ಬೆಳೆ ಹಾನಿ, ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಿ-ಈಚಘಟ್ಟ ಸಿದ್ದವೀರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹದಿನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಸುರಿದು ರೈತರ ಬೆಳೆಗಳು ನಾಶವಾಗಿರುವುದರಿಂದ ಕೃಷಿ ಇಲಾಖೆ ಹಾಗೂ ಬೆಳೆವಿಮೆ ಕಂಪನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಮುಂದಿನ ಮಾರ್ಚ್ ಒಳಗೆ ವಿಮೆ ಹಣವನ್ನು ರೈತರಿಗೆ ತಲುಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಅತ್ಯಂತ ಬರಗಾಲವನ್ನು ರೈತರು ಎದುರಿಸಿದ್ದಾರೆ. ಬೋರ್ವೆಲ್ ವಿಫಲವಾಗಿ ಬೆಳೆಗಳು ಕೈಕೊಟ್ಟಿವೆ. ಈ ವರ್ಷ ಆರಂಭದಲ್ಲಿ ಮಳೆಯಾಯಿತಾದರೂ ಮಧ್ಯದಲ್ಲಿ ಕೈಕೊಟ್ಟಿತು.

ಮೆಕ್ಕೆಜೋಳ ನೆಲಕ್ಕೆ ಬಿದ್ದು ಮೊಳಕೆಯೊಡೆದಿದೆ. ಒಂದು ವರ್ಷದಲ್ಲಿ ಎರಡು ವರ್ಷಕ್ಕಾಗುವಷ್ಟು ಬಂಡವಾಳವನ್ನು ರೈತರು ಬಿತ್ತನೆಗೆ ಹಾಕಿದ್ದಾರೆ. ರಾಗಿ ಬೆಳೆಗಾರರಿಗೆ ವಿಮೆ ಕಟ್ಟಿಲ್ಲವೆಂದು ಹೇಳುತ್ತಿರುವುದು ಸರಿಯಲ್ಲ. ವಿಮೆ ಪಾವತಿಸಿಲ್ಲದವರಿಗೆ ಕನಿಷ್ಟ ಭೂಮಿಗೆ ಹಾಕಿರುವ ಬಂಡವಾವಳವನ್ನಾದರೂ ಪೂರೈಸಬೇಕು. ಅದಕ್ಕಾಗಿ ಎಕರೆಗೆ ಹತ್ತು ಸಾವಿರ ರೂ.ಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಎಲ್ಲಾ ಕೆರೆ ಕಟ್ಟೆ, ಅಚ್ಚುಕಟ್ಟು ಪ್ರದೇಶ, ಕ್ಯಾಚ್ಮೆಂಟ್ ಏರಿಯಾಗಳನ್ನು ದುಸ್ಥಿತಿಯಲ್ಲಿಡಬೇಕು. ಈರುಳ್ಳಿ, ಮೆಕ್ಕೆಜೋಳ, ರಾಗಿ, ಶೇಂಗಾ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಸಿರಿ ಧಾನ್ಯಗಳನ್ನು ಬೆಳೆಯುವ ಹೊಸದುರ್ಗದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ತಮಿಳುನಾಡಿನಿಂದ ಬೆಳೆ ಕಟಾವಿಗೆ ಇಲ್ಲಿಗೆ ಬರುತ್ತಿರುವವರು ಮನ ಬಂದಂತೆ ಹಣ ಕೇಳುತ್ತಿದ್ದಾರೆ. ಬೆಳೆ ಕಟಾವು ಮಾಡುವವರ ಜೊತೆ ಸಂಬಂಧಪಟ್ಟ ಇಲಾಖೆಯವರು ಸಭೆ ನಡೆಸಿ ದರ ನಿಗಧಿಪಡಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳದೆ ರಕ್ಷಣೆ ಮಾಡಬೇಕೆಂದು ಈಚಘಟ್ಟದ ಸಿದ್ದವೀರಪ್ಪ ಸರ್ಕಾರಕ್ಕೆ ಮನವಿ ಮಾಡಿದರು.

ಗೌರವಾಧ್ಯಕ್ಷ ಎಸ್.ಬಿ.ನಿಜಲಿಂಗಪ್ಪ ಮಾತನಾಡಿ ಕಂದಾಯ ಇಲಾಖೆ ಲೆಕ್ಕಾಧಿಕಾರಿಗಳು ಖಾತೆ ಮಾಡಿಕೊಡಲು ಹಳ್ಳಿಗಳಿಗೆ ಏಕೆ ಹೋಗುತ್ತಿಲ್ಲ. ರೈತರು ಖರೀಧಿಸುವ ಔಷಧಿ, ಗೊಬ್ಬರ, ಬಿತ್ತನೆ ಬೀಜಗಳಿಗೆ ಬಿಲ್ ಕೊಡುತ್ತಿಲ್ಲ. ಎಲ್ಲವೂ ಕಳಪೆಯಾಗಿದೆ ಎಂದು ಆಪಾದಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡುತ್ತ ಕಳೆದ ವರ್ಷ ಬರಗಾಲ ಎದುರಿಸಿದ್ದೇವೆ. ಈ ವರ್ಷ ಅತಿವೃಷ್ಠಿಯಿಂದ ಈರುಳ್ಳಿ, ಟಮೋಟೊ ಅಡಿಕೆ ಇನ್ನು ಮುಂತಾದ ಬೆಳೆಗಳು ನಾಶವಾಗಿವೆ. ಜಿಲ್ಲಾಡಳಿತ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ರೈತ ಮುಖಂಡರುಗಳಾದ ಮಂಜುನಾಥ್, ರಂಗಸ್ವಾಮಿ, ಸದಾಶಿವಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Share This Article
error: Content is protected !!
";