ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಶಯ ಕಥೆ ಭಾಗ-8 ಕುಮಾರ ಬಡಪ್ಪ
ಸ್ಟೇಷನ್ನಿಗೆ ಹೋಗಿದ್ದೆ, ದಫೆದಾರ ಕೇಸ್ ಹೆಂಗ ಬರಕಬೇಕು ಅಂತವ್ನೆ, ನಾವೇ ಕೇಸ್ ಕೊಟ್ಟು ನಮ್ಮ ಮಾನನ ಹರಾಜಿಗೆ ಇಟ್ಕಂಡಂಗ ಕಣೆ. ನೀನು ಶುದ್ಧವಾಗಿದಿಯಂತ ನನಗೆ ತಿಳದ್ರೆ ಸಾಕು, ಯಾರು ಏನಂದ್ಕಂಡ್ರೂ ನನ್ಗೇನಾಗ್ಬೇಕಾಗಿದೆ.
ಹೆಂಡ್ತಿ ತಲೆಯ ನೇವರಿಸೋದ ಬಿಟ್ಟು ತಿಪ್ಪಯ್ಯ ಬೀಡಿ ಬಾಯಿಗಿಟ್ಕಂಡವನೇ ಕಡ್ಡಿ ತೀಡಿದ. ಗಂಡನ ಎದೆಗೆ ತಲೆಯಿಟ್ಟು ಒರಗಿಕೊಳ್ಳುತ್ತಲೇ ಓಬವ್ವೆಯ ಕಣ್ಣಂಚಲ್ಲಿ ನೀರಾಡಿದವು.
ಮದುವೆ ಆಗಿ ಆರು ವರ್ಷ, ತವರು ಬಿಟ್ಟು ಬಂದು ನಿಮ್ಮ ಜೊತೆ ಬದುಕ್ತಿದೀನಿ, ಯಾವತ್ತಾದ್ರೂ ಅಂತದ್ದನ್ನ ಕಂಡೀವ್ರ, ನಿನ್ನ ಗೆಣಕಾರ ಅಂತ ಜೊತೆ ಬಂದಾಗ ಊಟ ಕೊಟ್ಟೆ, ಇಂಥ ಒಬ್ಬ ಅಣ್ಣ ಸಿಕ್ಕನಲ್ಲ ಅಂತ ಮಾತಿನಲ್ಲಿ ಸಲಿಗೆ ಕೊಟ್ಟೆ, ಅದು ಮಂದಿಯೊಳಗೆ ಹಿಂಗ ತಿರುಗುತ್ತೆ ಅಂತ ನನ್ಗೇನು ಗೊತ್ತು. ಮಾತಾಡುತ್ತಲೇ ದುಃಖ ಮರುಕಳಿಸಿ ಬಲಗೈಲಿದ್ದ ಸೀರೆ ಸೆರಗು ಕಣ್ಣ ಹನಿಗಳನ್ನ ಒತ್ಕೊಳ್ತಿತ್ತು. ತಿಪ್ಪಯ್ಯ ಮಾತ್ರ ಎಲ್ಲವನ್ನೂ ಮೀರಿ ನಿಂತವನ ಹಾಗೆ..
ಓಬೀ.. ಸುದ್ದೀ ಜೋರಾಗೆ ಹಬ್ಬೈತೆ, ಸ್ವಾರೆಬಾಯಿ ಮುಚ್ಚಬೋದು ಜನಗಳ ಬಾಯಿ ಮುಚ್ಚೋಕಾಗುತ್ತೇನು, ಆ ದ್ಯಾವ್ರು ನಿನ್ನ ಹೊಟ್ಯಾಗೊಂದು ಕೂಸು ಕೊಟ್ಟಿದ್ರೆ ಈ ಮಾತು ನೀನೂ ಕೇಳ್ತಿರಲಿಲ್ಲ, ನನಗೂ ಅಪವಾದ ಬರ್ತಿರ್ಲಿಲ್ಲ.
