![](https://www.chandravallinews.com/wp-content/uploads/2023/01/WhatsApp-Image-2023-01-13-at-5.02.31-PM-1024x627.jpeg)
i
ನಾನೇ ಬೇರೆ ನನ್ನ ಸ್ಟೈಲೇ ಬೇರೆ, ಜಿಪಂ ಸಿಇಒ ಇಂಜಿನಿಯರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಾ.ರಾಮ್ಪ್ರಸಾತ್ ಮನೋಹರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾನೇ ಬೇರೆ ನನ್ನ ಸ್ಟೈಲೇ ಬೇರೆ, ಮೀಟಿಂಗ್ ಪಟ್ಟಿ ಹಿಡಿದು ಸಭೆ ಮಾಡುವ ವ್ಯಕ್ತಿ ನಾನಲ್ಲ, ಕೃಷಿ, ತೋಟಗಾರಿಕೆ ಇತ್ಯಾದಿ ಪಟ್ಟಿಯಂತೆ ಸಭೆ ಮಾಡುವುದಿಲ್ಲ, ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಗೆ ಮಾಹಿತಿ ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಡಿಸೆಂಬರ್-2022ರ ಮಾಹೆಯ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೀಟಿಂಗ್ ಆರಂಭಕ್ಕೂ ಮುನ್ನ ಅಧಿಕಾರಿಗಳ ಪರಿಚ ಮಾಡಿಕೊಂಡು ಅವರು, 8-10 ವರ್ಷಗಳ ಕಾಲ ಇಲ್ಲೇ ಠಿಕಾಣಿ ಹೂಡಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅವರು, ನೀವು ಈಗಾಗಲೇ ಎಲ್ಲರಿಗೂ ಒಗ್ಗಿಕೊಂಡಿದ್ದಾರೆ, ನಿಮ್ಮನ್ನ ಮಾತನಾಡಿಸುವುದು ಅಷ್ಟು ಸುಲಭವಲ್ಲ, ಅದರೇನಂತೆ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳ ವಿವರ ತಿಳಿಸಿ ಎಂದು ವಿವಿಧ ಇಲಾಖೆಗಳ ಇಂಜಿನಿಯರ್ ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಇದರ ಮಧ್ಯ ಕೇಕ್, ಚಿಪ್ಸ್, ಟೀ ಎಂದು ಎಲ್ಲರಿಗೂ ನೀಡಲು ಮುಂದಾದ ವ್ಯಕ್ತಿಗಳನ್ನು ತಡೆದು ನನ್ನ ಸಭೆಯಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ, ಬೆಳಿಗ್ಗೆ ತಿಂಡಿ ಅಥವಾ ಊಟ ಆದ ಮೇಲೆ ಕನಿಷ್ಠ ಸಮಯ ಗ್ಯಾಪ್ ಇರಬೇಕು, ಮಧ್ಯ ಮಧ್ಯ ಇಂತಹ ಕುರುಕಲು ತಿಂಡಿ ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗಲಿದೆ, ಹಾಗಾಗಿ ಸಭೆಯಲ್ಲಿ ಕೇಕ್, ಬಿಸ್ಕೇಟ್, ಟೀ ಇತ್ಯಾದಿ ಏನನ್ನೂ ನೀಡ ಕೂಡದು ಎಂದು ತಾಕೀತು ಮಾಡಿ ವಾಪಸ್ ಕಳಿಸುತ್ತಿದ್ದಂತೆ ಎಲ್ಲರೂ ಕಕ್ಕಬಿಕ್ಕಿಯಾಗಿ ಟೀ, ಬಿಸ್ಕೇಟ್ ಗೂ ಬಿತ್ತಲ್ಲಪ್ಪ ಗುನ್ನ ಎಂದು ಸಭೆಯಲ್ಲಿದ್ದ ಅಧಿಕಾರಿಗಳ ಮೌನಕ್ಕೆ ಜಾರಿದರು.
ಜಿಲ್ಲೆಯಾದ್ಯಂತ ಕ್ರಿಯಾಯೋಜನೆಗೆ ಅನುಮೋದನೆ ಪಡೆದು, ಪ್ರಾರಂಭಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಇದುವರೆಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು, ಗುಣಮಟ್ಟದ ಕಾಮಗಾರಿ ಕೈಗೊಂಡು, ಅನುದಾನ ಸೋರಿಕೆಯನ್ನು ತಡೆಗಟ್ಟಬೇಕು. ಲೋಪವೆಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು, ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಲ್ಲದೆ ಅನುದಾನದ ಸೋರಿಕೆ ತಡೆಗಟ್ಟಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.