ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿದಂತೆ ನಾಲ್ಕು ತಾಲ್ಲೂಕುಗಳ ಅಧ್ಯಕ್ಷರನ್ನು ನೇಮಕದ ಘೋಷಣೆಯನ್ನು ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ಅಶ್ವಥ್ ನಾರಾಯಣ್ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಘೋಷಿಸಿದರು.
ಈ ವೇಳೆ ಮಾತನಾಡಿದ ಅವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಪಕ್ಷದ ಸಂವಿಧಾನ ಪ್ರಕಾರ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ. ಇಲ್ಲಿನ ಆಯ್ಕೆಗಳು, ನೇಮಕಗಳು ಬಹುಮತದೊಂದಿಗೆ ನಡೆಯುವುದಿಲ್ಲ. ಸಹಮತದೊಂದಿಗೆ ನಡೆಯುತ್ತದೆ.
ಜಿಲ್ಲೆಯ ನಾಲ್ಕು ಮಂಡಳಗಳ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ. ರಾಜಕೀಯ ಪಕ್ಷದಲ್ಲಿ ಕಟ್ಟಕಡೆಯ ಕಾರ್ಯಕರ್ತನನ್ನ ಗುರುತಿಸುವುದು ಬಿಜೆಪಿ ಪಕ್ಷ ಮಾತ್ರ. ಹಣವಂತರನ್ನ, ಕುಟುಂಬಸ್ಥರನ್ನ ಗುರುತಿಸಿ ಸ್ಥಾನ ಮಾನವನ್ನ ಇಲ್ಲಿ ನೀಡಲಾಗುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎಚ್.ರಾಮಕೃಷ್ಣಪ್ಪ ಮಾತನಾಡಿ, ಬಿಜೆಪಿ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಪಕ್ಷ ಯಾರ ಪರವೂ ಇಲ್ಲ ವಿರೋಧವೂ ಇಲ್ಲ, ಪಕ್ಷ ನಿಷ್ಠರಿಗೆ ಒಳ್ಳೆ ಸ್ಥಾನಮಾನ ಸಿಗುತ್ತದೆ. ರಾಜ್ಯ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಹಗಲಿರುಳು ಕೆಲಸ ಮಾಡುತ್ತೇವೆ. ಎಲ್ಲರೂ ಸೇರಿ ಒಗ್ಗಾಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ನೂತನ ಪದಾಧಿಕಾರಿಗಳ ಪಟ್ಟಿ:
ಬೆಂ.ಗ್ರಾಮಾಂತರ ಜಿಲ್ಲಾಧ್ಯಕ್ಷ -ಎಚ್.ರಾಮಕೃಷ್ಣಪ್ಪ, ದೊಡ್ಡಬಳ್ಳಾಪುರ ನಗರ ಮಂಡಲ ಅಧ್ಯಕ್ಷ- ಬಿ.ಮುದ್ದಪ್ಪ, ದೊಡ್ಡಬಳ್ಳಾಪುರ ಗ್ರಾಮಾಂತರ ಅಧ್ಯಕ್ಷ- ಕೆ. ನಾಗೇಶ್, ನೆಲಮಂಗಲ ಗ್ರಾಮಾಂತರ ಮಂಡಲ ಅಧ್ಯಕ್ಷ- ಜಗದೀಶ್ ಚೌದರಿ, ದೇವನಹಳ್ಳಿ ಗ್ರಾಮಾಂತರ ಅಧ್ಯಕ್ಷ- ಎನ್.ಎಲ್, ಅಂಬರೀಷ್ ಗೌಡ, ಹೊಸಕೋಟೆ ಮಂಡಲ ನಗರ ಅಧ್ಯಕ್ಷ- ಬಾಲಚಂದ್ರನ್.
ಈ ವೇಳೆ ಬೆಂ.ಗ್ರಾ ಜಿಲ್ಲಾ ಚುನಾವಣಾ ಅಧಿಕಾರಿ ಅಶ್ವತ್ ನಾರಾಯಣ್, ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಗೌಡ, ರಾಜ್ಯ ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ.ನಾರಾಯಣ್, ಪರಿಶಿಷ್ಟ ಪ್ರಕೋಷ್ಠ ಸಂಚಾಲಕ ಆರ್.ಗೋವಿಂದರಾಜು, ಮಾಜಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ವತ್ಸಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮುಖಂಡ ಮಂಜುನಾಥ್ ಸೇರಿದಂತೆ ಇತರರು ಬಾಗವಹಿಸಿದ್ದರು.