ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸುಂದರ ಚಂದಿರ
ಮೂಡಿ ಬರುವನು ಚಂದಿರ
ನೋಡಲೆನಿತು ಸುಂದರ
ಅವ ಕಳೆಯಲು ಕತ್ತಲ ಕಂದರ
ನಿಜವು ಬದುಕು ಸಹಜ ಸುಂದರ
ತಾಯಿ ತುತ್ತು ತಿನಿಸಲು
ಹೊರಬಂದು ನಿನ್ನ ಕರೆವಳು
ಆ ಕಂದ ನಿನ್ನ ಕಾಣಲು
ಹೊಟ್ಟೆ ಬಿರಿಯೆ ಊಟ ಮಾಡಲು
ಮುದ್ದಾಗಿ ಮಾಮ ಎಂದು ಕೂಗಲು
ಮನದಿ ಮೂಡಿ ನಗೆಯ ಹೊನಲು
ಆ ತಾಯಿ ನಿನ್ನ ಕಥೆಯ ಹೇಳಲು
ಕಣ್ಣರಳಿಸಿ ಕೂಸು ಕಥೆಯ ಕೇಳಲು
ಮುದ್ದು ಮಗು ನಿನ್ನ ನೋಡುತಿಹುದು
ಅತಿಸೂಕ್ಷ್ಮವಾಗಿ ಗಮನಿಸಿಹುದು
ಮನದಿ ಪ್ರಶ್ನೆಯೊಂದು ಮೂಡಿಹುದು
ಅದಾವ ರೋಗ ನಿನ್ನ ತಬ್ಬಿಹುದು
ಬೆಳಯುತಲಿದ್ದರೆ ನೀ
ಬೆಳೆಯುತ್ತಲೇ ಹೋಗುವೆ
ಕರಗಲು ಹೊರಟರೆ ನೀ
ಕಾಣದೆ ಮಾಯವಾಗಿ ಹೋಗುವೆ
ನನಗೆ ಸುಳ್ಳನು ನೀ ಹೇಳಬೇಡ
ನಿನ್ನೀ ರೋಗಕೆ ಮದ್ದೇ ಇಲ್ಲ
ಸುಳ್ಳುಹೇಳಿ ಮೂರ್ಖನಾಗಿಸಬೇಡ
ನಿನ್ನ ರೋಗವಿದು ಸರಿಹೋಗುವುದಿಲ್ಲ
ತಾಯ ಸನಿಹ ಬಳಗ ನೀನು
ಮಕ್ಕಳಿಗೆಲ್ಲ ಮಾಮ ನೀನು
ಪ್ರೇಮಿಗಳಿಗೆ ರಸಿಕ ನೀನು
ಕವಿಗಳಿಗೆ ಪ್ರೇರಕ ನೀನು
ಕವಿತೆ: ಶಿಲ್ಪಾ ಜಗದೀಶ್, ಹಿರಿಯೂರು, ಚಿತ್ರದುರ್ಗ ಜಿಲ್ಲೆ.

