![](https://www.chandravallinews.com/wp-content/uploads/2024/06/WhatsApp-Image-2024-06-25-at-10.26.27-PM-3-1024x543.jpeg)
i
ಜೀವನ ನಡೆಸುವುದಕ್ಕಿಂತ ಅದನ್ನು ಸಾರ್ಥಕ ಮಾಡಿಕೊಳ್ಳಬೇಕು: ಶೃಂಗೇರಿ ಶ್ರೀಗಳು
ಚಂದ್ರವಳ್ಳಿ ನ್ಯೂಸ್, ಸಾಗರ :
ಮನುಷ್ಯರು ತಮ್ಮ ಜೀವನವನ್ನು ಲೌಕಿಕವಾಗಿ ನಡೆಸುವುದಕ್ಕಿಂತ ಅದನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಶೃಂಗೇರಿ ಪೀಠದ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು ನುಡಿದರು.
ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ಶಾರದಾಂಬಾ ದೇವಸ್ಥಾನದ ಆವರಣದಲ್ಲಿ ಚಾರೋಡಿ ಕೊಂಕಣಿ ಆಚಾರ್ ಸಮಾಜದಿಂದ ನಿರ್ಮಿಸಲಾದ ನೂತನ ಶಾರದಾಂಬಾ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಶಾರದೆ ಸನ್ನಿಧಿಯಲ್ಲಿ ನಡೆದ ಪುನರ್ ಅಷ್ಟಬಂಧ, ಕುಂಭಾಭಿಷೇಕ, ಸಹಸ್ರ ಮೋದಕ ಗಣಹವನ, ತತ್ವ ಕಲಾಭಿವೃದ್ಧಿ ಹೋಮ, ಪೂರ್ಣಾಹುತಿ, ಮೂಲಮಂತ್ರ ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ತನ್ನ ಜೀವನ ನಡೆಸಲು ವಿವಿಧ ಉದ್ಯೋಗದ ಮೂಲಕ ಹಣ ಸಂಪಾದಿಸುತ್ತಾನೆ. ತನಗೆ ಬೇಕಾದ ಆಸ್ತಿ, ಮನೆಗಳನ್ನು ಮಾಡಿಕೊಳ್ಳುತ್ತಾನೆ. ಜೀವನ ಚೆನ್ನಾಗಿ ಮಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾನೆ. ಪ್ರಶಸ್ತಿ, ಹೆಸರು ಇವೆಲ್ಲ ಈ ಶರೀರ ಇರುವವರೆಗೆ ಇರುತ್ತದೆ. ಅವ್ಯಾವವೂ ಶರೀರ ಬಿಟ್ಟ ನಂತರ ಬರುವುದಿಲ್ಲ. ಆದರೆ ಜೀವನದ ಇನ್ನೊಂದು ಮುಖ ಎಂದರೆ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು. ವಿವಿಧ ಧರ್ಮಾಚರಣೆಯಿಂದ ಪುಣ್ಯ ಸಂಪಾದನೆ ಸಾಧ್ಯ. ಇದು ನಾವು ಶರೀರ ಬಿಟ್ಟ ನಂತರವೂ ನಮ್ಮ ಜತೆ ಬರುತ್ತದೆ. ಧಾರ್ಮಿಕ ಆಚರಣೆಯಿಂದ ನಮ್ಮ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದು ಎಂದರು.
ಬದುಕಿನ ಒಂದಿಷ್ಟು ಸಮಯವನ್ನು ಧರ್ಮಾಚರಣೆಗೆ ಮೀಸಲಿಡಬೇಕು. ದೇವರ ಆರಾಧನೆ ಮತ್ತು ಇನ್ನೊಬ್ಬರಿಗೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾರಿಗೆ ಉಪಕಾರ ಮಾಡಲಾಗಿದ್ದರೂ ಸುಮ್ಮನಾದರೂ ಇರಬೇಕು ಎಂದು ಹೇಳಿದರು.
ಚಾರೋಡಿ ಕೊಂಕಣಿ ಆಚಾರ್ ಸಮಾಜದ ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ, ಶಾರದಾಂಬಾ ವಾಣಿಜ್ಯ ಸಂಕೀರ್ಣ ಊರಿಗೊಂದು ಮೆರಗು ನೀಡಿದೆ. ಸಮಾಜದ ಏಳಿಗೆಗೆ ಸದಾ ತಮ್ಮ ಆಶೀರ್ವಾದ ಬೇಡುತ್ತೇವೆ ಎಂದರು.
ಚಾರೋಡಿ ಕೊಂಕಣಿ ಆಚಾರ್ ಸಮಾಜದ ಪ್ರಮುಖರನ್ನು ಶ್ರೀಗಳು ಗೌರವಿಸಿದರು.
ಇದೇ ಸಂದರ್ಭದಲ್ಲಿ ಲೇಖಕ ಶಾರದಾ ಸುತ (ವಿ.ಶಂಕರ್) ಬರೆದ ಚಾರೋಡಿ ಕೊಂಕಣಿ ಆಚಾರ್ ಸಮಾಜದ ಜನಪ್ರತಿನಿಧಿಗಳು ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್, ಶ್ರೀ ಶಾರದಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿ.ಚಂದ್ರಶೇಖರ್, ಪ್ರಮುಖರಾದ ಕೃಷ್ಣಮೂರ್ತಿ ವಾಮನ ಆಚಾರ್, ರಾಘವೇಂದ್ರ, ಹರೀಶ್, ಜಿ.ಕುಮಾರ್ ಹಾಗೂ ಸಮಾಜದ ಗಣ್ಯರು ಹಾಜರಿದ್ದರು.