ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಗರದ ವೃದ್ಧ ಉದ್ಯಮಿಯೊಬ್ಬರಿಗೆ ಬರೋಬ್ಬರಿ 15.45 ಕೋಟಿ ರೂ. ವಂಚಿಸಿದ್ದ ಜಾಲವನ್ನು ಭೇದಿಸುವಲ್ಲಿ ಬೆಳಗಾವಿಯ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಂಚಕರ ಖಾತೆಯಲ್ಲಿದ್ದ 1 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ.
ಬಂಧಿತ ಆರೋಪಿಗಳು-
ವೆಂಕದೋತ್ ಶರತ್ ನಾಯಿಕ (ಹೈದರಾಬಾದ್), ದೇಗಾವತ ಶ್ರೀಪಾದ ನಾಯಿಕ (ಹೈದರಾಬಾದ್).
ವಂಚನೆಯ ಹಿನ್ನೆಲೆ: ಏನಿದು ಪ್ರಕರಣ?
ಟಿಳಕವಾಡಿಯ ನಿವಾಸಿ, ಉದ್ಯಮಿ ಅಜೀತ ಸರಾಫ್ ಅವರಿಗೆ ಕರೆ ಮಾಡಿದ್ದ ವಂಚಕರು, ತಾವು ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು.
ಬೆದರಿಕೆ: “ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ಗಳ ಮೂಲಕ ಅಕ್ರಮ ಚಟುವಟಿಕೆ ನಡೆದಿದೆ. ನೀವು ಜೆಟ್ ಏರ್ವೇಸ್ ಮಾಜಿ ಸಿಇಒ ನರೇಶ್ ಗೋಯಲ್ ಅವರೊಂದಿಗೆ ಸಂಪರ್ಕದಲ್ಲಿದ್ದು, 25 ಲಕ್ಷ ರೂ. ಮನಿ ಲಾಂಡರಿಂಗ್ ಮಾಡಿ 5 ಲಕ್ಷ ರೂ. ಕಮಿಷನ್ ಪಡೆದಿದ್ದೀರಿ” ಎಂದು ಹೆದರಿಸಿದ್ದರು.
ಡಿಜಿಟಲ್ ಅರೆಸ್ಟ್: ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿ, ಫೆಬ್ರವರಿ 7 ರಿಂದ ಮಾರ್ಚ್ 9 ರವರೆಗೆ ಹಂತಹಂತವಾಗಿ ಒಟ್ಟು 15.45 ಕೋಟಿ ರೂ. ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡಿದ್ದರು.
ಪೊಲೀಸ್ ತನಿಖೆ ಮತ್ತು ಕಾರ್ಯಾಚರಣೆ-
ಸೈಬರ್ ಅಪರಾಧ ಠಾಣೆಯ ಎಸಿಪಿ ಬಿ.ಎಸ್. ಮಂಟೂರ ಅವರ ಮಾರ್ಗದರ್ಶನದಲ್ಲಿ ಪಿಐ ಶ್ರೀಶೈಲ ಗಾಬಿ ನೇತೃತ್ವದ ತಂಡ ಹೈದರಾಬಾದ್ಗೆ ತೆರಳಿ ಆರೋಪಿಗಳನ್ನು ಸೆರೆಹಿಡಿದಿದೆ.
ಹಣ ವರ್ಗಾವಣೆ: ಆರೋಪಿಗಳು ಕಂಪನಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ವಂಚನೆಯ ಹಣವನ್ನು ಗೋವಾ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸಿಬಿಐ ತನಿಖೆಗೆ ಒಲವು: ಪ್ರಕರಣದ ಗಂಭೀರತೆ ಮತ್ತು ವಂಚನೆಯ ಮೊತ್ತ 10 ಕೋಟಿ ರೂ.ಗಿಂತ ಹೆಚ್ಚಿರುವುದರಿಂದ, ಇದನ್ನು ಸಿಬಿಐ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಪೊಲೀಸ್ ಆಯುಕ್ತರ ಹೇಳಿಕೆ:
“ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇವರ ಜೊತೆ ಇನ್ನೂ ಇಬ್ಬರು ಶಾಮೀಲಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್ ಖಾತೆ ನೀಡಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಪ್ರಕರಣದ ಕುರಿತು ಸಿಬಿಐ ಜೊತೆ ಪತ್ರ ವ್ಯವಹಾರ ನಡೆಸುತ್ತಿದ್ದೇವೆ.”
ಭೂಷಣ ಬೊರಸೆ, ಪೊಲೀಸ್ ಆಯುಕ್ತರು, ಬೆಳಗಾವಿ.
ಸಾರ್ವಜನಿಕರಿಗೆ ಎಚ್ಚರಿಕೆ: ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸ್ ಅಧಿಕಾರಿಗಳು ವಿಡಿಯೋ ಕರೆ ಮೂಲಕ ಯಾರನ್ನೂ ‘ಡಿಜಿಟಲ್ ಅರೆಸ್ಟ್‘ ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

