ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಗುಡುಗಿರುವ ನ್ಯಾಯಾಲಯ, ಕೂಡಲೇ ಅಧಿಕಾರಿಗಳ ರಕ್ಷಣೆಗೆ ಕೇಂದ್ರ ರಕ್ಷಣಾ ಪಡೆಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಘಟನೆಯ ಹಿನ್ನೆಲೆ:
ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದ ಮೂವರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ನ್ಯಾಯಾಂಗ ಅಧಿಕಾರಿಗಳಿಗೆ ಸ್ಥಳೀಯ ಗುಂಪೊಂದು ಬೆದರಿಕೆ ಹಾಕಿತ್ತು. ಅಧಿಕಾರಿಗಳಿಗೆ ಗಂಟೆಗಳ ಕಾಲ ಆಹಾರ ಮತ್ತು ನೀರು ನೀಡದೆ ಹಿಂಸಿಸಿರುವುದು ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಬೆಳಕಿಗೆ ಬಂದಿದೆ.
ಸುಪ್ರೀಂ ಕೋರ್ಟ್ನ ಖಡಕ್ ಎಚ್ಚರಿಕೆ:
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಘಟನೆಯನ್ನು “ನ್ಯಾಯ ವ್ಯವಸ್ಥೆಗೆ ಅಡ್ಡಿಪಡಿಸುವ ಲಜ್ಜೆಗೆಟ್ಟ ಮತ್ತು ದುರುದ್ದೇಶಪೂರ್ವಕ ಪ್ರಯತ್ನ” ಎಂದು ಬಣ್ಣಿಸಿದೆ. ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಈ ಕೆಳಗಿನ ಕ್ರಮಗಳಿಗೆ ಮುಂದಾಗಿದೆ.
ಶೋಕಾಸ್ ನೋಟಿಸ್: ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನೇರ ಹಾಜರಾತಿಗೆ ಸೂಚನೆ: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾಧಿಕಾರಿ, ಡಿಜಿಪಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಏಪ್ರಿಲ್-6ರಂದು ನಡೆಯುವ ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಿರಬೇಕು ಎಂದು ಆದೇಶಿಸಿದೆ.
ಕೋರ್ಟ್ ನೀಡಿದ ಪ್ರಮುಖ ಮಧ್ಯಂತರ ನಿರ್ದೇಶನಗಳು:
ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ಸುಪ್ರೀಂ ಕೋರ್ಟ್ ಕೆಲವು ಮಹತ್ವದ ಆದೇಶಗಳನ್ನು ಹೊರಡಿಸಿದೆ.
ಕೇಂದ್ರ ಪಡೆಗಳ ಭದ್ರತೆ: ಅಧಿಕಾರಿಗಳು ಕೆಲಸ ಮಾಡುವ ಸ್ಥಳ ಮತ್ತು ಅವರು ತಂಗಿರುವ ಹೋಟೆಲ್/ಅತಿಥಿ ಗೃಹಗಳಿಗೆ ಕೇಂದ್ರ ಪಡೆಗಳ ರಕ್ಷಣೆ ನೀಡಬೇಕು.
ಗುಂಪು ಸೇರುವುದಕ್ಕೆ ನಿಷೇಧ: ಮತದಾರರ ಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಲು ಬರುವವರು 3 ರಿಂದ 5 ಜನರಿಗಿಂತ ಹೆಚ್ಚು ಮಂದಿ ಅಧಿಕಾರಿಗಳ ಕಚೇರಿ ಪ್ರವೇಶಿಸುವಂತಿಲ್ಲ.
ತಕ್ಷಣದ ಕ್ರಮ: ಅಧಿಕಾರಿಗಳು ಅಥವಾ ಅವರ ಕುಟುಂಬದ ಮೇಲೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಸಮನ್ವಯ: ಭದ್ರತಾ ವಿಚಾರದಲ್ಲಿ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿರಬೇಕು.”ಕಾನೂನಿನ ನಿಯಮಗಳನ್ನು ಗಾಳಿಗೆ ತೂರುವುದು ನ್ಯಾಯ ವ್ಯವಸ್ಥೆಗೆ ಒಡ್ಡಿದ ನೇರ ಸವಾಲು. ಯಾವುದೇ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಎಚ್ಚರಿಸಿದೆ.

