ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಸಂದರ್ಭದಲ್ಲಿ ಸಲ್ಲಿಕೆಯಾಗುವ ಅಭ್ಯರ್ಥಿಗಳ ಪ್ರಮಾಣಪತ್ರದಲ್ಲಿನ ಲೋಪ ದೋಷಗಳ ಕುರಿತಂತೆ ಪ್ರಜಾಪ್ರತಿನಿಧಿ ಕಾಯಿದೆಯಡಿ ದೂರು ಸಲ್ಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಳ್ದಾಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗ ಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸ್ಪಷ್ಟನೆ ನೀಡಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಪಡಿಸಿ ಆದೇಶ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಪ್ರಕರಣ ಸಂಬಂಧ ದಾಖಲೆಗಳು ಪರಿಶೀಲಿಸಿತಲ್ಲದೆ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 125ಎ ಅಡಿಯಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿನ ದೋಷಗಳನ್ನು ಪ್ರಶ್ನಿಸಲು ಚುನಾವಣಾ ಆಯೋಗವೇ ದೂರು ದಾಖಲಿಸಬೇಕು. ನ್ಯಾಯಾಲಯದಲ್ಲಿ ಖಾಸಗಿ ವ್ಯಕ್ತಿಗಳು ಖಾಸಗಿ ದೂರು ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠವು ಆದೇಶದಲ್ಲಿ ತಿಳಿಸಿ ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿ ಆದೇಶ ಮಾಡಿದೆ.
ಏನಿದು ಪ್ರಕರಣ:
ಕಳೆದ 2023ರ ವಿಧಾನಸಭಾ ಚುನಾವಣೆಗೆ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಜುಳಾ ಲಿಂಬಾವಳಿ ಅವರು ಚುನಾವಣಾ ಪ್ರಮಾಣ ಪತ್ರದಲ್ಲಿ ತಾವು ಪಾಲುದಾರರಾಗಿರುವ ಸಂಸ್ಥೆಯ ಆಸ್ತಿ ಮರೆ ಮಾಚಿದ್ದಾರೆ. ಜೊತೆಗೆ, ಅವರ ತಮ್ಮ ಅವಲಂಬಿತರ ವಿವರ ಕೊಡಬೇಕಾದ ಕಲಂ ಖಾಲಿ ಬಿಟ್ಟಿದ್ದಾರೆ ಎಂದು ಆರೋಪಸಿ ನಲ್ಲೂರಳ್ಳಿ ನಾಗೇಶ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ ರಾಜಕುಮಾರ್ ಮಡ್ಕಿ ಎಂಬುವರು ಶೈಲೇಂದ್ರ ಬೆಳ್ದಾಳೆ ಅವರ ತಮ್ಮ ಗ್ರಾಮದ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಇಬ್ಬರೂ ಅರ್ಜಿದಾರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ವಿಚಾರಣೆ ವೇಳೆ ಮಂಜುಳಾ ಲಿಂಬಾವಳಿ ಪರ ವಕೀಲರು, ಅರ್ಜಿದಾರರ ಮಕ್ಕಳು ತಮ್ಮದೇ ಆದ ವ್ಯವಹಾರಗಳನ್ನು ಮಾಡುತ್ತಿದ್ದು ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಅವರು ಅರ್ಜಿದಾರರಿಗೆ ಅವಲಂಬಿತರಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಅಲ್ಲದೆ, ಅವರ ಪಾಲುದಾರರಾಗಿರುವ ಸಂಸ್ಥೆ ಕಾರ್ಪೋರೇಟ್ ಸಂಸ್ಥೆಯಾಗಿದ್ದು, ಮಾಲೀಕತ್ವದ ಸಂಸ್ಥೆಯಲ್ಲ ಎಂದು ಪೀಠಕ್ಕೆ ಮಾಹಿತಿ ನೀಡಿದ್ದರು.
ಬೆಳ್ದಾಳೆ ಪರ ವಕೀಲರು, ಅರ್ಜಿದಾರರು ಚಿತ್ತಾ ಗ್ರಾಮದ ನಿವಾಸಿಯಾಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಅದೇ ಗ್ರಾಮದಲ್ಲಿ ನೆಲೆಸಿ ಚುನಾವಣೆ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಲ್ಲಿ ಖಾಸಗಿ ವ್ಯಕ್ತಿಯಿಂದ ದೂರು ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.