ಚಂದ್ರವಳ್ಳಿ ನ್ಯೂಸ್, ತೇಜ್ಗಢಿ:
“ಮದುವೆಯಾದ ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಿಂದ ಇಲ್ಲದಿದ್ದರೆ, ಅವಳನ್ನು ಅಲ್ಲಿಯೇ ಇರುವಂತೆ ಬಲವಂತ ಮಾಡುವುದು ತಪ್ಪು. ಅವಳನ್ನು ಗೌರವದಿಂದ ತವರು ಮನೆಗೆ ಮರಳಿ ಕರೆತರುವುದು ಪ್ರತಿ ತಂದೆಯ ಕರ್ತವ್ಯ,” ಎನ್ನುವ ಮೂಲಕ ಜ್ಞಾನೇಂದ್ರ ಶರ್ಮಾ ಅವರು ಸಮಾಜಕ್ಕೆ ಹೊಸ ಸಂದೇಶ ನೀಡಿದ್ದಾರೆ.
ವೈವಾಹಿಕ ಜೀವನದಲ್ಲಿ ಎದುರಾದ ಕಹಿ ಘಟನೆಗಳಿಂದಾಗಿ ತಮ್ಮ ಮಗಳು ಪ್ರಣೀತಾ ಶರ್ಮಾ ಅವರನ್ನು ಜ್ಞಾನೇಂದ್ರ ಅವರು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. “ನಾವು ಯಾವುದೇ ಜೀವನಾಂಶ ಅಥವಾ ಆಸ್ತಿಯನ್ನು ಬಯಸಲಿಲ್ಲ, ನಮಗೆ ನಮ್ಮ ಮಗಳು ಮುಖ್ಯ,” ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.
ಮಹಿಳೆಯರಿಗೆ ಪ್ರಣೀತಾ ಕರೆ: ‘ಆರ್ಥಿಕ ಸ್ವತಂತ್ರರಾಗಿ’
ತಮ್ಮ ಜೀವನದ ಕಠಿಣ ನಿರ್ಧಾರದ ಬಳಿಕ ಇತರ ಮಹಿಳೆಯರಿಗೆ ಧೈರ್ಯ ತುಂಬಿರುವ ಪ್ರಣೀತಾ ಶರ್ಮಾ, “ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ. ಮೌನ ಮುರಿಯಿರಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ. ಮದುವೆಗೂ ಮುನ್ನ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಮತ್ತು ಸದೃಢರಾಗಿರುವುದು ಅತ್ಯಗತ್ಯ,” ಎಂದು ಸಲಹೆ ನೀಡಿದ್ದಾರೆ.
ಕುಟುಂಬವೇ ದೊಡ್ಡ ಶಕ್ತಿ-
ಕಳೆದ ಕೆಲವು ವರ್ಷಗಳಿಂದ ಶರ್ಮಾ ಕುಟುಂಬ ಸರಣಿ ಸಂಕಷ್ಟಗಳನ್ನು ಎದುರಿಸುತ್ತಿದೆ. 2022ರಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಣೀತಾ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಈಗ ವಿಚ್ಛೇದನದಂತಹ ನೋವಿನ ಸಂದರ್ಭದಲ್ಲೂ ಕುಟುಂಬವು ಬೆನ್ನೆಲುಬಾಗಿ ನಿಂತಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರಣೀತಾ ಶರ್ಮಾ ಅವರು ಪ್ರಸ್ತುತ ತೇಜ್ಗಢಿಯ ಪ್ರಣವ್ ವಶಿಷ್ಠ ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೋವಿನ ನಡುವೆಯೂ ಈ ಕುಟುಂಬ ತೋರಿರುವ ಸ್ಥಿತಪ್ರಜ್ಞೆ ಮತ್ತು ಹೆಣ್ಣುಮಕ್ಕಳ ಘನತೆಯನ್ನು ಎತ್ತಿಹಿಡಿದ ರೀತಿ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

