ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ದೇವರ ಬೆಟ್ಟದ ಅರಣ್ಯದಲ್ಲಿನ ಕಂಬದ ಗುಟ್ಟೆ ಲಕ್ಷ್ಮೀ ನರಸಿಂಹಸ್ವಾಮಿ ವಿಗ್ರಹವನ್ನ ಕಳವು ಮಾಡಲಾಗಿದ್ದು, ನಿಧಿಯಾಸೆಗೆ ವಿಗ್ರಹದ ಕೆಳಗೆ ಮಣ್ಣು ಅಗೆದಿರುವ ಕಳ್ಳರು ವಿಗ್ರಹದೊಂದಿಗೆ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಪಕ್ಕದಲ್ಲಿಯೇ ಬರುವಂತಹ ಮಾಕಳಿ ಬೆಟ್ಟ ವಲಸೆ ಬೆಟ್ಟ ಹಾಗೂ ದೇವರ ಬೆಟ್ಟದ ಈ ಬೆಟ್ಟಗಳು ಸುಮಾರು ವರ್ಷಗಳ ಹಿಂದೆ ವನ್ಯ ಜೀವಿಗಳ ವಾಸಸ್ಥಾನ ವಾಗಿತ್ತು ಅರಣ್ಯ ಸಂಪತ್ತು ಹೇರಳವಾಗಿತ್ತು. ಶ್ರೀ ಗಂಧ, ನೇರಳೆ, ಆಲ, ಗೋಣಿ ಹಾಗೂ ಆಯುರ್ವೇದಿಕ ಗಿಡ ಮೂಲಿಕೆಗಳ ಹೊಂದಿದ್ದ ಅರಣ್ಯವಾಗಿತ್ತು. ಮಾನವನ ದುರಾಸೆಗೆ ಕಾಡು ಹಾಳಾಗಿ ನಾಡಾಗುವ ಸ್ಥಿತಿಗೆ ತಲುಪಿದ್ದು ನಿಧಿ ಆಸೆಗೆ ದೇವರ ವಿಗ್ರಹ ಕಳ್ಳತನ ಮಾಡಿದ್ದಾರೆ.
ಪ್ರತಿ ವರ್ಷ ಶಿವರಾತ್ರಿ ಜಾಗರಣೆ ಹಾಗೂ ಕಾಮನ ಹಬ್ಬ ದಿನ ಕದಿರಿ ಹುಣ್ಣುಮೆ ದಿನದಂದು ವಿಶೇಷ ಪೂಜಾ ಕೈಂ ಕಾರ್ಯಗಳು ಮಾಡುತ್ತಾ ಬರುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ದಿನ ದೇವಸ್ಥಾನದ ಬಳಿ ಜಾಗರಣೆ ಕಾರ್ಯಕ್ರಮವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಮಾಡುತ್ತಿದ್ದರು. ಈ ಕಾರಣಕ್ಕಾಗಿ ಜಾಗವನ್ನು ನೋಡಲು ಇಂದು ಮಧ್ಯಾಹ್ನ ಗ್ರಾಮಸ್ಥರು ದೇವಸ್ಥಾನದ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ದೇವರ ಬೆಟ್ಟದಲ್ಲಿ ಪ್ರಕೃತಿ ಸಹಜವಾಗಿ ನಿರ್ಮಾಣವಾಗಿರುವ ಗುಹೆ ದೇವಾಲಯವಾಗಿದ್ದು, ಗುಹೆ ಯೊಳಗಿರುವ ದೇವರನ್ನು ಕಂಬದ ಗುಟ್ಟೆಯ ಕಲ್ಲಿನ ಲಕ್ಷ್ಮೀ ನರಸಿಂಹಸ್ವಾಮಿ ದೇವರೆಂದು ಸುತ್ತಮುತ್ತಲಿನ ಜನರು ಆರಾಧಿಸುತ್ತಾರೆ, ಅರಣ್ಯ ಪ್ರದೇಶದಲ್ಲಿರುವ ಕಾರಣಕ್ಕೆ ವಿಶೇಷ ದಿನಗಳಲ್ಲಿ ಮಾತ್ರ ಗ್ರಾಮಸ್ಥರು ಅಲ್ಲಿಗೆ ತೆರಳಿ ದೇವರಿಗೆ ಪೂಜೆ ಮಾಡುತ್ತಿದ್ದರು. ಹಿಂದೆಯೂ ಸಹ ಇದೇ ಸ್ಥಳದಲ್ಲಿ ನಿಧಿ ಯಾಸೆಗೆ ಮಣ್ಣನ್ನು ಅಗೆದಿದ್ದರು. ಈಗ ದೇವರ ವಿಗ್ರಹವನ್ನು ನಿಧಿಗಳ್ಳರು ಕದ್ದೊಯ್ದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
“ದೇವರಿಗೆ ರಕ್ಷಣೆ ಇಲ್ಲವಾದರೆ ಮನುಷ್ಯರಿಗೆ ಯಾರು ರಕ್ಷಣೆ ಮಾಡುತ್ತಾರೆ ಪುರಾತನ ಕಾಲದಿಂದಲು ನಮ್ಮ ತಾತ ಮತ್ತು ನಮ್ಮ ತಂದೆ ಪೂಜಾ ಕೈಂ ಕಾರ್ಯ ಮಾಡುತ್ತಾ ಬರುತ್ತಿದ್ದು ಅದರೆ ಎರಡು ದಿನದ ಹಿಂದೆ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಇಂದು ಬಂದು ನೋಡಿದರೆ ಸ್ವಾಮಿಯ ವಿಗ್ರಹವನ್ನು ರಾತ್ರಿ ವೇಳೆ ನಿಧಿ ಕಳ್ಳರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ”.
ರಾಮಾನುಜ ಚಾರ್ಯ ಅರ್ಚಕರು, ಕಂಬದ ಗುಟ್ಟು ಲಕ್ಷ್ಮೀ ನರಸಿಂಹಸ್ವಾಮಿ.
“ಕಾಡಂಚಿನ ಪ್ರದೇಶದ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಕಾಡಿಗೆ ಕುರಿ ಮೇಕೆ ದನಗಳನ್ನು ಮೇಯಿಸಲು ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭಕ್ಕೂ ಮುನ್ನ ನಮ್ಮ ಕರಿ ಮೇಕೆದನಗಳಿಗೆ ಯಾವ ತೂಂದರೆಯಾಗದಂತೆ ಕಾಪಾಡು ಎಂದು ಪ್ರಾರ್ಥಿಸಿ ಕಂಬದ ಗುಟ್ಟೆ ಲಕ್ಮೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕಾಡಿಗೆ ಪ್ರವೇಶ ಮಾಡಲಾಗುತ್ತಿತ್ತು ಅದರೆ ನಮ್ಮನ್ನು ಕಾಪಾಡುವ ದೇವರನ್ನು ಈ ದಿನ ಕಳ್ಳತನ ಮಾಡಿದ್ದಾರೆ”.
ಆನಂದ್, ಲಕ್ಷ್ಮೀನರಸಿಂಹ ಸ್ವಾಮಿ ದೇವರ ಭಕ್ತ.