ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಮಕಾಲೀನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆಗೆ ಮೃದುಕೌಶಲ ಮತ್ತು ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಶಾಸಕ ಧೀರಜ್ಮುನಿರಾಜ್ಹೇಳಿದರು. ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಲಾಗಿದ್ದ ಕಲರವ-2026 ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಇಂದು ಗಣನೀಯ ಬದಲಾವಣೆಗಳಾಗುತ್ತಿದ್ದು, ಉದ್ಯೋಗ ಕೌಶಲ್ಯಗಳನ್ನು ಹೇಳಿಕೊಡುವುದು ಅತ್ಯಗತ್ಯವಾಗಿದೆ. ದೊಡ್ಡಬಳ್ಳಾಪುರ ಸುತ್ತಮುತ್ತ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸ್ಥಳೀಯರಿಗೆ ಲಭ್ಯವಿದ್ದು, ಪದವಿ ಪ್ರಮಾಣ ಪತ್ರಗಳೊಂದಿಗೆ ಪರಿಣಾಮಕಾರಿ ಉದ್ಯೋಗ ಕೌಶಲ್ಯದ ಬಗ್ಗೆ ಜಾಗೃತಿ ಮತ್ತು ಪರಿಣಿತಿ ಹೊಂದುವುದು ಅಗತ್ಯ ಎಂದು ತಿಳಿಸಿದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡ ತಾಂತ್ರಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯಮನಪ್ಪ ಎನ್.ದೊಡ್ಡಮನಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಧನೆಯ ಹಂಬಲ ಹೆಚ್ಚಿರುತ್ತದೆ. ಅದಕ್ಕೆ ಪೂರಕವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಸಾಧನೆ ಸುಲಭವಾಗುತ್ತದೆ. ಪದವೀಧರರಾಗುವ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಶಿಕ್ಷಣದ ಮುಖ್ಯ ಉದ್ದೇಶ ಈಡೇರುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ ಎಂದು ತಿಳಿಸಿದರು.
ಎಕ್ಸೆಲ್ಲೀಡರ್ಶಿಪ್ಅಕಾಡೆಮಿಯ ಡಾ.ಎಸ್.ನಾಗರಾಜರಾವ್ಮಾತನಾಡಿ, ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಇರುವ ಎಲ್ಲ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸವನ್ನು ವೃದ್ದಿಸಿಕೊಳ್ಳಬೇಕು. ಮೃದು ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ಶಿಸ್ತಿನ ಬದುಕಿಗೆ ಒತ್ತು ನೀಡಿದಾಗ ಸಾಧನೆ ಸಾಧ್ಯವಾಗುತ್ತದೆ. ಇದರಿಂದ ಅಗತ್ಯ ಗೌರವ ಮತ್ತು ಮನ್ನಣೆಯನ್ನು ಸಮಾಜ ನೀಡುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅಡಳಿತಾಧಿಕಾರಿ ಬಿ.ಕೃಷ್ಣಪ್ಪ, ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಆರ್ಎಲ್ಜೆಐಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಲಯನ್ಸ್ಕ್ಲಬ್ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಗುರುದೇವ್ಮತ್ತಿತರರು ಭಾಗವಹಿಸಿದ್ದರು.

