ಚಂದ್ರವಳ್ಳಿ ನ್ಯೂಸ್, ದೂಡ್ಡಬಳ್ಳಾಪುರ:
ತಾಲ್ಲೂಕಿನ ಮದುರೆ ಹೋಬಳಿಯ ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯ ಮಧುರೆ ಹೋಬಳಿ 11ನೇ ಮೈಲಿಯ ಎಚ್.ಪಿ ಪೆಟ್ರೋಲ್ ಬಂಕ್ ಬಳಿ 407 ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿಮುಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವೇಗವಾಗಿ ಎದುರು ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕನನಿಯಂತ್ರಣ ತಪ್ಪಿ 407 ಗೂಡ್ಸ್ ವಾಹನ ಮುಗುಚಿ ಬಿದ್ದಿದೆ.
ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹುಲಿಕುಂಟೆ ಟೋಲ್ ತಪ್ಪಿಸಲು ಗೂಡ್ಸ್ ವಾಹನಗಳು ನೆಲಮಂಗಲ ರಸ್ತೆ ಬಳಸುತ್ತಿವೆ.ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳ ಸಂಖ್ಯೆ ಏರುತ್ತಿದೆ. ರಸ್ತೆ ಅಗಲೀಕರಣ ಆಗಲಿಲ್ಲ. ಅಲ್ಲಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ಹೀಗೆ ನಾನಾ ರೀತಿಯ ಸಮಸ್ಯೆಗಳು ಇವೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದೇ ಸಂಬಂಧಪಟ್ಟವರು ಕಂಡು ಕಾಣದಂತೆ ಇರುವುದರಿಂದ ಸಾರ್ವಜನಿಕರು ಸಾವು ನೋವು ಅನುಭವಿಸವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಳುಮಲ್ಲಿಗೆ ಗ್ರಾಮದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಮನೆಗಳು ಇದ್ದು, ಭಾರೀ ಗಾತ್ರದ ವಾಹನಗಳು ಸುಗಮವಾಗಿ ಚಲಿಸಲು ಹರಸಾಹಸಪಡುತ್ತಿವೆ. ಎರಡು ಭಾರೀ ಗಾತ್ರದ ವಾಹನಗಳ ಏಕಕಾಲದಲ್ಲಿ ಬಂದರೆ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಟ್ಟಲೇ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೂಡಲೇ ಅರಳುಮಲ್ಲಿಗೆ ಬಳಿ ರಸ್ತೆ ಅಗಲೀಕರಣ ಆಗಬೇಕಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ, ಭಾರೀ ಗಾತ್ರದ ವಾಹನಗಳನ್ನು ಹೆದ್ದಾರಿಯಲ್ಲಿ ಹೋಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.