“ನಮ್ಮ ನಾಡು – ನಮ್ಮ ಭಾಷೆ – ನಮ್ಮ ಉದ್ಯೋಗ: ಎಚ್ಚರದ ಘಂಟೆ”

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 “ನಮ್ಮ ನಾಡು ನಮ್ಮ ಭಾಷೆ ನಮ್ಮ ಉದ್ಯೋಗ: ಎಚ್ಚರದ ಘಂಟೆ.
ಒಂದು ಕಾಲದಲ್ಲಿ ನಮ್ಮ ನಾಡಿನ ಬ್ಯಾಂಕ್‌ಗಳಿಗೆ ಕಾಲಿಟ್ಟರೆ ಅದು ಕೇವಲ ವ್ಯವಹಾರದ ಸ್ಥಳವಲ್ಲ
, ನಮ್ಮತನದ ಅನುಭವವಾಗುತ್ತಿತ್ತು. ದಕ್ಷಿಣ ಕನ್ನಡದ ಮೃದುವಾದ ಕನ್ನಡ, ತುಳು, ಕೊಂಕಣಿ ಮಾತಿನ ಸೊಗಡು ಅದು ಕಿವಿಗೆ ಮಾತ್ರವಲ್ಲ, ಮನಸ್ಸಿಗೂ ಹಿತ ಕೊಡುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಶೆಟ್ಟರು, ಭಟ್ಟರು, ಹೆಗಡೆ, ಪೈಗಳು ಅವರು ಕೇವಲ ಉದ್ಯೋಗಿಗಳು ಅಲ್ಲ, ನಮ್ಮ ಮನೆಯವರಂತಿದ್ದರು. ಮಾತಿನಲ್ಲಿ ಸಲುಗೆ, ನಡೆನಲ್ಲಿ ಆತ್ಮೀಯತೆ, ಕೆಲಸದಲ್ಲಿ ನಿಷ್ಠೆ ಇದುವೇ ನಮ್ಮ ಬ್ಯಾಂಕಿಂಗ್ ಸಂಸ್ಕೃತಿ.

ಆದರೆ ಇಂದಿನ ಸ್ಥಿತಿ ಸಂಪೂರ್ಣ ಬದಲಾಗಿದೆ. ಬ್ಯಾಂಕ್ ಒಳಗೆ ಹೋದರೆ ನಮ್ಮ ರಾಜ್ಯದಲ್ಲಿದ್ದೇವೆ ಎಂಬ ಭಾವನೆ ಕೂಡ ಮೂಡುವುದಿಲ್ಲ. ಹಿಂದಿ ಭಾಷೆಯ ಪ್ರಭಾವ, ಅಪರಿಚಿತ ಮುಖಗಳು, ಅಸಹಜ ವರ್ತನೆ ಇದು ನಮ್ಮ ನಾಡಿನ ಸೌಹಾರ್ದತೆಯ ವಿರುದ್ಧದ ಒಂದು ದೊಡ್ಡ ಬದಲಾವಣೆ. ನಮ್ಮ ದುಡ್ಡಿನ ಕೆಲಸಕ್ಕೂ ಹೋಗಿದಾಗ ನಾವು ಬೇಡಿಕೆಯವರಂತೆ ಕಾಣಿಸುವ ಸ್ಥಿತಿ ಉಂಟಾಗಿದೆ.

- Advertisement - 

ಒಂದು ಕಾಲದಲ್ಲಿ ದಕ್ಷಿಣ ಕನ್ನಡವನ್ನು ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲುಎಂದು ಕರೆಯಲಾಗುತ್ತಿತ್ತು. ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇವೆಲ್ಲವೂ ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ಹೆಮ್ಮೆಯ ಗುರುತುಗಳು. ಆದರೆ ಇವತ್ತು ಅವುಗಳೆಲ್ಲಾ ದೊಡ್ಡ ಬ್ಯಾಂಕ್‌ಗಳ ಒಳಗೆ ಲೀನವಾಗಿ, ತಮ್ಮದೇ ಗುರುತು ಕಳೆದುಕೊಂಡಿವೆ. ಇದು ಕೇವಲ ಬ್ಯಾಂಕ್‌ಗಳ ವಿಲೀನವಲ್ಲ, ನಮ್ಮ ಗುರುತಿನ ನಾಶ.

ಇದಕ್ಕೂ ಹೆಚ್ಚು ಕಳವಳಕಾರಿಯ ಸಂಗತಿ ಏನೆಂದರೆ ಉದ್ಯೋಗ ಕ್ಷೇತ್ರದಲ್ಲಿ ನಮ್ಮವರ ಪಾಲು ಕಡಿಮೆಯಾಗುತ್ತಾ ಹೋಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಪರಭಾಷಿಕರೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಕೆಲವು ಅಂದಾಜುಗಳ ಪ್ರಕಾರ, ಬೆಂಗಳೂರಿನಲ್ಲಿ 60% ಕ್ಕೂ ಹೆಚ್ಚು ಜನ ಪರಭಾಷಿಕರು ಎಂಬ ಸ್ಥಿತಿ ಉಂಟಾಗಿದೆ. ಐಟಿ, ಬ್ಯಾಂಕಿಂಗ್, ಸೇವಾ ವಲಯ, ಹೋಟೆಲ್, ಅಂಗಡಿ ಎಲ್ಲೆಡೆ ಅವರ ಪ್ರಭಾವ ಹೆಚ್ಚಾಗಿದೆ.

