ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಧಾರಿತ ತಾಂತ್ರಿಕತೆ ಹಾಗೂ ಅಂತರ ಬೆಳೆ ಅಳವಡಿಕೆಯಿಂದ ಅಡಿಕೆ ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಮುಖ್ಯಸ್ಥ ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಜಿಲ್ಲೆಯ ರೈತರಿಗೆ ಅಡಿಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು 3 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಅವರು ಮಾತನಾಡಿದರು.
ರೈತರು ಹೆಚ್ಚಿನದಾಗಿ ಅಡಿಕೆ, ತೆಂಗು ಮತ್ತು ಬಾಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ಮೂರು ದಿನಗಳ ತರಬೇತಿಯಲ್ಲಿ ನೀಡುವ ತಾಂತ್ರಿಕ ಮಾಹಿತಿ ಮತ್ತು ಯಶಸ್ವಿ ಪ್ರಗತಿಪರ ರೈತರ ಅನುಭವ ಹಾಗೂ ವಿವಿಧ ಅಂತರ ಬೆಳೆಗಳನ್ನು ಕುರಿತ ಮಾಹಿತಿಯನ್ನು ರೈತರು ಸದುಪಯೋಗ ಪಡೆದುಕೊಂಡು ತಮ್ಮ ತಾಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ತುಮಕೂರು ತಾಲ್ಲೂಕಿನ ಬೆಳ್ಳಾವಿ ಕ್ರಾಸ್ ಹತ್ತಿರವಿರುವ ಕುರಿಕೆಂಪನಹಳ್ಳಿ ಗ್ರಾಮದ ಪ್ರಗತಿಪರ ರೈತ ಹಫೀಜ್ ಉಲ್ಲಾ ಖಾನ್ ಮಾತನಾಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಮತ್ತು ವಿಶಮುಕ್ತ ಪರಿಸರ ಉಳಿಸಲು ರೈತರು ಸಾವಯವ ಅಥವಾ ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಅತ್ಯವಶ್ಯಕವಾಗಿದೆ. ಕೃಷಿ ಸ್ವತಃ ನಾಟಿ ಹಸುಗಳನ್ನು ಸಾಕಿ ಅವುಗಳ ಸಗಣಿ ಮತ್ತು ಗಂಜಲಿನಿಂದ ಜೀವಾಮೃತ ಮಾಡಿ ಬಳಸುತ್ತಿದ್ದು, ಅಡಿಕೆಯಲ್ಲಿ ಅಂತರ ಬೆಳೆಯಾಗಿ ಜಾಕಾಯಿ, ಏಲಕ್ಕಿ ಮತ್ತು ಮೆಣಸು ಬೆಳೆಯುವುದು ಸೂಕ್ತವೆಂದರು. ಕಳೆ ನಾಶಕ ಬಳಕೆ ಮಾಡದೆ ಅವಶ್ಯವಿದ್ದಾಗ ಕಳೆಗಳನ್ನು ಕಳೆ ಕಟಾವು ಯಂತ್ರದ ಮೂಲಕ ಕಟಾವು ಮಾಡಿ ಅಲ್ಲೆ ಭೂಹೊದಿಕೆಯಾಗಿ ಬಿಡುವುದು ಉತ್ತಮ ಎಂದರು.
ಮಸಣಾಪುರದ ಪ್ರಗತಿಪರ ರೈತ ಮೃತ್ಯುಂಜಯಪ್ಪನವರು ಮಾತನಾಡಿ ತೆಂಗು ಮತ್ತು ಅಡಿಕೆಯ ತಾಕಿನಲ್ಲಿ 100 ಕ್ಕೂ ಹೆಚ್ಚಿನ ವಿವಿಧ ಜಾತಿಯ ಹಣ್ಣು ಮತ್ತು ಸಂಬಾರು ಬೆಳೆಗಳನ್ನು ಮಿಶ್ರ ಹಾಗೂ ಬಹು ಮಹಡಿ ಪದ್ದತಿಯಲ್ಲಿ ಬೆಳೆಯುತ್ತಿದ್ದು, ಎರೆಹುಳು ಗೊಬ್ಬರ ತಯಾರಿಕೆ, ಜೀವಾಮೃತ, ಗಂಜಲು, ಹುಳಿಮಜ್ಜಿಗೆಯ ಬಳಕೆ ಮತ್ತು ವೆಲವೆಟ್ ಬಿನ್ಸ್, ಅಲಸಂಧೆ, ಹುರಳಿ ಹಾಗೂ ಅಡಿಕೆ ಮತ್ತು ತೆಂಗಿನ ತ್ಯಾಜ್ಯವನ್ನು ಭೂಹೊದಿಕೆಯಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ತೇವಾಂಶ ಮತ್ತು ಫಲವತ್ತತೆ ಕಾಪಾಡಲು ಸಹಕಾರಿಯಗಿದೆಯಲ್ಲದೆ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆಂದರು.
