ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಸರಿಯಲ್ಲ. ದ್ವೇಷ ಭಾಷಣ ಅಂತಹ ಪ್ರಕರಣಗಳನ್ನು ನೋಡಲು ಪೊಲೀಸರಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ದಳ್ಳಾಳಿಗಳಿಂದ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಲಿ. ಪೊಲೀಸರ ಕೆಲಸವೇ ಕಾನೂನು ಕಾಪಾಡೋದು. ನೀವ್ಯಾಕೆ ಆ ಕೆಲಸ ಮಾಡ್ತೀರಿ?. ನೈತಿಕ ಪೊಲೀಸ್ ಗಿರಿ ಮಾಡಬಾರದು ಎಂದು ತಿಳಿಸಿದ್ದೇವೆ. ಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದು ಯಾರು?. ಏಕೆ ಅಂತ ಮಾಹಿತಿ ಪಡೆದು ಕ್ರಮ ತಗೋತೇವಿ ಎಂದು ಸಚಿವರು ತಿಳಿಸಿದರು.
ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಪೊಲೀಸರು ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ತಗೋತಾರೆ. ಕಾನೂನು ವಿರೋಧಿ ಇದೆಯಾ?. ಎಫ್ಐಆರ್ ಮಾಡಬೇಕಾ ಎಂದು ಪೊಲೀಸರು ಪರಿಶೀಲಿಸಿ ಕ್ರಮ ತಗೋತಾರೆ. ಕಾನೂನು ಬಾಹಿರ ಅನಿಸಿದರೆ ಎಫ್ಐಆರ್ ಮಾಡ್ತಾರೆ ಎಂದರು.
ಹಸು ಕೆಚ್ಚಲು ಕುಯ್ಯುವ ಪ್ರಕರಣ ಕುರಿತು ಮಾತನಾಡಿದ ಸಚಿವರು, ನಮ್ಮ ಸರ್ಕಾರ ಅವರ ಸರ್ಕಾರ ಅನ್ನೋ ಪ್ರಶ್ನೆ ಬರೋಲ್ಲ. ಸಮಾಜದಲ್ಲಿ ಇಂಥ ಘಟನೆಗಳು ನಡೆದಾಗ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಕೃತ್ಯ ಎಸಗಿದ್ದಾರೋ ಅವರ ಮೇಲೆ ಸೂಮೋಟೋ ಕೇಸ್ ದಾಖಲಿಸಿ ಕ್ರಮ ತಗೋತಾರೆ ಎಂದು ತಿಳಿಸಿದರು.
ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಕಟ್ಟುನಿಟ್ಟಾಗಿ ಮಾತನಾಡದಂತೆ ಶಾಸಕರಿಗೆ ಹೇಳಬಹುದು. ರಾಜ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆದಾಗ ಹೈಕಮಾಂಡ್ ಸರಿಪಡಿಸುತ್ತೆ. ಹಿಂದೆಯೂ ಇಲಾಖಾ ಪ್ರಗತಿ ಬಗ್ಗೆ ಹೈಕಮಾಂಡ್ ನವರು ಬಂದು ಮಾಹಿತಿ ಪಡೀತಿದ್ರು. ನಮಗೆಲ್ಲ ಮಾರ್ಗದರ್ಶನ ಮಾಡೋರೇ ಹೈಕಮಾಂಡ್. ಹಾಗಂತ ಸಿಎಂ ಅವರು ಹಿಡಿತ ಕಳ್ಕೊಂಡಿದ್ದಾರೆ ಅಂತ ಅನ್ಕೋಬಾರದು. ಹೈಕಮಾಂಡ್ನವರು ಬಂದಾಗ ನಮ್ಮ ಆಡಳಿತ ಹೇಗಿದೆ ಅಂತ ಅರಿವಾಗುತ್ತದೆ ಎಂದು ಸಚಿವರು ಸೂಚ್ಯವಾಗಿ ತಿಳಿಸಿದರು.
ಯಾವ ಉದ್ದೇಶಕ್ಕೆ ಸುರ್ಜೇವಾಲಾ ಅವರನ್ನು ಕರೆಸಿದ್ದಾರೆ ಅಂತ ಗೊತ್ತಿಲ್ಲ. ಪಕ್ಷ ಸಂಘಟನೆ ಬಗ್ಗೆ ಸುರ್ಜೇವಾಲಾ ಮಾತಾಡಬಹುದು. ಜಿ.ಪಂ, ತಾ.ಪಂ ಚುನಾವಣೆ ಬರ್ತಿದೆ. ಅದರ ಬಗ್ಗೆ ಮಾತಾಡಬಹುದು. ಕೆಲವು ಸಂದರ್ಭದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡ್ತಾರೆ. ಅದು ಅವರ ಕೆಲಸ. ಸಣ್ಣಪುಟ್ಟ ವ್ಯತ್ಯಾಸಗಳು ಬಂದಾಗ ಹೈಕಮಾಂಡ್ನವರು ಮಾತನಾಡುವುದು ಸಹಜ. ನಾನು ಸುರ್ಜೇವಾಲಾರ ಭೇಟಿಗೆ ಸಮಯ ಕೇಳಿದ್ದೇನೆ. ಬರುವಂತೆ ಸುರ್ಜೇವಾಲಾ ಹೇಳಿದ್ದಾರೆ. ನನ್ನ ಭೇಟಿ ವಿಚಾರ ವೈಯಕ್ತಿಕ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