ಆ ಸೂಳಿ ಮಗ ಗಾದ್ರಿ, ಕುಡಿಯೋದ್ನ ಜಾಸ್ತಿ ಮಾಡ್ಕಂಡವ್ನಂತೆ, ಹೆಂಡ್ತಿ ಜೊತೆ ಗಲಾಟೆ ಮಾಡ್ಕಂತ, ಬೋಸುಡಿ ನೀನು ಹಿಂಗೇ ಮಾಡಲೇ ಅವಳ್ನಾ ಮನಿಗೇ ತಂದು ಇಟ್ಕಂತೀನಿ ಅಂತ ಹೇಳ್ತವ್ನಂತೆ.
ಆ ಮ್ಯಾಗಳ ಮನಿ ತಿಮ್ಮ, ನಾ ಬರಾಗಂಟ ಕಾದು ಇದನ್ನ ಹೇಳಿ ಹೋಗವ್ನೆ. ಹೆಂಡ್ತೀನ ಸಿಕ್ಕಾಪಟ್ಟೆ ಹೊಡಿತಾನಂತೆ, ತಂಗಿ ಅಂತ ಓಡಾಡ್ತಿದ್ದವನು ಈಗ ಇಟ್ಕಂಡೇ ಬಿಡಬೇಕು ಅಂತ ಮನ್ಸು ಮಾಡಿದಾನೆ, ಮಾರಿಗೆ ಕ್ವಾಣ ಕಡ್ದಂಗೆ ಕಡ್ದಬಿಡ್ತೀನಿ ಆ ಮಿಂಡ್ರಿ ಮಗನ್ನ. ತಿಪ್ಪಯ್ಯ ಸಿಟ್ಟಲ್ಲಿ ಆವೇಶದಿಂದ ನಿಂತಲ್ಲೇ ಚಡಪಡಿಸಿದ.
ನಿನ್ನ ದಮ್ಮಯ್ಯ ಅಂತೀನಿ ಅವರಿವರ ಮಾತನ್ನ, ಕೇಳಬ್ಯಾಡ್ರಿ. ಹಳ್ಳೀನೇ ಕಂಡಂಗೆ ಆ ತಿಮ್ಮ ಎಂತವ್ನೂ ಅಂತ ನಿನ್ಗೂ ಗೊತ್ತೈತಲ್ಲ, ನಿಮ್ಮಿಬ್ರನ್ನ ನೋಡಿ ಅಸೂಯೆ ಪಡೋ ಕೆಟ್ಟ ಹುಳಗಳಲ್ಲಿ ಅವ್ನೊಬ್ನು.
ಗಾದ್ರಣ್ಣ ನೀನು ಮಕ್ಳಾಗಿನಿಂದ್ಲು ಗೆಣೆಕಾರ್ರು, ನಾನು ಈ ಹಳ್ಳಿಗೆ ಕಾಲಿಟ್ಟಾಗ್ನಿಂದ ನೋಡ್ತಿದೀನಿ ಆತ ಅಂತವ್ನಲ್ಲ, ಎಂದೂ ನನ್ನತ್ರ ಕೆಟ್ಟದಾಗಿ ನಡ್ಕಂಡಿಲ್ಲ, ಮಂದಿ ಮಾತ್ನಾಗೆ ಸಂಬಂಧಗಳು ಹುಟ್ಕಂಡವೆ, ಮನಿ ಮನಿಗೆ ಬೆಂಕಿ ಹಚ್ಚಿ ಮೈ ಕಾಯ್ಸಿಕೊಳ್ಳೋ ಜನಗಳ ಮಾತಿದು. ವಿಷದ ವ್ಯಾಳೆ ಸಿಟ್ಟಿಗೆ ಬುದ್ಧಿನಾ ಕೊಡೋದು ಬ್ಯಾಡ ಅಂತೀನಿ.
