ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):
ಕಳೆದ ಮೂರು ತಿಂಗಳ ಹಿಂದೆ ಓರ್ವ ವ್ಯಕ್ತಿ ಕಾಣೆಯಾಗಿದ್ದು ಹಣದ ವಿಚಾರವಾಗಿ ಗೆಳೆಯರಿಂದಲೇ ಕಾಣೆಯಾದ ವ್ಯಕ್ತಿ ಕೊಲೆಯಾಗಿದ್ದು ಪ್ರಕರಣವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜು (೪೫) ಕೊಲೆಯಾದ ವ್ಯಕ್ತಿ. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜ್ ಕುಮಾರ್ ಮತ್ತು ಅನಿಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಉದ್ಯಮಿ ದೇವರಾಜು ಅವರಿಂದ ವ್ಯವಹಾರಕ್ಕಾಗಿ ರಾಜ್ ಕುಮಾರ್ ಸುಮಾರು ೭೦ ಲಕ್ಷ ಹಣ ಪಡೆದಿದ್ದ. ಹಣವನ್ನು ವಾಪಸ್ ಕೊಡುವಂತೆ ದೇವರಾಜು ಪದೇ ಪದೆ ಕೇಳುತ್ತಿದ್ದರಿಂದ ಆರೋಪಿ ರಾಜ್ ಕುಮಾರ್ ಅವರು ಉದ್ಯಮಿ ದೇವರಾಜು ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ.
ಅದರಂತೆ ಅಕ್ಟೋಬರ್ ೧೪ರಂದು ದೇವರಾಜುನ ಮನೆಗೆ ಬಂದ ರಾಜ್ ಕುಮಾರ್, ಹಣ ಕೊಡುವುದಾಗಿ ಹೇಳಿ ಕಾರಿನಲ್ಲಿ ಗೌರಿಬಿದನೂರು ಕಡೆಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಶವವನ್ನು ದೊಡ್ಡಬಳ್ಳಾಪುರ ಹೊರವಲಯದ ಇನ್ಫೋಸಿಟಿಯಲ್ಲಿರುವ ತನ್ನ ನಿವೇಶನದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದ. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಶವವನ್ನು ಗುಂಡಿಯಿಂದ ಹೊರ ತೆಗೆದು ಡ್ರಮ್ ನಲ್ಲಿ ಹಾಕಿ ಸುಟ್ಟು ಹಾಕಿದ್ದ. ತದನಂತರ ಅರೆಬರೆಯಾಗಿ ಸುಟ್ಟ ಶವವನ್ನು ಮಧುರೆ ಕೆರೆಗೆ ಎಸೆದು ತಾನಗೇನು ಗೊತ್ತೇ ಇಲ್ಲ ಎಂಬುವಂತೆ ದೇವರಾಜು ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಮೃತ ದೇವರಾಜು ಕುಟುಂಬಸ್ಥರು ಅಕ್ಟೋಬರ್ ೧೭ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆಗಿಳಿದ ಪೊಲೀಸರು, ರಾಜ್ ಕುಮಾರ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

