ಮುಡಾ ಹಗರಣ ಸಿಎಂಗೆ ದೊಡ್ಡ ಹಿನ್ನೆಡೆ-ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಮುಡಾ ಹಗರಣದಲ್ಲಿ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾಯುಕ್ತದ ಮೇಲೆ ಪ್ರಭಾವ ಬೀರಿ ಬೇಗನೆ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನದಲ್ಲಿದ್ದರು. ಆದರೆ ಇಡಿ ನೋಟಿಸ್ ನೀಡಿರುವುದು ದೊಡ್ಡ ಆಘಾತವಾಗಿದೆ. ಲೋಕಾಯುಕ್ತ ಸಂಸ್ಥೆಯ ತನಿಖೆಯನ್ನು ಮಾಧ್ಯಮಗಳೇ ತೋರಿಸಿವೆ. ರಾತ್ರಿ 8 ರಿಂದ 9 ಗಂಟೆಗೆ ಸಿದ್ದರಾಮಯ್ಯನವರ ಬಾಮೈದ ನೋಟಿಸ್ ಕೊಡದೆ ಇದ್ದರೂ ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ಕೊಡುತ್ತಿದ್ದರು ಎಂದು ವಿಜಯೇಂದ್ರ ದೂರಿದ್ದಾರೆ.

- Advertisement - 

ಲೋಕಾಯುಕ್ತ ಕಚೇರಿಗೆ ಹೋಗಿ ಬರಲು ಸಿಎಂ ಕುಟುಂಬಕ್ಕೆ ಎಷ್ಟು ಮುಕ್ತ ವ್ಯವಸ್ಥೆ ಇತ್ತೆಂದು ಅವತ್ತೇ ಬಹಿರಂಗವಾಗಿದೆ. ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ದೆವು. ನಮ್ಮ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರು 14 ನಿವೇಶನ ಹಿಂತಿರುಗಿಸುತ್ತೇವೆ ಎಂದು ರಾತ್ರೋರಾತ್ರಿ ಮುಡಾಗೆ ಪತ್ರ ಬರೆದಿದ್ದರು ಎಂದು ವಿಜಯೇಂದ್ರ ಹೇಳಿದರು.

ಮುಡಾಕ್ಕೆ ನಿವೇಶನ ವಾಪಸ್ ಕೊಟ್ಟ ಆ ಪತ್ರದ ಮೂಲಕ ಹಗರಣದಿಂದ ಹೊರಕ್ಕೆ ಬಂದ ಭ್ರಮೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು. ಇವತ್ತಿನ ಜಾರಿ ನಿರ್ದೇಶನಾಲಯದ (ಇ.ಡಿ) ನೋಟಿಸ್​ನಿಂದ ಅವರಿಗೆ ಆಘಾತ ಆಗಿರುವುದರಲ್ಲಿ ಎರಡು ಮಾತಿಲ್ಲ ಎಂದು ವಿಜಯೇಂದ್ರ ಹೇಳಿದರು.

- Advertisement - 

ಇ.ಡಿಗೆ ಅವರದೇ ಆದ ನಿಯಮಗಳಿರುತ್ತವೆ. ಅದರ ಪ್ರಕಾರ ಅವರು ಮುಂದುವರೆಯುತ್ತಾರೆ. ಇ.ಡಿ ನೋಟಿಸ್ ರಾಜಕೀಯ ಪ್ರೇರಿತ ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಬಡವರಿಗೆ ಸೇರಬೇಕಾದ ನಿವೇಶನಗಳನ್ನು ಅಕ್ರಮ ಹಂಚಿಕೆ ಮಾಡಲಾಗಿತ್ತು. ಮುಡಾದಲ್ಲಿ ನಡೆದಿರುವ ಬಹುದೊಡ್ಡ ಹಗರಣದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಸಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ವಾರ್ವತಿ ಅವರಿಗೂ ಇಡಿ ನೋಟಿಸ್ ಕೊಟ್ಟಿದೆ ಹಾಗೂ ತನಿಖೆಗೆ ಹಾಜರಾಗಲು ತಿಳಿಸಿದೆ. ಜೊತೆಗೆ ಸಚಿವ ಬೈರತಿ ಸುರೇಶ್‍ರಿಗೂ ಇ.ಡಿ. ನೋಟಿಸ್ ಕೊಟ್ಟಿದೆ. ಹಾಗಾಗಿ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಪತ್ನಿ ಅವರು ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಅಭಿಪ್ರಾಯಪಟ್ಟರು.

ವರದಿ ಮಾಹಿತಿ ಇಲ್ಲ: ಹೈಕೋರ್ಟ್​ಗೆ ಲಕೋಟೆಯಲ್ಲಿ ವರದಿ ನೀಡಿದ ಮಾಹಿತಿಗಳು ಬರುತ್ತಿವೆ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ರಾಜಕೀಯ ಪ್ರೇರಿತ ಇ.ಡಿ ಎಂದು ಅವರು ಹೇಳಿದ್ದಾರೆ. ಅವರ ಮುಖದಲ್ಲಿ ಮಂದಹಾಸವೂ ಕಾಣುತ್ತಿದೆ. ಅಬ್ಬಾ ಸಿದ್ದರಾಮಯ್ಯನವರ ಕುಟುಂಬಕ್ಕೆ ಇ.ಡಿ ನೋಟಿಸ್ ಕೊಟ್ಟಿದೆ ಎಂಬ ಸಂತೋಷ ಅವರ ಮುಖದಲ್ಲಿತ್ತು ಎಂದು ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Share This Article
error: Content is protected !!
";