸಮುದಾಯದ ಆರಾಧ್ಯ ದೈವ. ಅವರ ಧೈರ್ಯ, ತ್ಯಾಗ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಅಗ್ನಿವಂಶ ಪ್ರತಿನಿಧಿಯಾಗಿರುವ ಅಗ್ನಿ ಬನ್ನಿರಾಯರು ಧರ್ಮರಕ್ಷಣೆ ಮತ್ತು ಜನರ ಹಿತಕ್ಕಾಗಿ ಹೋರಾಡಿದ ವೀರಪುರುಷ. ಅವರ ಜೀವನ ಮೌಲ್ಯಗಳು ಸಮಾನತೆ, ಧೈರ್ಯ ಮತ್ತು ನಿಷ್ಠೆಯ ಸಂದೇಶವನ್ನು ಸಾರುತ್ತವೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಗಜಕೇಸರಿ ಸೇನೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಜು , ಉಪಾಧ್ಯಕ್ಷ ಲಕ್ಷ್ಮಯ್ಯ, ಕಾರ್ಯದರ್ಶಿ ನಾಗೇಶ್, ಖಜಾಂಚಿ ಸುಂದರ್, ಮುಖಂಡರಾದ ಮಂಜಣ್ಣ, ವಿಜಯ್ ಕುಮಾರ್, ಸುಬ್ಬಣ್ಣ, ಯುವ ಮುಖಂಡ ಅರದೇಶನಹಳ್ಳಿ ಸುಬ್ರಮಣಿ ಉಪಸ್ಥಿತರಿದ್ದರು.

