ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರ ಇಲ್ಲದಿದ್ದಾಗ ತೊಗರಿ ಬೆಳೆಗಾರರ ಕುರಿತು ಭಾರೀ ಕಾಳಜಿ ವ್ಯಕ್ತಪಡಿಸಿ, ರೋಷಾವೇಶ ತೋರ್ಪಡಿಸಿದ್ದವರು ಅಧಿಕಾರಕ್ಕೆ ಬರುತ್ತಿದ್ದಂತೆ ಜಾಣ ಮೌನ ತೋರ್ಪಡಿಸುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಅಧಿಕಾರ ಇಲ್ಲದೇ ಇದ್ದ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆಯ ತೊಗರಿ ಬೆಳೆಗಾರರಿಗೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಅಂದಿನ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಅಧಿಕಾರದಲ್ಲಿದ್ದಾರೆ ಮತ್ತು ಸಚಿವರಾಗಿಯೂ ಇದ್ದಾರೆ.
ಆದರೆ ಅಂದು ಇದ್ದ ಬದ್ಧತೆ ಇಂದು ಕಾಣಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ರೈತರು ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಪರಿಹಾರ ಒದಗಿಸಬೇಕಾಗಿದ್ದ ಸಚಿವರು ನಾಪತ್ತೆಯಾಗಿದ್ದಾರೆ. ಈ ಸರ್ಕಾರ ಜಾಹಿರಾತಿನಲ್ಲಿ ಮಾತ್ರ ನುಡಿದಂತೆ ನಡೆದಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ, ವಾಸ್ತವದಲ್ಲಿ ಕಾಂಗ್ರೆಸ್ಸರ್ಕಾರ ನುಡಿದಂತೆ ನಡೆದುಕೊಂಡ ಇತಿಹಾಸವೇ ಇಲ್ಲದಾಗಿದೆ. ತೊಗರಿ ಬೆಳೆಗಾರರನ್ನು ಕಡೆಗಣಿಸುವ ಮೂಲಕ ಇದೊಂದು ರೈತ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತುಮಾಡಿದೆ ಎಂದು ಬಿಜೆಪಿ ಟೀಕಿಸಿದೆ.

