ಚಂದ್ರವಳ್ಳಿ ನ್ಯೂಸ್, ಆನೇಕಲ್(ಬೆಂಗಳೂರು):
ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದಿದೆ.
ಆನೇಕಲ್ ತಾಲೂಕಿನಬನ್ನೇರುಘಟ್ಟದ ರಂಗನಾಥ ಬಡಾವಣೆಯ 41 ವರ್ಷದ ಮಂಜು ಪ್ರಕಾಶ್ ಹಾವು ಕಚ್ಚಿ ಸಾವನ್ನಪ್ಪಿದ ದುರ್ದೈವಿ.
ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಯಾಗಿರುವ ಮಂಜು ಪ್ರಕಾಶ್ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಕ್ಲಾಗ್ಸ್ ಚಪ್ಪಲಿ ಧರಿಸಿ ಹೋಗುತ್ತಿದ್ದ ವೇಳೆ
ಅದರಲ್ಲಿ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿದೆ. ಮಂಜು ಪ್ರಕಾಶ್ಗೆ 2016ರಲ್ಲಿ ಸಂಭವಿಸಿದ ಅಪಘಾತದ ಪರಿಣಾಮ ಕಾಲಿನ ಸ್ಪರ್ಶ ಜ್ಞಾನ ಇಲ್ಲದಾಗಿತ್ತು. ಹೀಗಾಗಿ ಹಾವು ಕಚ್ಚಿದ ಅನುಭವ ಗಮನಕ್ಕೆ ಬಾರದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಾವು ಕಾಲಿನ ಹೆಬ್ಬರಳಿಗೆ ಕಡಿದಿದೆ. ಸ್ಪರ್ಶ ಜ್ಞಾನ ಇಲ್ಲದಿದ್ದರಿಂದ ಮುಕ್ಕಾಲು ಗಂಟೆಗಳ ಕಾಲ ಅದೇ ಚಪ್ಪಲಿಯಲ್ಲಿ ಹಾವಿನೊಂದಿಗೆ ಓಡಾಡಿ ಮನೆಗೆ ಬಂದಿದ್ದಾರೆ. ಆಗಲೂ ಗೊತ್ತಾಗದೇ ಮನೆಗೆ ಬಂದು ಮಲಗಿದ್ದ ಪ್ರಕಾಶ್ ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಹಾಗೇ ಹಾವಿನ ಮರಿ ಕೂಡ ಚಪ್ಪಲಿಯಲ್ಲಿಯೇ ಕಾಲಿನ ಒತ್ತಡಕ್ಕೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕೂಡಾ ನಡೆದಿದೆ.
ಇದಾದ ಸ್ವಲ್ಪ ಸಮಯದ ಬಳಿಕ ಮನೆಗೆ ಬಂದ ಕಾರ್ಮಿಕನೊಬ್ಬ ಮಂಜು ಪ್ರಕಾಶ್ ಚಪ್ಪಲಿಯಲ್ಲಿ ಹಾವಿರುವುದನ್ನು ಕಂಡು ಮಂಜು ಅವರ ತಾಯಿ-ತಂದೆಗೆ ತಿಳಿಸಿದ್ದಾನೆ.
ತಕ್ಷಣ ಮಲಗಿದ್ದ ಮಗನನ್ನು ನೋಡಲು ಹೋದಾಗ ಮಂಜು ಪ್ರಕಾಶ್ ಅವರ ಬಾಯಲ್ಲಿ ನೊರೆ ಬಂದಿದ್ದು, ಸಾವನ್ನಪ್ಪಿದ್ದರು. ಕೂಡಲೇಎರಡು-ಮೂರು ಆಸ್ಪತ್ರೆಗಳಿಗೆ ಸಾಗಿಸಿ ಪ್ರಯತ್ನಿಸಲಾಗಿತ್ತು. ಆದರೆ ಮಂಜು ಅವರ ಸಾವನ್ನಪ್ಪಿದ್ದರು ಎನ್ನಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