ಆಗ್ಲೇ ಕುಡ್ದು ಮನಿಗೆ ಬಂದಿದ್ದ ಗಾದ್ರಯ್ಯ, ಪಾಲವ್ವನ ಜೊತೆ ಹಿಗ್ಗಾಮುಗ್ಗಾ ಜಗಳಕ್ಕೆ ಮುಂದಾಗಿದ್ದ, ಬೋಸ ಬಾಗಿಲ ಪಕ್ಕದ ನೆರಿಕೆಗೆ ಕುಂತು ಅಳುವುದ ಮುಂದುಮಾಡಿದ್ದ, ಪಾಲವ್ವನೂ ಅಷ್ಟೇ, ಇಡೀ ಓಣಿಗೆ ಕೇಳುವಂತೆ ಗಂಡನ ಜೊತೆ ಜಗಳಕ್ಕೆ ಬಿದ್ದಿದ್ಲು, ಜೋರಾದ ಬಾಯಿ ಓಬವ್ವನ ಕಿವಿಗೂ ತಟ್ಟುತ್ತಿತ್ತು, ಯಾಕೋ ಸೆರಗು ಕೊಡವಿಕೊಂಡ ಓಬವ್ವೆ ಮುಖ ಒರೆಸಿಕೊಳ್ಳುತ್ತಾ ಕ್ಷಣಕಾಲ ಮೌನವಾದಳು.ಮೈಯೆಲ್ಲ ಬಿರುಸಾದಂತಾಗಿ ಉದ್ವೇಗವು ಸೇರಿ, ಕಣ್ಗಳು ಸ್ವಾಭಿಮಾನಕ್ಕೆ ಬೆಳಕಿಟ್ಟಂತಾಗಿದ್ದವು.
ನಾಯಿಗಳು ಬೊಗಳ್ತಿರ್ತಾವೆ ಅದಕ್ಕೆ ನಾನ್ಯಾಕೆ ತಿರುಗಿ ನೋಡ್ಲಿ.
ಈ ಹಳ್ಳಿ ಅಲ್ಲ ಸುತ್ತ ಹತ್ತಳ್ಳಿ ಮನೆ ಮುಂದೆ ಬಂದು ಕೇಕೆ ಹಾಕ್ಲಿ, ನಾನು ಸರಿ ಅದೀನಿ,ನನ್ನ ಶೀಲನ ಯಾವನೋ,ಯಾವಳೋ ಅಲ್ಲ ಶಂಕೆ ಪಡ್ಬೇಕಾಗಿರೋದು,ನನ್ನ ಹೆಂಡ್ತಿ ಗರತಿನೊ ಹಾದರಗಿತ್ತಿನೋ ಅಂತ ನಿನಗೆ ತಿಳಿದಿದ್ರೆ ಸಾಕು,ನಾನು ಎಂತಾದ್ದನ್ನ ಬೇಕಾದ್ರೂ ಎದುರಿಸಿ ನಿಲ್ತೀನಿ.
ಚಂದುಳ್ಳ ಚೆಲುವಿ ಓಬವ್ವೆ ಗಂಡುಳ್ಳ ಗರತಿಯೂ ಹೌದು, ಅವಳನ್ನ ಕೆಣಕಿದರೆ ನಡಿಬಾರದ್ದು ನಡೆದೀತು ಎನ್ನುವಂತಿತ್ತು ಅವಳ ಆವೇಶಭರಿತ ಮಾತು.
ಎಷ್ಟೋ ಸಾರಿ ಮುಗುಳ್ನಗೆಯಿಂದಲೇ ಆವರಿಸಿ ತಂಗಾಳಿಯಂತೆ ತಂಪು ಎರುಚುತ್ತಿದ್ದವಳು ಇಂದ್ಯಾಕೋ ಬಿರುಗಾಳಿಯೇ ಬೀಸುತ್ತಿದೆಯೇನೋ ಅನ್ನುವಂತೆ,ಅವಳ ಸಿಟ್ಟು ತಾರಕಕ್ಕೇರಿ.

ಆ ಗಂಭೀರ ದಿಟ್ಟತನದ ಚಂಡಿಯ ರೂಪ, ತಿಪ್ಪಯ್ಯನಿಗೆ ಭಯಾಶ್ಚರ್ಯಗಳೆರಡನ್ನೂ ಒಟ್ಟೊಟ್ಟಿಗೆ ತಂದುಕೊಟ್ಟಿದ್ದವು. ಕ್ಷಣ ಕಾಲ ಮೂಕನಾಗಿ ಗರಬಡಿದವನಂತೇ ಓಬವ್ವೆಯನ್ನೇ ದಿಟ್ಟಿಸಿದ್ದ ಇದರಲ್ಲಿ ನನ್ನದೇನು ತಪ್ಪಿಲ್ಲವೆಂಬಂತೆ ದೀನನಾಗಿ.
ಲೇಖನ: ಕುಮಾರ್ ಬಡಪ್ಪ, ಚಿತ್ರದುರ್ಗ.