- Advertisement - 

ಇದು ಕೇವಲ ಭಾಷೆಯ ವಿಷಯವಲ್ಲ ಇದು ಉದ್ಯೋಗದ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ, ಭವಿಷ್ಯದ ಪ್ರಶ್ನೆ.

ನಾವು ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ. ಭಾರತ ಒಂದು ವೈವಿಧ್ಯಮಯ ದೇಶ ಎಲ್ಲರೂ ಎಲ್ಲೆಡೆ ಕೆಲಸ ಮಾಡಬಹುದು. ಆದರೆ ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ, ನಮ್ಮ ಜನರಿಗೆ, ನಮ್ಮ ಉದ್ಯೋಗಕ್ಕೆ ಆದ್ಯತೆ ಸಿಗಬೇಕು. ಅದು ನಮ್ಮ ಹಕ್ಕು.

ಹಿಂದಿ ಅಥವಾ ಬೇರೆ ಭಾಷೆಗಳನ್ನು ನಾವು ವಿರೋಧಿಸುವುದಿಲ್ಲ. ಒಂದು ಭಾಷೆಯಾಗಿ ಹಿಂದಿಯನ್ನೂ, ಅದರ ಸಾಹಿತ್ಯ, ಸಂಗೀತ, ಸಿನಿಮಾಗಳನ್ನೂ ನಾವು ಗೌರವಿಸುತ್ತೇವೆ. ಆದರೆ ಹಿಂದಿ ಹೇರಿಕೆ, ಸ್ಥಳೀಯರ ಮೇಲಿನ ಅನ್ಯಾಯ, ಉದ್ಯೋಗಗಳಲ್ಲಿ ಅಸಮಾನತೆ ಇವುಗಳಿಗೆ ಮಾತ್ರ ನಮ್ಮ ಸ್ಪಷ್ಟ ವಿರೋಧ.

ಇಂಗ್ಲೀಷ್ ಒಂದು ಸಂಪರ್ಕ ಭಾಷೆಯಾಗಿ ನಮ್ಮಿಗೆ ಅನೇಕ ಅವಕಾಶಗಳನ್ನು ನೀಡಿದೆ. ಆದರೆ ಹಿಂದಿ ಹಾಗಲ್ಲ ಅದು ಹಲವಾರು ಸ್ಥಳೀಯ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಉತ್ತರ ಭಾರತದ ಹಲವು ಮಾತೃಭಾಷೆಗಳು ಈಗ ಹಿಂದಿಯ ಒಳಗೆ ಲೀನವಾಗುತ್ತಿರುವುದು ಒಂದು ಉದಾಹರಣೆ. ಇದೇ ಸ್ಥಿತಿ ನಮ್ಮ ಕನ್ನಡಕ್ಕೂ ಬಾರದಂತೆ ನಾವು ಎಚ್ಚರಿಕೆಯಿಂದ ಇರಬೇಕು.

ಅತ್ಯಂತ ವಿಷಾದಕರ ಸಂಗತಿ ಏನೆಂದರೆ ನಮ್ಮದೇ ಜನರಲ್ಲಿ ಕೆಲವರು ಈ ಬದಲಾವಣೆಗಳನ್ನು ಪ್ರಶ್ನಿಸುವವರನ್ನೇ ಟೀಕಿಸುತ್ತಾರೆ. ಕನ್ನಡದ ಪರ ಹೋರಾಡುವವರನ್ನು ಅತಿರೇಕಿಗಳೆಂದು ಕರೆಯುತ್ತಾರೆ. ಇದು ನಮ್ಮ ಒಳಗಿನ ದುರ್ಬಲತೆ.

ಇದೀಗ ಸಮಯ ಬಂದಿದೆ-
ನಮ್ಮ ಭಾಷೆಯ ಮೇಲೆ ಗೌರವ ಬೆಳೆಸಿಕೊಳ್ಳುವ ಸಮಯ.
ನಮ್ಮ ಮಕ್ಕಳಿಗೆ ಕನ್ನಡದ ಮೌಲ್ಯ ಕಲಿಸುವ ಸಮಯ.
ನಮ್ಮ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ಬೇಡುವ ಸಮಯ.
ನಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ನಿಲ್ಲುವ ಸಮಯ.
ನಮ್ಮ ನಾಡು ನಮ್ಮದು. ನಮ್ಮ ಭಾಷೆ ನಮ್ಮ ಆತ್ಮ. ನಮ್ಮ ಉದ್ಯೋಗ ನಮ್ಮ ಭವಿಷ್ಯ.

ಇವುಗಳನ್ನು ಉಳಿಸಿಕೊಳ್ಳಲು ನಾವು ಈಗಲೇ ಎಚ್ಚರಗೊಂಡರೆ ಮುಂದಿನ ಪೀಳಿಗೆಗೆ ನಾವು ಗೌರವದಿಂದ ತುಂಬಿದ ಕರ್ನಾಟಕವನ್ನು ಕೊಡಬಹುದು. ಇಲ್ಲದಿದ್ದರೆ, ನಮ್ಮದೇ ನಾಡಿನಲ್ಲಿ ನಾವು ಅತಿಥಿಗಳಾಗುವ ದಿನ ದೂರದಲ್ಲಿಲ್ಲ…… ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

Share This Article
error: Content is protected !!
";