ಚಳ್ಳಕೆರೆ ತಾಲ್ಲೂಕಿನ ಪಿಲ್ಲಹಳ್ಳಿಯ ಚಿತ್ರಲಿಂಗಪ್ಪ ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಹಾಗೂ ತಾಳ್ಮೆಯಿಂದ ರೈತರು ಬೇಸಾಯ ಮಾಡಿದರೆ ಉತ್ತಮ ಕೃಷಿಕರಾಗಬಹುದು. ಪ್ರಗತಿಪರ ಕೃಷಿಕರ ತಾಕುಗಳಿಗೆ ಭೇಟಿ ನೀಡಿ ಸದರಿ ರೈತರ ಅನುಭವನ್ನು ತೆಗೆದುಕೊಂಡು ಮತ್ತು ವಿವಿಧ ತಾಂತ್ರಿಕ ತರಬೇತಿಗಳಿಂದ ಪಡೆದ ಮಾಹಿತಿಯನ್ನು ತಮ್ಮ ತಾಕಿನಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ರೈತರು ತಾವು ಬೆಳೆದ ಉತ್ತನ್ನಗಳನ್ನು ತಾವೇ ಮಾರಾಟ ಮಾಡುವ ಕಲೆ ಕಲಿತರೆ ಉತ್ತಮ ಬೆಲೆ ದೊರೆಯತ್ತದೆ. ಕೃಷಿಯನ್ನು ಶ್ರದ್ದೆಯಿಂದ ಮಾಡಿದರೆ ಋಷಿತ್ವ ಕಾಣಬಹುದು ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು.
ಹಿರಿಯೂರು ತಾಲ್ಲೂಕಿನ ಹೇಮದಳದ ಪ್ರಗತಿಪರ ರೈತ ಸಿದ್ದಪ್ಪ ಮಾತನಾಡಿ ಸಮಗ್ರ ಕೃಷಿ ಪದ್ದತಿ ಅಳವಡಿಕೆಯಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯವಿದ್ದು, ಸ್ವಾವಲಂಬನೆಯ ಜೀವನಕ್ಕೆ ಒಂದು ನಾಟಿ ಹಸುವಿರಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಮರಗಳನ್ನು ನೆಡಬೇಕು. ರೈತರು ಸಮರ್ಥ ನೀರಿನ ನಿರ್ವಹಣೆ ಹಾಗೂ ಅದರ ಮಿತ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ದೇವರಮರಿಕುಂಟೆ ಗ್ರಾಮದ ಡಾ.ಆರ್.ಎ.ದಯಾನಂದ ಮೂರ್ತಿ ಮಾತನಾಡಿ, ಸಾಧನೆ ಎಂಬುದು ಸಾಧಕರ ಸೊತ್ತು, ಕಡಿಮೆ ನೀರಿನಲ್ಲಿ ಹನಿನೀರಾವರಿ ಪದ್ದತಿ ಬಳಸಿ ಅಡಿಕೆ ಮತ್ತು ತೆಂಗಿನಲ್ಲಿ ಅಂತರ ಮತ್ತು ಮಿಶ್ರ ಬೆಳೆಪದ್ದತಿ ಅಳವಡಿಸಿ ಸಮಗ್ರ ಕೃಷಿ ಪದ್ದತಿಯಲ್ಲಿ ಸ್ವಾವಲಂಬನೆಯಿಂದ ಆರ್ಥಿವಾಗಿ ಮುನ್ನೆಡಯಲು ಸಾಧ್ಯವಿದೆ ಎಂದರು.
ಹಾಲಗೊಂಡನಹಳ್ಳಿಯ ರುದ್ರಮುನಿಯಪ್ಪ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಅಡಿಕೆ ಮತ್ತು ತೆಂಗಿನಲ್ಲಿ ಹುರಳಿ, ಅಲಸಂಧೆ, ಡಯಾಂಚ, ಸೆಣಬು, ವೆಲ್ವೆಟ್ ಬೀನ್ಸ್ ನಂತಹ ಜೀವಂತ ಹೊದಿಕೆ ಅಥವಾ ಇತರೆ ಕೃಷಿ ತ್ಯಾಜ್ಯಗಳನ್ನು ಹರಡುವುದರಿಂದ ಭೂಮಿಯಲ್ಲಿ ಜೈವಿಕ ಕ್ರಿಯೆಗಳು ಹೆಚ್ಚಾಗಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ವೃದ್ದಿಯಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದರೊಂದಿಗೆ ಸಾವಯವ ಇಂಗಾಲ ಅಂಶ ಹೆಚ್ಚಾಗುತ್ತದೆ. ರೈತರು 2-3 ಜೇನು ಕುಟುಂಬಗಳನ್ನು ಇಟ್ಟು ಕೊಳ್ಳ್ಳುವುದರಿಂದ ಉತ್ತಮ ಪರಾಗ ಸ್ಪರ್ಶದಿಂದ ಶೇ 10 ರಿಂದ 15 ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದೆಂದರು.
ಕಾರ್ಯಗಾರದಲ್ಲಿ ಹಿರಿಯೂರು ತೋಟಗಾರಿಕೆ ಕಾಲೇಜು ಡೀನ್ ಹಾಗೂ ಸಸ್ಯ ರೋಗಶಾಸ್ತ್ರಜ್ಞ ಡಾ.ಸುರೇಶ್ ಏಕಬೋಟೆ, ಕೀಟಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ, ಅಡಿಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಬರುವ ಪ್ರಮುಖ ರೋಗಗಳ ಹಾಗೂ ಕೀಟ ನಿರ್ವಹಣೆ ಕುರಿತು ತರಬೇತಿ ನೀಡಿದರು.
ತೋಟಗಾರಿಕೆ ವಿಜ್ಞಾನಿ ಡಾ. ಮಹಾಂತೇಶ್ ಸದರಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಅಂತರ ಬೆಳೆ ಮತ್ತು ಅನುಸರಿಸಬಹುದಾದ ಸಾವಯವ ಪದ್ದತಿಗಳ ಕುರಿತು ರೈತರಿಗೆ ಮನವರಿಕೆ ಮಾಡಿದರು.

